ಹೆದ್ದಾರಿ ಉದ್ಘಾಟನೆ ವೇಳೆ ಕಾಂಗ್ರೆಸ್ ಸರಕಾರದ ಕೊಡುಗೆಯನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಬೇಕು: ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು, ಮಾ. 10: ‘ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆ ಜಾರಿಗೆ ಬರಲು ಕಾರಣರಾದ ಆಸ್ಕರ್ ಫರ್ನಾಂಡಿಸ್, ಮನಮೋಹನಸಿಂಗ್ ಮತ್ತು ಯೋಜನೆಗೆ ಅಗತ್ಯವಿರುವ ಎಲ್ಲ ಅನುಕೂಲ ಮಾಡಿಕೊಟ್ಟ ಕಾಂಗ್ರೆಸ್ ಸರಕಾರದ ಕೊಡುಗೆಯನ್ನು ಪ್ರಧಾನಿ ಮೋದಿ ರಸ್ತೆ ಉದ್ಘಾಟನೆ ವೇಳೆ ಪ್ರಸ್ತಾಪಿಸಬೇಕು. ಇಲ್ಲದಿದ್ದರೆ ತಾವು ಕೇವಲ ಬಿಜೆಪಿಯ ಚುನಾವಣಾ ಏಜೆಂಟರೆಂದು ಒಪ್ಪಿಕೊಳ್ಳಬೇಕು’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಗೆ ಆಗಮಿಸುವ ಮೋದಿಗೆ ಏಳು ಪ್ರಶ್ನೆಗಳನ್ನು ಕೇಳಿದ್ದಾರೆ. ‘ದೇಶದ ಜಿಡಿಪಿಗೆ ಬೆಂಗಳೂರಿನ ಕೊಡುಗೆ ಅಪಾರ. 2022ರಲ್ಲಿ ಸುಮಾರು 10 ಲಕ್ಷ ಕೋಟಿಗೂ ಹೆಚ್ಚು ಅಮೂಲ್ಯವಾದ ಕೊಡುಗೆ ನೀಡಿದೆ. ಹೈದರಾಬಾದ್ ಮತ್ತು ಚೆನ್ನೈಗಳಿಗಿಂತ 2.5ಯಿಂದ 3.5ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಕೊಡುಗೆ ರಾಷ್ಟ್ರೀಯ ಜಿಡಿಪಿಗೆ ಕೊಡುತ್ತಿದೆ. ಇಷ್ಟೆಲ್ಲ ಇದ್ದರೂ ಕೇಂದ್ರ ಸರಕಾರ ಬೆಂಗಳೂರಿನ ಅಭಿವೃದ್ಧಿಗೆ ಏನು ಕೊಟ್ಟಿದೆ?’ ಎಂದು ಪ್ರಶ್ನಿಸಿದ್ದಾರೆ.
‘2035ರ ವೇಳೆಗೆ ಬೆಂಗಳೂರಿನ ಆರ್ಥಿಕತೆ 300 ಬಿಲಿಯನ್ ಡಾಲರುಗಳಿಗೆ ಏರಿಕೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಈ ನಗರದ ಮೇಲೆ ಜನಸಂಖ್ಯೆಯ ಒತ್ತಡವೂ ಹೆಚ್ಚಾಗುತ್ತಿದೆ. ಅದರ ಜತೆಗೆ ಕುಡಿಯುವ ನೀರಿನ ಸಮಸ್ಯೆ ಬೃಹದಾಕಾರವಾಗಿ ಬೆಳೆಯಲಿದೆ. ಇದನ್ನೆಲ್ಲ ಮನಗಂಡೆ ನಾವು ಮೇಕೆದಾಟು ಯೋಜನೆ ರೂಪಿಸಿ ಕೇಂದ್ರಕ್ಕೆ ಕಳಿಸಿದ್ದೇವೆ. ಆದರೆ, ಕೇಂದ್ರ ಸರಕಾರ ಯೋಜನೆಯನ್ನು ಕಾಲ ಕೆಳಗೆ ಹಾಕಿಕೊಂಡು ಕೂತಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರದ ಜಲ ಸಚಿವರು ನೀಡಿರುವ ಉತ್ತರ ಪರಮ ಧಾಷ್ಟ್ಯದಿಂದ ಕೂಡಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಟ್ರೊ ಯೋಜನೆ ಕಾಂಗ್ರೆಸ್ ಕೊಡುಗೆ. ಈ ಯೋಜನೆ ಮುಂದುವರೆದುಕೊಂಡು ಹೋಗುತ್ತಿದೆಯೆ ಹೊರತು ಇದರಲ್ಲಿ ಮೋದಿ ಸರಕಾರದ ವಿಶೇಷ ಕೊಡುಗೆ ಏನೂ ಇಲ್ಲ. ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣದಲ್ಲಿ ಯುಪಿಎ ಸರಕಾರದ ಕೊಡುಗೆ ದೊಡ್ಡದಿದೆ. ಒಟ್ಟು ಯೋಜನಾ ವೆಚ್ಚದಲ್ಲಿ ಶೇ.50ರಷ್ಟು ಭೂಸ್ವಾಧೀನಕ್ಕೆ ಖರ್ಚಾಗಿದೆ. ಯೋಜನೆಗಾಗಿ ಗುತ್ತಿಗೆದಾರ ಶೇ.60ರಷ್ಟು ಸಾಲ ತಂದು ಹಾಕಿದ್ದಾನೆ. ಹಾಕಿದ ಬಂಡವಾಳಕ್ಕೆ ಒಂದಕ್ಕೆ ಎರಡರಂತೆ ಟೋಲ್ ಸಂಗ್ರಹ ಮಾಡಲಾಗುತ್ತದೆಯಲ್ಲವೆ?’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಣ್ಣ ಕಾರೊಂದು ಮೈಸೂರಿಗೆ ಹೋಗಿ ಬರಲು ಕನಿಷ್ಠ 500ರೂ.ಪಾವತಿಸಬೇಕಾಗಿದೆ. ಬಸ್ಸುಗಳು ಕನಿಷ್ಠ ಇದರ ಎರಡರಷ್ಟಾದರೂ ಪಾವತಿಸಬೇಕು. ಇದನ್ನು ಜನರ ಪ್ರಯಾಣ ದರಗಳ ಮೇಲೆ ಹೇರಲಾಗುತ್ತದೆ. ಗುತ್ತಿಗೆದಾರ ಸಾಲ ಮಾಡಿ ರಸ್ತೆ ಮಾಡಿದರೆ, ರಾಜ್ಯ ಸರಕಾರ ಭೂಮಿ ಕೊಟ್ಟರೆ ನಿಮ್ಮ ಕೊಡುಗೆ ಏನು ಹೇಳಿ? ಟೋಲ್ ನಿರ್ಮಿಸಿ ಜನರನ್ನು ಅಡ್ಡಡ್ಡ ಸುಲಿಗೆ ಮಾಡುವುದು ಬಿಟ್ಟರೆ ನಿಮ್ಮ ಕೊಡುಗೆ ಏನು? ಕರ್ನಾಟಕಕ್ಕೆ ವರ್ಷಕ್ಕೆ 5ಸಾವಿರ ಕೋಟಿ ರೂ.ರಸ್ತೆ ನಿರ್ಮಾಣಕ್ಕೆ ಕೊಡುತ್ತಿದ್ದೇವೆಂದು ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದೀರಿ. ಆದರೆ, 4ಸಾವಿರ ಕೋಟಿ ರೂ.ಜನರು ಕಟ್ಟುವ ಟೋಲ್ಗಳಿಂದ ಲೂಟಿ ಮಾಡುತ್ತೀರಿ. ಹಾಗಿದ್ದ ಮೇಲೆ ನೀವು ಕೊಟ್ಟಿದ್ದೆಷ್ಟು ಹೇಳಿ?’ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
‘ಮೈಸೂರು-ಬೆಂಗಳೂರು ರಸ್ತೆಗೆ ಟೋಲ್ ಶುಲ್ಕ ಸಂಗ್ರಹವನ್ನು ಕೈಬಿಡಬೇಕು ಹಾಗೂ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಮುಂತಾದ ನಗರ ಪಟ್ಟಣಗಳ ಜನರ ವ್ಯಾಪಾರ ವ್ಯವಹಾರಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
‘ಹೆದ್ದಾರಿ ಉದ್ಘಾಟಿಸುವ ನೆಪದಲ್ಲಿ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದೀರಿ. ತಮಗೆ ಸ್ವಾಗತ. ತಮ್ಮ ಪಕ್ಷಕ್ಕೆ ಸೋಲುವ ಭೀತಿ ಹುಟ್ಟಿಕೊಂಡಿದೆ. ಹಾಗಾಗಿ ತಾವು ಪ್ರಧಾನಿ ಎಂಬುದನ್ನು ಮರೆತು ಚುನಾವಣೆಗಳನ್ನು ನಡೆಸುವುದಕ್ಕಾಗಿಯೆ ಬಿಜೆಪಿಯು ತಮ್ಮನ್ನು ನೇಮಿಸಿದೆ ಎಂಬಂತೆ ವರ್ತಿಸುತ್ತಿದ್ದೀರಿ. ಖೊ ಖೊ ಆಟದಲ್ಲಿ ಖೊ ಕೊಡುವ ಹಾಗೆ ತಾವು ಮತ್ತು ತಮ್ಮ ಗೃಹ ಸಚಿವರು ಆಡುತ್ತಿದ್ದೀರಿ. ಅಮಿತ್ ಶಾ ದಿಲ್ಲಿಗೆ ಬಂದು ನಿಮಗೆ ಖೊ ಕೊಟ್ಟ ಕೂಡಲೆ ನೀವು ಕರ್ನಾಟಕಕ್ಕೆ ಓಡಿ ಬರುತ್ತೀರಿ, ನೀವು ಹೋಗಿ ಅವರಿಗೆ ಖೊ ಕೊಟ್ಟ ಕೂಡಲೆ ಅವರು ಹಾರಿ ಬರುತ್ತಾರೆ. ನಿಮ್ಮ ಈ ವರ್ತನೆಯಂತೂ ಚರಿತ್ರೆಯಲ್ಲಿ ದಯನೀಯವಾಗಿ ದಾಖಲಾಗುತ್ತದೆ ಎಂಬುದನ್ನು ಮರೆಯಬೇಡಿ’
-ಸಿದ್ದರಾಮಯ್ಯ ವಿಪಕ್ಷ ನಾಯಕ