ಗುತ್ತಿಗೆ ನೌಕರರ ಸಂಭಾವನೆ ಶೇ.15 ಹೆಚ್ಚಳ: ಡಾ.ಕೆ. ಸುಧಾಕರ್

Update: 2023-03-04 16:14 GMT

ಬೆಂಗಳೂರು:  ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ನೌಕರರ ಸಂಭಾವನೆಯನ್ನು ಶೇ.15ರಷ್ಟು ಹೆಚ್ಚಿಸಿ ರಾಜ್ಯ ಸರಕಾರ ಆದೇಶಿಸಿದ್ದು, ಎ.1ರಿಂದಲೆ ಅನ್ವಯವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ವೇತನ ಹೆಚ್ಚಳ ಮಾಡುವ ಆಗ್ರಹ ಬಂದಿತ್ತು. ಈ ವೇಳೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ವೇತನ ಹೆಚ್ಚಳ ಮಾಡಲು ಕ್ರಮ ವಹಿಸುವ ಬಗ್ಗೆ ಆಶ್ವಾಸನೆ ನೀಡಿದ್ದೆ. ಅದರಂತೆ, ವೇತನ ಹೆಚ್ಚಳ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕೆಲಸಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ 20 ಸಾವಿರ ರೂ.ಗಿಂತ ಕಡಿಮೆ ಸಂಭಾವನೆ ಇರುವ ನೌಕರರಿಗೆ ಶೇ.15 ರಷ್ಟು ಹೆಚ್ಚಳವಾಗಲಿದೆ. 5 ವರ್ಷಕ್ಕಿಂತ ಹೆಚ್ಚು ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿದ ಎನ್‍ಎಚ್‍ಎಂ ಮೆಡಿಕಲ್ ಅಧಿಕಾರಿಗಳಿಗೆ (ಎಂಬಿಬಿಎಸ್, ಆಯುಷ್, ಆರ್‍ಬಿಎಸ್‍ಕೆ, ದಂತವೈದ್ಯ ಸರ್ಜನ್‍ಗಳು) ಕೂಡ ಶೇ.15 ರಷ್ಟು ಸಂಭಾವನೆ ಹೆಚ್ಚಿಸಲಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ. 

ಎನ್‍ಎಚ್‍ಎಂ ಗುತ್ತಿಗೆ ತಜ್ಞರಿಗೆ, 3-5 ವರ್ಷಗಳ ಸೇವೆಯಲ್ಲಿರುವವರಿಗೆ ಶೇ.5, 5-10 ವರ್ಷಗಳ ಸೇವೆಯಲ್ಲಿರುವವರಿಗೆ ಶೇ.10, 10ವರ್ಷಕ್ಕೂ ಅಧಿಕ ಕಾಲ ಸೇವೆಯಲ್ಲಿರುವವರಿಗೆ ಶೇ.15 ರಷ್ಟು ಸಂಭಾವನೆ ಹೆಚ್ಚಳ ಮಾಡಲಾಗಿದೆ. ನೌಕರರಿಗೆ ಮಾತು ನೀಡಿದ್ದಂತೆಯೇ ಕ್ರಮ ವಹಿಸಲಾಗಿದೆ. ಈ ಮೂಲಕ ನಮ್ಮ ಸರಕಾರ ನೌಕರರ ಕ್ಷೇಮದ ಬದುಕಿಗೆ ಸದಾ ಶ್ರಮಿಸುತ್ತದೆ ಎಂದು ಸುಧಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Similar News