ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ಧರಿಸಿ ಬರುವಂತಿಲ್ಲ: ಸಚಿವ ನಾಗೇಶ್

Update: 2023-03-03 14:08 GMT

ಬೆಂಗಳೂರು: ಖಾಸಗಿ ಶಾಲೆಗಳ ಆರಂಭಕ್ಕೆ ಅರ್ಜಿ ಸಲ್ಲಿಕೆ, ಮಾನ್ಯತೆ ನವೀಕರಣ, ನಿರಾಕ್ಷೇಪಣಾ ಪತ್ರ ನೀಡಿಕೆ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸೇವೆಗಳಲ್ಲಿ ಸುಧಾರಣೆ, ಸರಳೀಕರಣಕ್ಕಾಗಿ ಹೊಸ ವೆಬ್‍ಸೈಟ್ ಅನ್ನು ಆರಂಭಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. 

ಶುಕ್ರವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಸ ಶಾಲಾ ನೋಂದಣಿ, ಮಾನ್ಯತೆ ನವೀಕರಣ, ಪಠ್ಯಕ್ರಮದ ಎನ್.ಓ.ಸಿ, ಶಾಲೆಗಳ ಮಾಹಿತಿ ದತ್ತಾಂಶ ಸಂಗ್ರಹಣೆ ಆನ್‍ಲೈನ್ ಮೂಲಕವೇ ನೀಡಲಾಗುತ್ತದೆ. https://sts.karnataka.gov.in/SATSNEWSCHOOL/ ವೆಬ್‍ಸೈಟ್‍ನ ಮೂಲಕವೇ ಎಲ್ಲ ಪ್ರಕ್ರಿಯೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಮಾ. 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷಾ ಕೇಂದ್ರಗಳಿಗೆ ‘ಹಿಜಾಬ್’ (Hijab) ಧರಿಸಿ ಬರುವಂತಿಲ್ಲ. ಎಸೆಸೆಲ್ಸಿ ಪರೀಕ್ಷೆ ಸಮಯದಲ್ಲಿಯೂ ಹಿಜಾಬ್‍ಗೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ. ಹಿಂದಿನ ವರ್ಷದಂತೆ ಈ ವರ್ಷವೂ ಉತ್ತಮವಾಗಿ ಪರೀಕ್ಷೆ ಆಯೋಜನೆ ಮಾಡುತ್ತೇವೆ. ಅರ್ಧಗಂಟೆ ಮುಂಚಿತವಾಗಿ ಈ ಬಾರಿ ಮಕ್ಕಳಿಗೆ ಪರೀಕ್ಷಾ ಕೇಂದ್ರದ ಒಳಗೆ ಹೋಗುವ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಸ್ನೇಹಿಯಾಗಿ ಪರೀಕ್ಷೆ ಮಾಡುತ್ತೇವೆ ಎಂದು ಸಚಿವ ನಾಗೇಶ್ ಹೇಳಿದ್ದಾರೆ.

ಶಾಲೆಗೆ ಖುದ್ದು ತೆರಳುವ 3 ಜನರ ಸಮಿತಿಯೂ ಇನ್ನು ಮುಂದೆ ಶೇ.5ರಷ್ಟು ಶಾಲೆಗಳಿಗೆ ಮಾತ್ರ ಭೌತಿಕ ಪರಿಶೀಲನೆ ಮಾಡುತ್ತದೆ. ಉಳಿದ ಶಾಲೆಗಳಿಗೆ ಆನ್‍ಲೈನ್ ಮೂಲಕ ಮಾಹಿತಿ ಪಡೆಯುತ್ತೇವೆ. ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ವಿಶೇಷ ಅಧಿಕಾರ ಶಿಕ್ಷಣ ಇಲಾಖೆ ಕೊಡುತ್ತಿದೆ ಎಂದು ಅವರು ಹೇಳಿದರು. 

