ಬಿಜೆಪಿ 40 ಕ್ಷೇತ್ರಕ್ಕೆ ಕುಸಿದರೂ ಅಚ್ಚರಿ ಇಲ್ಲ: ಡಿ.ಕೆ.ಶಿವಕುಮಾರ್

Update: 2023-03-08 15:34 GMT

ಬೆಂಗಳೂರು, ಮಾ.8: ಬಿಜೆಪಿಯವರು ಏನೇ ಮಾಡಿದರು 65 ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುವುದಿಲ್ಲ. ಅವರು 40 ಕ್ಷೇತ್ರಕ್ಕೆ ಕುಸಿದರೂ ಅಚ್ಚರಿ ಇಲ್ಲ. ಜನ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೀವು ಯಾರನ್ನೇ ಕೇಳಿದರೂ ಬಿಜೆಪಿಯಿಂದ ಅನುಕೂಲ ಆಗಿಲ್ಲ ಎಂದೇ ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬುಧವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಿಜೆಪಿ ನಾಯಕರು ಅಧಿಕಾರಕ್ಕೆ ಬಂದ ತಕ್ಷಣ ಎಸಿಬಿ ಕಿತ್ತುಹಾಕಿ ಲೋಕಾಯುಕ್ತರ ನೇಮಕ ಯಾಕೆ ಮಾಡಲಿಲ್ಲ? ಹೈಕೋರ್ಟ್ ನಿರ್ದೇಶನದಂತೆ ಎಸಿಬಿ ಸಂಸ್ಥೆ ರದ್ದುಗೊಳಿಸಿ ಲೋಕಾಯುಕ್ತರ ನೇಮಕ ಮಾಡಿದ್ದಾರೆ. ಬಿಜೆಪಿಯದ್ದು ಭ್ರಷ್ಟ ಸರಕಾರ ಎಂದು ಜನರಿಗೆ ಸ್ಪಷ್ಟವಾಗಿ ತಿಳಿದಿದೆ ಎಂದರು.

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ನಿರೀಕ್ಷಣಾ ಜಾಮೀನು ನೀಡಿರುವ ಬಗ್ಗೆ ವಕೀಲರ ಸಂಘ ಸುಪ್ರೀಂ ಕೋರ್ಟ್ ಮುಖ್ಯನಾಯಮೂರ್ತಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ನ್ಯಾಯಾಲಯದ ವಿಚಾರವಾಗಿ ಮಾತನಾಡುವುದಿಲ್ಲ. ನ್ಯಾಯಾಲಯ ಯಾವ ದೃಷ್ಟಿಕೋನದಲ್ಲಿ ಜಾಮೀನು ನೀಡಿದೆಯೋ ನನಗೆ ಗೊತ್ತಿಲ್ಲ. ನಾನು ಅದನ್ನು ಪ್ರಶ್ನಿಸುವುದಿಲ್ಲ’ ಎಂದರು.

ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಕುರಿತು ನಮ್ಮ ಬಳಿ ಮಾತನಾಡಿಲ್ಲ. ಇವೆಲ್ಲವೂ ಕೇವಲ ಊಹಾಪೋಹಗಳೆ ಹೊರತು ಯಾವುದೂ ನಿಜವಲ್ಲ. ನಮ್ಮ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಈಗಾಗಲೆ ಶೇ.75ರಷ್ಟು ಕ್ಷೇತ್ರಗಳಿಗೆ ಹೆಸರು ಅಂತಿಮವಾಗಿದ್ದು, ಆದಷ್ಟು ಬೇಗ ಉಳಿದ ಕ್ಷೇತ್ರಗಳಿಗೂ ಹೆಸರು ಅಂತಿಮಗೊಳಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

ಬಿಜೆಪಿಯವರು ನಮ್ಮ ಬಗ್ಗೆ ಏನೆಲ್ಲಾ ವ್ಯಂಗ್ಯ ಮಾಡುತ್ತಾರೋ ಮಾಡಲಿ. ನಾವು ಅಧಿಕಾರಕ್ಕೆ ಬಂದ ನಂತರ 200 ಯುನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ 2 ಸಾವಿರ ರೂ. ನೀಡುವ ಭರವಸೆಯನ್ನು ಈಡೇರಿಸಿ ತೋರಿಸುತ್ತೇವೆ. 200 ಯುನಿಟ್ ಉಚಿತ ವಿದ್ಯುತ್ ನೀಡಲು ಹೇಗೆ ಸಾಧ್ಯ ಎಂದು ಕೇಳುವವರು ರೈತರಿಗೆ 7 ರಿಂದ 10 ಗಂಟೆವರೆಗೂ ಉಚಿತ ವಿದ್ಯುತ್ ನೀಡುವ ಭರವಸೆ ಹೇಗೆ ನೀಡಿದ್ದರು? ಎಂದು ಅವರು ಪ್ರಶ್ನಿಸಿದರು.

ರೈತರ 1 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಯಾಕೆ ಮಾಡಲಿಲ್ಲ? ಈಗ 75 ಯುನಿಟ್ ವಿದ್ಯುತ್ ನೀಡುವುದಾಗಿ ಹೇಳಿದ್ದಾರೆ. ನಾವು 2 ಸಾವಿರ ನೀಡುತ್ತೇವೆ ಎಂದಾಗ ಅವರು 500 ರೂ.ನೀಡುವುದಾಗಿ ಹೇಳಿ ನಂತರ 1 ಸಾವಿರ ನೀಡುತ್ತೇವೆ ಎಂದು ಘೋಷಣೆ ಮಾಡಿರುವುದೇಕೆ? ಜ.16 ರಂದು ಸರಕಾರ ಗೃಹಿಣಿ ಶಕ್ತಿ ಯೋಜನೆ ಜಾರಿ ಮಾಡುವುದಾಗಿ ಹೇಳಿದ್ದರು. ಹೀಗೆ ಮುಖ್ಯಮಂತ್ರಿ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ಸುಳ್ಳಿನ ಸರದಾರರಾಗುತ್ತಿದ್ದಾರೆ ಎಂದು ಶಿವಕುಮಾರ್ ಟೀಕಿಸಿದರು.

Similar News