ಸ್ವಾತಂತ್ರ್ಯದ 75 ವರ್ಷಗಳಲ್ಲಿ ಸಂವಿಧಾನದ ಆಶಯ ಈಡೇರಿದೆಯೇ?: ಕೇರಳ ಶಾಸಕಿ ಕೆ.ಕೆ.ಶೈಲಜಾ ಕಳವಳ
ತುಮಕೂರಿನಲ್ಲಿ ವಿಶ್ವ ಮಹಿಳಾ ದಿನಾಚರಣೆ
ತುಮಕೂರು.ಮಾ.07:ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷಗಳ ನಂತರವೂ ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ,ಜಾತ್ಯತೀತೆ,ಸಮಾಜವಾದ ಇವುಗಳನ್ನು ಸಾಧಿಸಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆಯನ್ನು ಇಂದು ನಾವೆಲ್ಲರೂ ಕೇಳಿಕೊಳ್ಳಬೇಕಾಗಿದೆ ಎಂದು ಕೇರಳ ವಿಧಾನಸಭೆಯ ಶಾಸಕಿ ಹಾಗೂ ಮಾಜಿ ಆರೋಗ್ಯ ಸಚಿವ ಶೈಲಜಾ ಟೀಚರ್ ತಿಳಿಸಿದ್ದಾರೆ.
ನಗರದ ಗಾಜಿನಮನೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು,ಸಂವಿಧಾನದ ನೆರಳಲ್ಲಿ ಸ್ವಾಭಿಮಾನಿಯಾಗಿ ಮೇಲೆಳಲು ಹೊರಟ ಮಹಿಳೆಯನ್ನು ಮನುಸೃತಿಯ ಅಡಿಯಲ್ಲಿ ತಂದು, ಆಕೆಯನ್ನು ನಾಲ್ಕುಗೋಡೆಗಳ ಮಧ್ಯೆ ಬಂಧಿಸುವ ಪ್ರಕ್ರಿಯೆ ಆರಂಭ ವಾಗಿದೆ.ಲಿಂಗ ತಾರತಮ್ಯದ ಹೆಸರಿನಲ್ಲಿ ಆಕೆಗೆ ಗಂಡಿನ ಸರಿಸಮ ಗುರುತಿಸಿಕೊಳ್ಳುವ,ತನ್ನ ಪ್ರತಿಭೆಯನ್ನು ತೋರ್ಪಡಿಸುವ ಅವಕಾಶದಿಂದ ವಂಚಿಸಲಾಗುತ್ತಿದೆ.ಮೊದಲು ಕುಟುಂಬದವರು ನಿರ್ಧರಿಸುತ್ತಿದ್ದು ಹೆಣ್ಣು ಮಕ್ಕಳ ರಕ್ಷಣೆ ಎಂಬ ಪದವನ್ನು ಕೆಲವರು ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ನಿಯಂತ್ರಿಸುವ ಕೆಲಸವನ್ನು ಧಾರ್ಮಿಕ ಮೂಲಭೂತವಾದಿಗಳು ಮಾಡುತ್ತಿದ್ದು,ಕರಾವಳಿ ಪ್ರದೇಶದಲ್ಲಿ ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಅಪಾಯದ ಸಂಕೇತವಾಗಿದೆ ಎಂದರು.
