ಚಾಮರಾಜನಗರ | ಬಾಲಕಿ ಜೊತೆ ಮದುವೆ: ಯುವಕ, ಆತನ ತಾಯಿಗೆ 20 ವರ್ಷ ಕಠಿಣ ಶಿಕ್ಷೆ

Update: 2023-03-05 17:24 GMT

ಚಾಮರಾಜನಗರ: ಬಾಲಕಿಯನ್ನು ಬಲವಂತವಾಗಿ ಮದುವೆಯಾಗಿ, ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ ಯುವಕ ಹಾಗೂ ಆತನ ತಾಯಿಗೆ ಇಲ್ಲಿನ ಜಿಲ್ಲಾ ಮಕ್ಕಳ ಸ್ನೇಹಿ ಮತ್ತು ಒಂದನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ತಲಾ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.

ತಮಿಳುನಾಡಿನ ತಿರಚಂಗೂರು ತಾಲೂಕಿನ ಶರಣ್‌ರಾಜ್ (25) ಹಾಗೂ ಆತನ ತಾಯಿ ಸೆಲ್ವಿ (45) ಶಿಕ್ಷೆಗೆ ಗುರಿಯಾದವರು.

ಜಿಲ್ಲೆಯ ಮಹದೇಶ್ವರ ಬೆಟ್ಟದ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಶರಣ್‌ರಾಜ್‌, ತನ್ನ ಸಹೋದರ ಶಶಿಕುಮಾರ್‌ ಮತ್ತು ತಾಯಿ ಸೆಲ್ವಿಯ ಸಹಾಯದಿಂದ 14 ವರ್ಷದ ಬಾಲಕಿಯನ್ನು ಬಲವಂತವಾಗಿ ಮದುವೆಯಾಗಿದ್ದ. ಶಶಿಕುಮಾರ್‌ ತಲೆ ಮರೆಸಿಕೊಂಡಿದ್ದಾರೆ.

2018ರ ಸೆಪ್ಟೆಂಬರ್ 9ರಂದು ಶರಣ್‌ ರಾಜ್‌ ಮತ್ತು ಶಶಿಕುಮಾರ್‌ ಬಾಲಕಿಯನ್ನು ಬೈಕಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದರು. ಸೆಲ್ವಿ ಮತ್ತು ಶಶಿಕುಮಾರ್‌ ಸೇರಿಕೊಂಡು ಬಾಲಕಿಯನ್ನು ಶರಣ್‌ರಾಜ್‌ಗೆ ಮದುವೆಮಾಡಿಸಿದ್ದರು. ಮದುವೆಯ ನಂತರ ಶರಣ್‌ರಾಜ್‌ ಬಾಲಕಿ ಮೇಳೆ ಅತ್ಯಾಚಾರ ಎಸಗಿದ್ದ.

ಬೆಟ್ಟದ ಠಾಣೆಯಲ್ಲಿ ಮೂವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೊ ಅಡಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಬಿ.ಮಹೇಶ್ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.

ಆರೋಪಗಳು ಸಾಬೀತಾಗಿರುವುದರಿಂದ ಜಿಲ್ಲಾ ಮಕ್ಕಳ ಸ್ನೇಹಿ ಮತ್ತು ಒಂದನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಎ.ಸಿ. ನಿಶಾರಾಣಿ ಅವರು ಶರಣ್‌ರಾಜ್ ಹಾಗೂ ಆತನ ತಾಯಿ ಸೆಲ್ವಿಗೆ ತಲಾ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಅಲ್ಲದೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ನೊಂದ ಬಾಲಕಿಗೆ 30 ದಿನಗಳ ಒಳಗಾಗಿ ₹1 ಲಕ್ಷ ಪರಿಹಾರ ನೀಡಬೇಕು ಎಂದೂ ಹೇಳಿದ್ದಾರೆ.

ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ.ಯೋಗೇಶ್ ವಾದ ಮಂಡಿಸಿದ್ದರು.

Similar News