ಟಿಪ್ಪುವಿನ ಸಾಧನೆಗಳನ್ನು ಮರೆಮಾಚಲು ಆರೆಸ್ಸೆಸ್‌ನಿಂದ ಉರಿಗೌಡ, ನಂಜೇಗೌಡ ಎಂಬ ಇಬ್ಬರ ಸೃಷ್ಟಿ: ಸಾಹಿತಿ ಮುಕುಂದರಾಜ್

''ಬಿಜೆಪಿ, ಆರೆಸ್ಸೆಸ್‌ನಿಂದ ಜಾತಿ ರಾಜಕಾರಣ''

Update: 2023-03-02 18:28 GMT

ಮಂಡ್ಯ, ಮಾ.2: ಬಿಜೆಪಿ, ಆರೆಸ್ಸೆಸ್ ಮಾಡುತ್ತಿರುವುದು ವೈದಿಕ ಹಾಗೂ ಜಾತಿ ರಾಜಕಾರಣ ಎಂದು ಸಾಹಿತಿ ಹಾಗೂ ನಾಟಕಕಾರ ಮುಕುಂದರಾಜ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವೈದಿಕರ ಪರವಾದ ರಾಜಕೀಯ ಮಾಡುತ್ತಿದೆ, ಇದನ್ನು ಈ ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು. ಟಿಪ್ಪು ಸುಲ್ತಾನನ ಸಾಧನೆಗಳನ್ನು ಮರೆಮಾಚಲು ಉರಿಗೌಡ ಹಾಗೂ ನಂಜೇಗೌಡ ಎಂಬ ಇಬ್ಬರು ವ್ಯಕ್ತಿಗಳನ್ನು ಆರೆಸ್ಸೆಸ್ ಮತ್ತು ಬಿಜೆಪಿಯವರು ಸೃಷ್ಟಿ ಮಾಡಿದ್ದಾರೆ. ಸಂಘಪರಿವಾರದ ಮುಖಂಡರು ಈ ಬಗ್ಗೆ ಇಲ್ಲಸಲ್ಲದ ಕಟ್ಟುಕತೆಗಳನ್ನು ಹೆಣಿದು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದುವರೆಗೆ ದಾಖಲಾಗಿರುವ ಟಿಪ್ಪುವರೆಗಿನ ಇತಿಹಾಸದಲ್ಲಿ ಉರಿಗೌಡ ಹಾಗೂ ನಂಜೇಗೌಡ ಎಂಬ ವ್ಯಕ್ತಿಗಳ ಹೆಸರುಗಳು ಎಲ್ಲಿಯೂ ಕಂಡು ಬರುವುದಿಲ್ಲ. ಈ ಹೆಸರುಗಳನ್ನು ಉದ್ದೇಶ ಪೂರ್ವಕವಾಗಿಯೇ ತೇಲಿ ಬಿಡಲಾಗುತ್ತಿದೆ. ಆ ಮೂಲಕ ಒಕ್ಕಲಿಗರನ್ನು ಕೊಲೆ ಗಡುಕರು ಎಂದು ಬಿಂಬಿಸಿ ಬಿಜೆಪಿ-ಆರೆಸ್ಸೆಸ್‌ನವರು ವೈದಿಕರೇ ಶ್ರೇಷ್ಠ ಎಂದು ಹೇಳಲು ಹೊರಟಿದ್ದಾರೆ ಎಂದು ದೂರಿದರು.

ಲಾವಣಿಗಳಲ್ಲಿ ಟಿಪ್ಪು ಜೀವನ ಚರಿತ್ರೆ ದಾಖಲು: 18ನೇ ಶತಮಾನದಲ್ಲಿಯೇ ಟಿಪ್ಪುವಿನ ಜೀವನ ಚರಿತ್ರೆ, ಹೋರಾಟಗಳು ಮತ್ತು ಸಾಧನೆಗಳು ಜನಪದರ ಲಾವಣಿಗಳಲ್ಲಿ ದಾಖಲಾಗಿವೆ. ಇವುಗಳು ಪ್ರಮುಖವಾದ ಮೌಖಿಕ ಸಾಹಿತ್ಯಾಧಾರಗಳಾಗಿವೆ. ಇವುಗಳನ್ನು ಯಾರು ಕೂಡ ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಿರುವಾಗ ಬಿಜೆಪಿ, ಆರೆಸ್ಸೆಸ್‌ನವರು ನೂರು ಬಾರಿ ಸುಳ್ಳುಗಳನ್ನು ಹೇಳಿ ಸತ್ಯ ಎಂದು ನಿರೂಪಿಸಲು ಸಾಧ್ಯವಿಲ್ಲ ಎಂದರು.

