ಕುಮಾರ್ ಬಂಗಾರಪ್ಪ ನನ್ನ ಅಣ್ಣ, ಸೊರಬದಲ್ಲಿ ರಾಷ್ಟ್ರೀಯ ಪಕ್ಷಗಳ ನಡುವೆ ಸ್ಪರ್ಧೆ: ಮಧು ಬಂಗಾರಪ್ಪ

Update: 2023-03-02 12:20 GMT

ಶಿವಮೊಗ್ಗ: ಈ ಬಾರಿ ಸೊರಬದಲ್ಲಿ ಸಹೋದರರ ಸವಾಲ್ ನಡೆಯಲ್ಲ.ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಚುನಾವಣೆ ನಡೆಯಲಿದೆ.ಕುಮಾರ್ ಬಂಗಾರಪ್ಪ ನನ್ನ ಅಣ್ಣ ಎಂದು ಎಐಸಿಸಿ ಸದಸ್ಯ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು

ಕಲ್ಲಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು,ಸೊರಬದಲ್ಲಿ ಆಡಳಿತ ಯಂತ್ರ ಕುಸಿತಗೊಂಡಿದೆ.ಸೊರಬದಲ್ಲಿ ಗೆಲುವಿನ ವಾತಾವರಣವಿದೆ. ಅದು ಅಣ್ಣ ತಮ್ಮಂದಿರ ಹೋರಾಟವಲ್ಲ. ನಾನು ಒಬ್ಬ ರಾಷ್ಟ್ರೀಯ ಪಕ್ಷದ ವ್ಯಕ್ತಿಯ ವಿರುದ್ಧ ಹೋರಾಡುತ್ತಿದ್ದೇನೆ ಎಂದರು.

ಈ ಬಾರಿ ಸೊರಬದ ಜನರು ನನ್ನನ್ನು ಅತಿಹೆಚ್ಚು ಬಹುಮತದಿಂದ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ನನ್ನ ಹುಟ್ಟುಹಬ್ಬಕ್ಕೆ ವೋಟು ಹಾಕುವುದೇ ನಗೆ ಬಹುಮಾನ ನೀಡಿದ ಹಾಗೆ. ನಾನು ಅವರಿಗೆ ಎಂದಿಗೂ ಚಿರಋಣಿಯಾಗಿರುತ್ತೇನೆ. ತಂದೆಯ ನೆರಳಿನಲ್ಲಿ ಬಂದ ನನಗೆ ಅವರೇ ಗುರುಗಳು. ಅವರ ಆಶೀರ್ವಾದ ನನಗಿದೆ. ಕಾಂಗ್ರೆಸ್ ಪಕ್ಷ ನನಗೆ ಅತಿದೊಡ್ಡ ಅಧಿಕಾರಗಳನ್ನು ನೀಡಿದೆ. ಆ ನಂಬಿಕೆ ಉಳಿಸಿಕೊಳ್ಳುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತೇನೆ ಎಂದರು.

ಸೊರಬ ತಾಲೂಕು ಕಛೇರಿ ನಾಟವನ್ನು ಯಾವುದೇ ಹರಾಜು ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಿದ್ದಾರೆ.ಇದು ಹಾಲಿ ಶಾಸಕರ ಕುಮ್ಮಕ್ಕಿನಿಂದ ನಡೆದಿದೆ.ಈ ಪ್ರಕರಣದಲ್ಲಿ ಶಾಸಕರೇ ಮೊದಲ ಆರೋಪಿ ಎಂದ ಅವರು,ಈ ಪ್ರಕರಣದ ಕುರಿತು ತನಿಖೆಯಾಗಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದು,ಹೆಮ್ಮೆಯ ವಿಚಾರ.ಆದರೆ ಜಿಲ್ಲೆಯ ಯಾವ ಸಮಸ್ಯೆಗಳ ಬಗ್ಗೆಯೂ ಮಾತನಾಡಲಿಲ್ಲ,ಇದು ಮಲೆನಾಡಿನ ಜನರಿಗೆ ಮಾಡಿದ ದ್ರೋಹ  ಎಂದು ಹೇಳಿದರು.

