ಉಗ್ರ ಸಂಘಟನೆಗೆ ಹಣ ಸಂಗ್ರಹಣೆ ಪ್ರಕರಣ: ಪಾಕಿಸ್ತಾನ ಪ್ರಜೆ ಸೇರಿ ಮೂವರಿಗೆ ಶಿಕ್ಷೆ

Update: 2023-03-04 18:18 GMT

ಬೆಂಗಳೂರು: ಲಷ್ಕರ್ ಇ-ತೋಯ್ಬಾ ಉಗ್ರ ಸಂಘಟನೆ ಬಲವರ್ಧನೆಗೆ ಹಣ ಸಂಗ್ರಹ ಮತ್ತು ಸದಸ್ಯರನ್ನು ನೇಮಕಾತಿ ಮಾಡುತ್ತಿದ್ದ ಆರೋಪ ಪ್ರಕರಣ ಸಂಬಂಧ ಪಾಕಿಸ್ತಾನದ ಪ್ರಜೆ ಸೇರಿದಂತೆ ಮೂವರಿಗೆ ಬೆಂಗಳೂರು ನಗರದ 49ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಮೈಸೂರಿನ ಟಿಪ್ಪು ನಗರದ ಸೈಯದ್ ಅಬ್ದುಲ್ ರೆಹ್ಮಾನ್(25), ಪಾಕಿಸ್ತಾನದ ಕರಾಚಿ ಮೂಲದ ಮುಹಮ್ಮದ್ ಫಹಾದ್ ಹೈ(30), ಅಫ್ಸರ್ ಪಾಶಾನನ್ನು ತಪ್ಪಿತಸ್ಥರು ಎಂದು ಫೆ.23ರಂದು ಘೋಷಿಸಿದ್ದ ನ್ಯಾಯಾಲಯ, ಭಾರತೀಯ ದಂಡ ಸಂಹಿತೆ, ಭಾರತೀಯ ಸಶಸ್ತ್ರ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

2012 ಮೇ.7ರಂದು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಂದಿನ ಇನ್‍ಸ್ಪೆಕ್ಟರ್ ಕೆ.ಸಿ.ಅಶೋಕನ್ ಅವರ ನೇತೃತ್ವದ ತಂಡ ಅಬ್ದುಲ್ ರೆಹ್ಮಾನ್ ಬಂಧಿಸಿತ್ತು. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಜೈಲಿನಲ್ಲಿ ಉಗ್ರರ ಸಂಪರ್ಕದಿಂದ ಕೃತ್ಯ ಎಸಗಲು ಸಜ್ಜಾಗಿರುವ ಮಾಹಿತಿ ಲಭ್ಯವಾಗಿತ್ತು. ಬಂಧಿತನಿಂದ 1 ರಿವಾಲ್ವಾರ್, 4 ಜೀವಂತ ಗುಂಡು, 2 ಮೊಬೈಲ್, ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಿದ್ದ ಸಿಸಿಬಿ ಅಧಿಕಾರಿಗಳು ಆಡುಗೋಡಿ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿ ಕೋರ್ಚ್‍ಗೆ ಆರೋಪಪಟ್ಟಿ ಸಲ್ಲಿಸಿದ್ದರು.

2013ರಿಂದ 10 ವರ್ಷ ಕಾಲ ಸುಧೀರ್ಘ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಮೂವರು ಆರೋಪಿಗಳನ್ನು ದೋಷಿಗಳಾಗಿ ತೀರ್ಮಾನಿಸಿ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಸಿಸಿಬಿ ಪೊಲೀಸರ ಪರ ಸರಕಾರಿ ಅಭಿಯೋಜಕ ಸಿ.ಎ. ರವೀಂದ್ರ ವಾದ ಮಂಡಿಸಿದ್ದರು.

Similar News