ಟಿಪ್ಪು ದೀನ-ದಲಿತರು, ಹಿಂದುಳಿದವವರಿಗೆ ಭೂಮಿ ಹಂಚಿಕೆ ಮಾಡಿದ್ದ. ಅಲ್ಲದೆ, ಶ್ಯಾನುಭೋಗರ ದುರಾಡಳಿತ ಹೆಚ್ಚಿದಾಗ ಶೂದ್ರ ಜನಾಂಗಕ್ಕೆ ಸೇರಿದ ವ್ಯಕ್ತಿಗಳನ್ನು ಪಟೇಲರು ಮತ್ತು ಗೌಡರನ್ನಾಗಿ ನೇಮಿಸಿದ್ದ. ಈ ಕ್ರಮಗಳು ಟಿಪ್ಪುವಿನ ಜನಪರ ಕಾರ್ಯಗಳಿಗೆ ಸಾಕ್ಷಿಯಾಗಿವೆ. ಇಂತಹ ಉದಾರ ಮನೋಭಾವದ ಟಿಪ್ಪುವನ್ನು ಕೆಲವರು ರಾಜಕೀಯ ತೆವಲಿಗಾಗಿ ಖಳನಾಯಕನಂತೆ ಚಿತ್ರಿಸಲು ಹೊರಟ್ಟಿದ್ದಾರೆ. ಆದ್ದರಿಂದ ಈ ಬಗ್ಗೆ ನಾಡಿನ ಜನರು ಎಚ್ಚರಿಕೆಯಿಂದಿರಬೇಕೆಂದು ಅವರು ಹೇಳಿದರು.

 ಮರಡು ಸಹೋದರರ ಚಿತ್ರಗಳ ಅಪಪ್ರಚಾರ: ವಕೀಲ ರಮೇಶ್‌ಗೌಡ ಮಾತನಾಡಿ, ತಮಿಳುನಾಡಿನ ಶಿವಗಂಗೈ ಸಂಸ್ಥಾನದ ರಾಜರಾಗಿದ್ದ ಮರಡು ಸಹೋದರರ ಚಿತ್ರಗಳನ್ನು ಬಿಜೆಪಿ ಮುಖಂಡರು ಉರಿಗೌಡ, ದೊಡ್ಡನಂಜೇಗೌಡ ಎಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು. ಮರಡು ಸಹೋದರರ ಚಿತ್ರಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿದರು.

ಪೆರಿಯ ಮರಡು, ಚಿನ್ನ ಮರಡು ಎಂಬ ಸಹೋದರರು ಬ್ರಿಟೀಷರ ವಿರುದ್ಧ ಗೆರಿಲ್ಲಾ ಯುದ್ಧ ಸಾರಿದ್ದರು. ಅವರನ್ನು 1801ರಲ್ಲಿ ಗಲ್ಲಿಗೇರಿಸಲಾಯಿತು. 2004ರಲ್ಲಿ ಅವರ ಹೆಸರಿನಲ್ಲಿ ಅಂಚೆ ಚೀಟಿ ತರಲಾಗಿದೆ. ’ಶಿವಗಂಗಾ ಸೀಮೈ’ ಎಂಬ ತಮಿಳು ಚಲನಚಿತ್ರವನ್ನೂ ನಿರ್ಮಿಸಲಾಗಿದೆ. ಇತಿಹಾಸ ಪ್ರಸಿದ್ಧ ಸ್ವಾತಂ ತ್ರ ಹೋರಾಟಗಾರರ ಚಿತ್ರವನ್ನು ದುರುಪಯೋಗ ಮಾಡಿಕೊಂಡಿರುವ ಬಿಜೆಪಿ ಮುಖಂಡರು ಕಾಲ್ಪನಿಕ ವ್ಯಕ್ತಿಗಳ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ, ಸಾಹಿತಿ ಕಾಳೇಗೌಡ ನಾಗವಾರ, ನ್ಯಾಯವಾದಿ ರಮೇಶ್‌ಗೌಡ, ರೇಣುಕಮ್ಮ ಭಕ್ತರಹಳ್ಳಿ, ಕನ್ನಡ ಸೇನೆಯ ಮಂಜುನಾಥ್, ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.

Similar News