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಶಾಲೆಗಳನ್ನು ತೆರೆಯಲು ಮತ್ತು ನವೀಕರಣಕ್ಕೆ ಸರಕಾರದಿಂದ ಎನ್‍ಒಸಿ ಕಡ್ಡಾಯವಾಗಿ ಪಡೆಯಬೇಕು. ಸರಕಾರದ ಪೋರ್ಟಲ್ ವ್ಯವಸ್ಥೆಯಲ್ಲಿ ಅರ್ಜಿ ಸಲ್ಲಿಕೆ ವಿಧಾನವನ್ನು ಸರಳಗೊಳಿಸಿ ಪಾರದರ್ಶಕವಾಗಿಸಲಾಗಿದೆ. ಎನ್‍ಒಸಿ ಪಡೆಯಲು ಸಚಿವರು, ಕಮಿಷನರ್, ಕಾರ್ಯದರ್ಶಿಗಳ ಬಳಿ ಬರಬೇಕಾಗಿಲ್ಲ. ಎನ್‍ಒಸಿ ತಕ್ಷಣವೇ ಸಿಗುವಂತೆ ಮಾಡಲಾಗಿದೆ. ಪ್ರತಿಯೊಂದು ಪ್ರಕ್ರಿಯೆ ಮೊದಲು 8 ಹಂತದಲ್ಲಿ ಇತ್ತು. ಈಗ 4 ಹಂತಕ್ಕೆ ಇಳಿಸಿದ್ದೇವೆ. ಮೊದಲು 27 ದಿನ ಸಮಯ ಆಗುತ್ತಿತ್ತು, ಈಗ 17 ದಿನಕ್ಕೆ ಪ್ರಕ್ರಿಯೆ ಮುಗಿಸುತ್ತಿದ್ದೇವೆ ಎಂದರು.

ಅಕ್ರಮ ಶಾಲೆಗಳ ಕುರಿತು ವೆಬ್‍ಸೈಟ್‍ನಲ್ಲಿ ಮಾಹಿತಿ: ರಾಜ್ಯದಲ್ಲಿನ ಅಕ್ರಮ ಶಾಲೆಗಳನ್ನು ಗುರುತಿಸಲಾಗಿದ್ದು, ನೊಟೀಸ್ ಅನ್ನು ಜಾರಿ ಮಾಡಲಾಗಿದೆ. ಪರೀಕ್ಷೆಗಳ ನಂತರ ಈ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮಕ್ಕಳಿಗೆ ತೊಂದರೆ ಆಗಬಾರದು ಎಂದು ಕ್ರಮವನ್ನು ಸ್ವಲ್ಪ ತಡವಾಗಿದೆ ತೆಗೆದುಕೊಳ್ಳಲಾಗಿದೆ. ಮುಂದಿನ ವರ್ಷದಿಂದ ಅಕ್ರಮ ಶಾಲೆಗಳ ಕುರಿತು ವೆಬ್ ಸೈಟ್ ನಲ್ಲಿ ಮಾಹಿತಿ ಹಾಕುತ್ತೇವೆ. ಪೋಷಕರು ಅದನ್ನ ನೋಡಿಕೊಂಡು ಶಾಲೆಗೆ ಸೇರಿಸಬೇಕು ಎಂದು ಅವರು ಮಾಹಿತಿ ನೀಡಿದರು.

10 ಮತ್ತು 12 ನೆ ತರಗತಿಗೆ ಪರೀಕ್ಷೆ ಮುಂಚೆ ಗ್ರೇಸ್ ಮಾರ್ಕ್ಸ್ ಕೊಡುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಹಿಂದೆ ಇದ್ದ ನಿಯಮದ ಪ್ರಕಾರವೇ ಗ್ರೇಸ್ ಮಾರ್ಕ್ಸ್ ಬಗ್ಗೆ ತೀರ್ಮಾನ ಆಗುತ್ತದೆ. ಈ ಬಾರಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲು ಬಹು ಆಯ್ಕೆ ಪ್ರಶ್ನೆಗಳನ್ನು ಮಾತ್ರ ನೀಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ: ಸಿದ್ದರಾಮಯ್ಯ

Similar News