ವಿಮಾನ ನಿಲ್ದಾಣಕ್ಕೆ ಜಾಗ ನೀಡಿದ ರೈತರಿಗೆ ಪರಿಹಾರ ನೀಡಿಲ್ಲ.ಅವರಿಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದ ಅವರು,ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ಥರ ಭೂಮಿ ಹಕ್ಕಿನವಿಚಾರ ಪ್ರಸ್ತಾಪ ಮಾಡಿಲ್ಲ.ಶರಾವತಿ ಮುಳುಗಡೆ ಸಂತ್ರಸ್ತರ ಶಾಪ ಈ ಬಿಜೆಪಿಯವರಿಗೆ ತಟ್ಟದೆ ಬಿಡುವುದಿಲ್ಲ ಎಂದರು.

ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಮಲ್ಲಿಕಾರ್ಜುನ ನೀರು ಸಿಗದೇ ಅಸುನೀಗಿದ್ದಾರೆ.ಆದರೆ ಅವರ ಕುಟುಂಬಕ್ಕೆ ಸಾಂತ್ವಾನವನ್ನು ಹೇಳಿಲ್ಲ. ಸಾವಿನ ಮನೆಯ ರಾಜಕಾರಣ ಮಾಡುವವರು ಬಿಜೆಪಿಯವರು. ತಕ್ಷಣವೇ ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೆರವು ನೀಡಲಿ ಎಂದು ಆಗ್ರಹಿಸಿದರು.

'ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರ':

ಬಿಜೆಪಿಯವರು ಇತರೆ ಪಕ್ಷಗಳ ಶಾಸಕರನ್ನು ಖರೀದಿ ಮಾಡಲು ಆಗದಷ್ಟು ಬಹುಮತವನ್ನು ಕಾಂಗ್ರೆಸ್ ಈ ಬಾರಿ ಪಡೆಯುತ್ತದೆ ಎಂದ ಅವರು, ಬಿಜೆಪಿ ಯಾವಾಗಲೂ ಹಿಂಬಾಗಿಲಿನಿಂದಲೇ ಅಧಿಕಾರ ಪಡೆದಿದೆ ಆದರೆ ಈ ಬಾರಿ ಹಾಗೆ ಆಗುವುದಿಲ್ಲ. ನಾವು ಈಗ ಎಷ್ಟು ಸಂಖ್ಯೆಯಲ್ಲಿ ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ಏಕೆಂದರೆ ಅದು ಅವರಿಗೆ ಗೊತ್ತಾದರೆ ಈಗಿನಿಂದಲೇ ಶಾಸಕರ ಖರೀದಿಯಲ್ಲಿ ತೊಡಗುತ್ತಾರೆ. ಆದರೆ ಈ ಬಾರಿ ಶಾಸಕರನ್ನು ಕೊಂಡುಕೊಳ್ಳದಿರುವಷ್ಟು ಬಹುಮತವನ್ನು ಕಾಂಗ್ರೆಸ್ ಪಡೆಯುತ್ತದೆ ಎಂದರು.

ಈ ಸಂದರ್ಭದಲ್ಲಿ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮಧು ಬಂಗಾರಪ್ಪ ಅವರಿಗೆ ಹೂಗುಚ್ಚ ಹಾಗೂ ಶಾಲು ಹೊದಿಸುವುದರ ಮೂಲಕ ಹುಟುಹಬ್ಬಕ್ಕೆ ಶುಭ ಕೋರಿದರು. ಕಾಂಗ್ರೆಸ್ ಮುಖಂಡರುಗಳಾದ ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ಎನ್.ರಮೇಶ್, ಜಿ.ಡಿ.ಮಂಜುನಾಥ್, ರಮೇಶ್ ಶಂಕರಘಟ್ಟ, ಬಲದೇವಕೃಷ್ಣ, ದೀಪಕ್ ಸಿಂಗ್, ಖಲೀಂ, ವೈ.ಹೆಚ್. ನಾಗರಾಜ್, ಶ್ರೀನಿವಾಸ ಕರಿಯಣ್ಣ, ಪಿ.ಓ. ಶಿವಕುಮಾರ್, ವೇದಾ ವಿಜಕುಮಾರ್, ಕಲಗೋಡು ರತ್ನಾಕರ್ ಸೇರಿದಂತೆ ಹಲವರಿದ್ದರು.

Similar News