ನಿರಾಶ್ರಿತರೂ ಮನುಷ್ಯರೇ, ಅವರನ್ನು ನಗರದಿಂದ ಹೊರಹಾಕಬೇಕೆಂದು ಬಯಸುತ್ತೀರ?: ಬಾಂಬೆ ಹೈಕೋರ್ಟ್‌

Update: 2023-03-03 13:31 GMT

ಮುಂಬೈ: ನಿರಾಶ್ರಿತತೆ ಜಾಗತಿಕ ಸಮಸ್ಯೆ, ಫುಟ್‌ಪಾತ್‌ಗಳಲ್ಲಿ ವಾಸಿಸುವ ನಿರಾಶ್ರಿತರು ಕೂಡಾ ಇತರರಂತೆ ಮನುಷ್ಯರು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಅದೇ ವೇಳೆ, ದಕ್ಷಿಣ ಮುಂಬೈಯ ಫುಟ್‌ಪಾತ್‌ಗಳಲ್ಲಿ ವಾಸಿಸುವ ನಿರಾಶ್ರಿತರ ವಿರುದ್ಧ ಕ್ರಮ ಕೈಗೊಳ್ಳುವ ಆದೇಶವನ್ನು ನೀಡಲು ಹೈಕೋರ್ಟ್ ನಿರಾಕರಿಸಿತು.

ನಗರದ ಫುಟ್‌ಪಾತ್‌ ಮತ್ತು ಪಾದಚಾರಿ ಮಾರ್ಗಗಳಲ್ಲಿ ನೆಲೆಸಿರುವ ಅನಧಿಕೃತ ಮಾರಾಟಗಾರರು ಮತ್ತು ಬೀದಿ ಬದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿರುವ ಕುರಿತು ಹೈಕೋರ್ಟ್‌ನಲ್ಲಿ ಸ್ವಯಂ ಪ್ರೇರಿತವಾಗಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠವು ವಿಚಾರಣೆ ಮಾಡುತ್ತಿದೆ.

ಬಾಂಬೆ ಬಾರ್ ಅಸೋಸಿಯೇಷನ್ ಸಲ್ಲಿಸಿದ ಅರ್ಜಿಯಲ್ಲಿ ದಕ್ಷಿಣ ಮುಂಬೈನ ಫೌಂಟೇನ್ ಪ್ರದೇಶದ ಬಳಿ ಫುಟ್‌ಪಾತ್‌ಗಳಲ್ಲಿ ಅನೇಕ ಜನರು ವಾಸಿಸುತ್ತಿದ್ದಾರೆ  ಎಂದು ಹೇಳಲಾಗಿದೆ. ಇದರ ವಿರುದ್ಧ ಕ್ರಮಕ್ಕಾಗಿ ನಗರ ಪೊಲೀಸರು ಮತ್ತು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗೂ ಪತ್ರ ಬರೆಯಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಯಾವ ನ್ಯಾಯಾಂಗ ಆದೇಶ ನೀಡಬಹುದು ಎಂದು ಪೀಠ ಪ್ರಶ್ನಿಸಿದೆ.

"ನಗರದಿಂದ ಬಡವರನ್ನು ತೊಲಗಿಸಬೇಕು ಎಂದು ನೀವು ಹೇಳುತ್ತಿದ್ದೀರಾ? ಇವರು ಇತರ ನಗರಗಳಿಂದ ಅವಕಾಶಗಳನ್ನು ಹುಡುಕಿಕೊಂಡು ಇಲ್ಲಿಗೆ ಬಂದವರು, ವಸತಿರಹಿತರು ಜಾಗತಿಕ ಸಮಸ್ಯೆ" ಎಂದು ನ್ಯಾಯಾಲಯ ಹೇಳಿದೆ.

"ಅವರು (ಮನೆಯಿಲ್ಲದ ವ್ಯಕ್ತಿಗಳು) ಸಹ ಮನುಷ್ಯರು. ಅವರು ಬಡವರಾಗಿರಬಹುದು ಅಥವಾ ಕಡಿಮೆ ಅದೃಷ್ಟವಂತರಾಗಿರಬಹುದು, ಆದರೆ ಅವರು ಕೂಡಾ ಮನುಷ್ಯರು, ನ್ಯಾಯಾಲಯದ ಮುಂದೆ ಅವರು ಎಲ್ಲರಂತೆ ಮನುಷ್ಯರು." ಎಂದು ನ್ಯಾಯಮೂರ್ತಿ ಪಟೇಲ್ ಹೇಳಿದರು.

ಫುಟ್‌ಪಾತ್‌ನಲ್ಲಿ ವಾಸಿಸುವ ಇಂತಹ ವ್ಯಕ್ತಿಗಳಿಗೆ ರಾತ್ರಿ ಆಶ್ರಯವನ್ನು ಒದಗಿಸಬೇಕು ಎಂದು ಬಾರ್‌ ಕೌನ್ಸಿಲ್ ವಕೀಲ ಮಿಲಿಂದ್ ಸಾಠೆ ಸಲಹೆ ನೀಡಿದರು. ಇದು ಅಧಿಕಾರಿಗಳು ಪರಿಗಣಿಸಬಹುದಾದ ಪರಿಹಾರವಾಗಿದೆ ಎಂದು ಪೀಠ ಹೇಳಿತು.

ಅಂತಹ ಸವಾಲುಗಳಿಗೆ ಬಿಎಂಸಿಗೆ ಸ್ಥಳದಲ್ಲೇ ನಿರ್ಮಾಣವನ್ನು ಪ್ರಾರಂಭಿಸುವುದು ಅಥವಾ ಮೆಟ್ರೋ ನಿಲ್ದಾಣವನ್ನು ನಿರ್ಮಿಸುವುದು ಸುಲಭವಾದ ಪರಿಹಾರವಾಗಿದೆ ಎಂದು ನ್ಯಾಯಾಲಯವು ವ್ಯಂಗ್ಯವಾಗಿ ಹೇಳಿದೆ. ಆದಾಗ್ಯೂ, ಅರ್ಜಿಯಲ್ಲಿ ಎತ್ತಿದ ಕಳವಳ ಪ್ರತ್ಯೇಕವಾಗಿದೆ. ಸ್ವಯಂ ಪ್ರೇರಿತ ಅರ್ಜಿಯು ವ್ಯಾಪಾರಿಗಳು ಮತ್ತು ಮಾರಾಟಗಾರರ ಸಮಸ್ಯೆಗಳಿಗೆ ಸಂಬಂಧಿಸಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ.

ವಸತಿ ರಹಿತರ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತ್ಯೇಕ ಅರ್ಜಿ ಅಥವಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಸಂಘವು ಪರಿಗಣಿಸಲಿದೆ ಎಂದು ಸಾಠೆ ಹೇಳಿದರು. ಇದಕ್ಕೆ ಸಮ್ಮತಿಸಿದ ಕೋರ್ಟ್, ಪ್ರತ್ಯೇಕ ಅರ್ಜಿ ಅಥವಾ ಪಿಐಎಲ್ ಸಲ್ಲಿಸಿದರೆ ಅಗತ್ಯ ಸೂಚನೆಗಳನ್ನು ನೀಡಬಹುದು ಎಂದು ಹೇಳಿದೆ.

Similar News