ಮಹಿಳೆ ಹೋರಾಟದ ಮೂಲಕವೇ ಮತದಾನದ ಹಕ್ಕು,ಆಸ್ತಿಯ ಹಕ್ಕು, ಶಿಕ್ಷಣದ ಹಕ್ಕನ್ನು ಪಡೆದುಕೊಂಡಿದ್ದಾಳೆ.ಇಂದಿಗೂ ತನ್ನ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಲೇ ಇದ್ದಾಳೆ.ನ್ಯಾಯವೆಂಬುದು ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ.ಬಲ್ಕೀಸ್ ಭಾನು ಪ್ರಕರಣದಲ್ಲಿ ಸನ್ನಡೆ ಆಧಾರದಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ 11 ಜನರನ್ನು ಬಿಡುಗಡೆ ಮಾಡಲಾಗಿದೆ.ಅನೇಕ ಧರ್ಮ, ಜಾತಿಗಳನ್ನು ಹೊಂದಿರುವ ಭಾರತ ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಿಕೊಂಡಿರುವ ಜನರನ್ನುಒಳಗೊಂಡ ಸಮಾಜ ನಮ್ಮದು. ಆದರೆ ಇಂದು ಅದು ನಿಧಾನವಾಗಿ ಕಣ್ಮರೆಯಾಗುತ್ತಿದೆ. ಇದು ಹಿಂದು ಭಾರತ, ಕ್ರಿಶ್ಚಿಯನ್ನರ, ಮುಸ್ಲಿಂರ ಭಾರತ ಎಂಬಂತೆ ವಿಗಂಡಿಸಲಾಗುತ್ತಿದೆ.ಬಂಡವಾಳ ಶಾಹಿಗಳು ದೇಶವನ್ನು ಆಳುತ್ತಿದ್ದಾರೆ. ಇದರ ವಿರುದ್ದ ಮಹಿಳೆಯರು ನಿರಂತರ ಹೋರಾಟ ಮುಂದುವರೆಸಬೇಕಾಗಿದೆ ಎಂದು ಶೈಲಜಾ ಟೀಚರ್ ತಿಳಿಸಿದರು.
ಶಿಕ್ಷಣದಲ್ಲಿ, ಆರೋಗ್ಯದಲ್ಲಿ ಇಂದಿಗೂ ಭಾರತ ಹಿಂದೆ ಉಳಿದಿದೆ.ವಿಶ್ವ ಸಂಸ್ಥೆಯ ನೀಡಿದ್ದ ಶತಮಾನದ ಗುರಿಗಳಾದ ತಾಯಿ, ಮಗುವಿನ ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ದೇಶದ ಬಹುತೇಕ ರಾಷ್ಟ್ರಗಳಲ್ಲಿ ಸಾಧ್ಯವಾಗಿಲ್ಲ.ಆದರೆ ಕೇರಳದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಎಲ್ಲ ಸಿಬ್ಬಂದಿ ಒಂದು ತಂಡವಾಗಿ ಕೆಲಸ ಮಾಡಿದ್ದರ ಪರಿಣಾಮವಾಗಿ ಶಿಶು ಮರಣ ಪ್ರಮಾಣವನ್ನು 1000-5.5 ಕ್ಕೆ ತರಲಾಗಿದೆ.ತಾಯಿಯ ಮರಣ ಪ್ರಮಾಣವನ್ನು 1000ಕ್ಕೆ 19ಕ್ಕೆ ತರಲಾಗಿದೆ.ವಿಕೇಂದ್ರೀಕೃತ ವ್ಯವಸ್ಥೆಯ ಮೂಲಕ ಸಾರ್ವಜನಿಕ ಆಸ್ಪತ್ರೆಗಳ ಮೇಲೆ ಜನರಿಗೆ ನಂಬಿಕೆ ಮೂಡುವಂತಹ ಕೆಲಸಗಳು ಸಾಧ್ಯವಾಗಿದೆ ಎಂದು ಮಾಜಿ ಆರೋಗ್ಯ ಸಚಿವರು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿವಿ ಕುಲಸಚಿವರಾದ ಶ್ರೀಮತಿ ನಾಯಿದ ಜಮ್ ಜಮ್ ಮಾತನಾಡಿ, ಸಮಾನತೆಯಡೆಗೆ ನಮ್ಮ ನಡೆ ಎಂಬ ಘೋಷವಾಕ್ಯವೇ ಹೇಳುವಂತೆ ಮಹಿಳೆಯನ್ನು ಇಂದಿಗೂ ಅಬಲೆ ಅನ್ನುವ ರೀತಿಯಲ್ಲಿಯೇ ನೋಡಲಾಗುತ್ತಿದೆ. ಅಧಿಕಾರಿಯಾಗಿ ಕಾನೂನು ಪ್ರಕಾರ ಕಷ್ಟದಲ್ಲಿದ್ದವರಿಗೆ ಸ್ಪಂದಿಸಿದರೂ,ಮಹಿಳೆ ಎಂಬ ಕಾರಣ ನೀಡಿ ಅದನ್ನು ಕುಗ್ಗಿಸುವ ಪ್ರಯತ್ನ ನಡೆದಿವೆ.ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಯ ನಡುವೆಯೂ ಇಂದು ಸಾವಿರಾರು ಮಹಿಳೆಯರು ಅಸಾಧ್ಯವಾದುದ್ದನ್ನು ಸಾಧಿಸಿದ್ದರೆ ಅದಕ್ಕೆ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಕಾರಣ.ಈ ನಾಡಿನ ಹೆಣ್ಣು ಮಕ್ಕಳ ಬೆಳೆವಣಿಗೆಯ ಹಿಂದೆ, ಅವರ ಗಂಡ,ತಂದೆ ಸಹಾಯ ಇದೆಯೇ ಇಲ್ಲವೋ ಗೊತ್ತಿಲ್ಲ.ಆದರೆ ಅಂಬೇಡ್ಕರ್ ಅವರು ಬರೆದ ಸಂವಿಧಾನದ ನೆರಳಿದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು.ಸಾಧ್ಯವಾದಷ್ಟು ಅರ್ಥಿಕ ಸ್ವಾಯತ್ತತೆಯನ್ನು ಗಳಿಸಲು ಮಹಿಳೆಯರು ಪ್ರಯತ್ನಿಸಬೇಕು. ಆಗ ಮಾತ್ರ ಶೇ90ರಷ್ಟು ಅವಲಂಬನೆಯಿಂದ ಹೊರಬರಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ಒಕ್ಕೂಟದ ಡಾ.ಸಬಿಹಾ ಭೂಮಿಗೌಡ ಮಾತನಾಡಿ,2012ರಲ್ಲಿ ಆರಂಭಗೊಂಡ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ತದನಂತರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವಾಗಿ ಬದಲಾಗಿದೆ. ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ 10 ಕಾರ್ಯಕ್ರಮಗಳನ್ನು ನಡೆಸಿ, ಇದು 11ನೇ ಕಾರ್ಯಕ್ರಮವಾಗಿದೆ.ಇಲ್ಲಿ ಯಾರು ಅಧ್ಯಕ್ಷರು, ಪದಾಧಿಕಾರಿಗಳು ಎಂಬುದಿಲ್ಲ. ಎಲ್ಲಾ ಸಮಾನ ಮನಸ್ಕ ಮಹಿಳಾ ಹೋರಾಟಗಾರರು ಸೇರಿ ರಚಿಸಿಕೊಂಡ ಒಕ್ಕೂಟವಾಗಿದೆ. ಎಲ್ಲ ಮಹಿಳಾ ದೌರ್ಜನ್ಯಗಳ ವಿರುದ್ದ ದ್ವನಿ ಎತ್ತುವ ಕೆಲಸವನ್ನು ನಾವೆಲ್ಲರೂ ಮಾಡುತ್ತಿದ್ದೇವೆ ಸಮಾನತೆಯಡೆಗೆ ನಮ್ಮ ನಡಿಗೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಇದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾ.ಹ.ರಮಾಕುಮಾರಿ ವಹಿಸಿದ್ದರು.ವೇದಿಕೆಯಲ್ಲಿ ಅಕೈ ಪದ್ಮಶಾಲಿ,ಕೆ.ದೊರೈರಾಜು,ಹಂದಿ ಜೋತಿ ರಾಮಕ್ಕ,ಡಾ.ಹನುಮಕ್ಕ, ಚಿತ್ರಕಲಾವಿದೆ ರೇಣುಕಾ ಕೆಸರುಮಡು, ಕೃಷಿಕರಾದ ಅರುಣ, ಗಂಗರಾಜಮ್ಮ, ಡಾ.ಸುಧಾಕಾಮತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಲ್ಲಿಕಾ ಬಸವರಾಜು ಸಂವಿಧಾನ ಪೀಠಿಕೆ ಓದಿದರು. ರಾಣಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.