ಕೋಲಾರ: ಮಹಿಳೆಯನ್ನು ನಿಂದಿಸಿದ ಸಂಸದ ಮುನಿಸ್ವಾಮಿ ವಿರುದ್ಧ ಪ್ರತಿಭಟನೆ, ಹಲವರು ಪೊಲೀಸ್ ವಶಕ್ಕೆ

Update: 2023-03-09 15:05 GMT

ಕೋಲಾರ:  ಕೋಲಾರ ಸಂಸದ ಮುನಿಸ್ವಾಮಿರವರು ಮಹಿಳೆಯೋರ್ವರನ್ನು ನಿಂದಿಸಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಆರೋಪಿಸಿ ವಿವಿಧ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ನಿನ್ನೆ ಬುಧವಾರ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತದಿಂದ ಟಿ.ಚೆನ್ನಯ್ಯ ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಎಕ್ಸ್ಪೋ ದಲ್ಲಿ ಬಟ್ಟೆ ಮಾರುತ್ತಿದ್ದ ಮಹಿಳೆ ಹಣೆಯಲ್ಲಿ ಕುಂಕುಮ ಇಟ್ಟಿಲ್ಲವೆಂದು ಗದರಿಸಿದ್ದು ಸಾರ್ವಜನಿಕವಾಗಿ ಮಹಿಳೆಗೆ ಮುಜುಗರ ತಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ವಿಷಯ ಕಾಡ್ಗಿಚ್ಚಿನಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆ ದಿನ ಪತ್ರಿಕೆಗಳಲ್ಲೂ ಸುದ್ಧಿ ಪ್ರಕಟಿಸಿದವು. ಈ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಹಲವು ಪ್ರಗತಿಪರ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪೊಲೀಸರು ಹೋರಾಟಗಾರರನ್ನು ಬಂಧಿಸಿ ಠಾಣೆಗೆ ಕರೆದೊಯ್ದು ನಂತರ ಸಂಜೆವರೆಗೂ ಕುಳ್ಳಿರಿಸಿ ಬಿಡುಗಡೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ  ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ, ರೈತ ಸಂಘದ ನಳಿನಿ ಗೌಡ, ಗಮನ ಶಾಂತಮ್ಮ , ಮಂಗಳ, ಮಂಜುಳ ಮತ್ತಿತರರು ಇದ್ದರು.

Similar News