ಎಸ್ಕಾಂಗಳ ವ್ಯಾಪ್ತಿಯ ಐಪಿ ಸೆಟ್ ಗಳಿಗೆ ಮೂಲಸೌಕರ್ಯ ಕಲ್ಪಿಸುವ ಟೆಂಡರ್ ನಲ್ಲಿ ಭಾರೀ ಹಗರಣ: ಎಂ.ಲಕ್ಷ್ಮಣ್ ಆರೋಪ

''ಶೀಘ್ರದಲ್ಲೇ ಲೋಕಾಯುಕ್ತಕ್ಕೆ ದೂರು''

Update: 2023-03-05 17:03 GMT

ಮೈಸೂರು,ಮಾ.5: 'ಎಸ್ಕಾಂಗಳ ವ್ಯಾಪ್ತಿಯಲ್ಲಿ ಐಪಿ ಸೆಟ್‌ಗಳಿಗೆ ಮೂಲಸೌಕರ್ಯ ಕಲ್ಪಿಸುವ ಉದ್ದೇಶದ ರೂ.800 ಕೋಟಿ ಮೊತ್ತದ ಕಾಮಗಾರಿಗೆ ಸಂಬಂಧಿಸಿದ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾರಿ ಹಗರಣ ನಡೆಯುತ್ತಿದ್ದು, ಇದರ ಬಗ್ಗೆ ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ಶೀಘ್ರದಲ್ಲೇ ದೂರು ಸಲ್ಲಿಸಲಾಗುವುದು’ ಎಂದು ಕೆ‍ಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದ್ದಾರೆ. 

ನಗರದ ಕಾಂಗ್ರಸ್ ಭವನದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕಾಯ್ದೆ ಪ್ರಕಾರ ಟೆಂಡರ್ ಸಲ್ಲಿಕೆಗೆ ಒಂದು ತಿಂಗಳು ಅವಕಾಶ ಕೊಡಬೇಕಿತ್ತು.‌ ಆದರೆ, 10 ದಿನಗಳನ್ನು ಮಾತ್ರವೇ‌ ನೀಡಲಾಗಿದೆ. ಈ ಮೂಲಕ ಮಾನದಂಡವನ್ನೂ ಉಲ್ಲಂಘಿಸಲಾಗಿದೆ. ಚುನಾವಣೆ ಹೊಸ್ತಿಲಲ್ಲಿ, ಅಷ್ಟೊಂದು ತರಾತುರಿಯಲ್ಲಿ ನಡೆಸುತ್ತಿರುವ ಕಾರಣವೇನು ಎನ್ನುವುದು ಎಲ್ಲರಿಗೂ ಗೊತ್ತಾಗುತ್ತದೆ’ ಎಂದರು.

ಕಾಮಗಾರಿ ಕೈಗೊಡಿರುವ ಅನುಭವ ಪರಿಗಣಿಸದೇ, ವಿತರಕನೂ–ಉತ್ಪಾದಕನೂ ಆಗಿರುವವರು ಟೆಂಡರ್‌ನಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಲಾಗಿದೆ. ತಮಗೆ ಬೇಕಾದ ಏಜೆನ್ಸಿಗೆ ಕೊಡಲು ಹೀಗೆ ಬದಲಿಸಿಕೊಳ್ಳಲಾಗಿದೆ ಎಂದು ದೂರಿದರು.

ಅರ್ಜಿ ಹಾಕುವ ಸಂದರ್ಭದಲ್ಲೇ ಶೇ 5ರಷ್ಟು ಕಮಿಷನ್‌ ಕೊಡಬೇಕು ಎಂಬ ಮಾಹಿತಿಯನ್ನು ಗುತ್ತಿಗೆದಾರರೊಬ್ಬರು ನನಗೆ  ನೀಡಿದ್ದಾರೆ. ಒಟ್ಟು ಶೇ 30ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಅರ್ಜಿ ಸಲ್ಲಿಸುವ ಹಂತದಲ್ಲೇ ಇಂಧನ ಸಚಿವರಿಗೆ ಶೇ 3ರಷ್ಟು ಕಮಿಷನ್‌ ಅಂದರೆ ರೂ.24 ಕೋಟಿ ಸಂದಾಯವಾಗಿದೆ’ ಎಂದು ಆರೋಪಿಸಿದರು. ಈ ಟೆಂಡರ್‌ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯ ಎಲ್ಲ ಶಾಸಕರು, ಸಚಿವರ ಮೇಲೆಗಳ ಏಕಕಾಲಕ್ಕೆ ದಾಳಿ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಎಲ್ಲ ಜಿಲ್ಲೆಗಳಲ್ಲೂ ಶೀಘ್ರದಲ್ಲೇ ಪಕ್ಷದಿಂದ ಏಕಕಾಲಕ್ಕೆ ಮನವಿ ಸಲ್ಲಿಸಲಾಗುವುದು. ಈ ದಾಳಿ ನಡೆದರೆ ನಮಗಿರುವ ಮಾಹಿತಿ ಪ್ರಕಾರ, ರೂ.10ಸಾವಿರ ಕೋಟಿ ನಗದು ದೊರೆಯುತ್ತದೆ. ವಿಧಾನಸಭೆ ಚುನಾವಣೆಗಾಗಿ ಹಣ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮುಖಂಡರಾದ ಬಿ.ಎಂ.ರಾಮು, ಸಾಬುದ್ದೀನ್, ಮಹದೇವ್, ಮಹೇಶ್ ಉಪಸ್ಥಿತರಿದ್ದರು.

Similar News