ಮೂಡಿಗೆರೆ | ಸೇತುವೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಕಾಲ್ಕಿತ್ತ ಗುತ್ತಿಗೆದಾರ: ಸಾರ್ವಜನಿಕರ ಆರೋಪ

ರಸ್ತೆ ತಡೆದು ಪ್ರತಿಭಟನೆ, ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ

Update: 2023-03-10 14:39 GMT

ಮೂಡಿಗೆರೆ, ಮಾ.10: ತಾಲೂಕಿನ ಬೆಟ್ಟದಮನೆ ಗ್ರಾಮದಲ್ಲಿ ಹರಿಯುತ್ತಿರುವ ಹೇಮಾವತಿ ನದಿಗೆ ಅಡ್ಡಲಾಗಿ 2018ರಿಂದ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರೂ ಕಾಮಗಾರಿಯನ್ನು ಗುತ್ತಿಗೆದಾರ ಇದುವರೆಗೂ ಪೂರ್ಣಗೊಳಿಸಿಲ್ಲ. ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರ ಕೆಲ ತಿಂಗಳ ಬಳಿಕ ಕಾಮಗಾರಿ ಸ್ಥಗಿತಗೊಳಿಸಿದ್ದರು. ನಂತರ ಬೇಸಿಗೆಯಲ್ಲಿ ಮೂರು ತಿಂಗಳು ಮಾತ್ರ ಕಾಮಗಾರಿ ನಡೆಸಿ ಮತ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಿರುವ ಗುತ್ತಿಗೆದಾರ 5ವರ್ಷ ಕಳೆದರೂ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸದ್ಯ ಗುತ್ತಿಗೆದಾರ ನಾಪತ್ತೆಯಾಗಿದ್ದು, ಕಾಮಗಾರಿಯನ್ನು ಮಳೆಗಾಲಕ್ಕೂ ಮುನ್ನ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಶುಕ್ರವಾರ ಕಿರುಗುಂದ ಮತ್ತು ಹಂತೂರು ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು ಬೆಟ್ಟದಮನೆ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಸ್ಥಳದಲ್ಲಿ ರಸ್ತೆತಡೆ ನಡೆಸಿ ಧರಣಿ ನಡೆಸಿದ್ದು, ಮುಂದಿನ 10ದಿನಗಳಲ್ಲಿ ಕಾಮಗಾರಿ ಆರಂಭಿಸದಿದ್ದರೇ ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

ಹಿರಿಯ ಕಾಫಿ ಬೆಳಗಾರ ಯು.ಎನ್.ಚಂದ್ರೇಗೌಡ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ, ''ಮೂಡಿಗೆರೆ, ಸಕಲೇಶಪುರ ಸಂಪರ್ಕ ರಸ್ತೆಯ ಬೆಟ್ಟದಮನೆ ಗ್ರಾಮದಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿರುವ ಹಳೆಯ ಸೇತುವೆಗೆ 114ವರ್ಷಗಳ ಇತಿಹಾಸವಿದೆ. ಈ ಸೇತುವೆ ಕುಸಿದು ಬೀಳುವ ಸ್ಥಿತಿಯಲ್ಲಿರುವ ಕಾರಣ ಹೊಸ ಸೇತುವೆ ನಿರ್ಮಾಣಕ್ಕೆ ಸರಕಾರ 2016ರಲ್ಲಿ 20ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಹೊಸ ಸೇತುವೆ ನಿರ್ಮಾಣದ ಹೊಣೆಯನ್ನು ರಾಜ್ಯ ಸರಕಾರ ಬೆಂಗಳೂರಿನ ಕೆಆರ್‍ಡಿಸಿಎಲ್ ಸಂಸ್ಥೆಗೆ ವಹಿಸಿತ್ತು. ಆ ಸಂಸ್ಥೆಯವರು 2018 ರಲ್ಲಿ ಕಾಮಗಾರಿ ಆರಂಭಿಸಿ ಈಗ 5ವರ್ಷ ಕಳೆದರೂ ಅರ್ಧದಷ್ಟು ಕಾಮಗಾರಿ ಮುಗಿಸಿದ್ದಾರೆ. ಇನ್ನೂ ಅರ್ಧದಷ್ಟು ಬಾಕಿ ಉಳಿಸಿ ಗುತ್ತಿಗೆದಾರ ತನ್ನ ಕಾರ್ಮಿಕರೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕಳೆದ ವರ್ಷದ ಮಳೆಗಾಲದಲ್ಲಿ ಹಳೆಯ ಸೇತುವೆಯ ಒಂದು ಭಾಗ ಕುಸಿದಿತ್ತು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಲ್ಲಿಕಲ್ಲು ಸುರಿದು ಕುಸಿದ ಸ್ಥಳವನ್ನು ತಾತ್ಕಾಲಿಕವಾಗಿ ಸರಿಪಡಿಸಿದ್ದಾರೆ. ಸೇತುವೆ ಈ ವರ್ಷದ ಮಳೆಗಾಲದಲ್ಲಿ ಸಂಪೂರ್ಣ ಕುಸಿದು ಬೀಳುವ ಸಾಧ್ಯತೆ ಇದೆ. ಹಳೆಯ ಸೇತುವೆ ಕುಸಿದರೆ ಮೂಡಿಗೆರೆ-ಸಕಲೇಶಪುರ ರಸ್ತೆ ಸಂಚಾರಕ್ಕೆ ಅಡ್ಡಿಯಾಗಲಿದೆ. ಇನ್ನು 10ದಿನಗಳಲ್ಲಿ ಕಾಮಗಾರಿ ಆರಂಭಿಸಿ ಮೇ ಅಂತ್ಯದ ವೇಳೆಗೆ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅವಕಾಶ ನೀಡಬೇಕು. ಇಲ್ಲವಾದರೆ ಮುಂದಿನ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ' ಎಂದು' ಎಚ್ಚರಿಸಿದರು.

ಸುಮಾರು 1 ಗಂಟೆ ರಸ್ತೆ ತಡೆ ನಡೆಸಲಾಯಿತು. ಬಳಿಕ ಕಿರುಗುಂದ ಗ್ರಾಪಂ ಪಿಡಿಓ ಸಾಹಿತ್ಯಾ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕಿರುಗುಂದ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಕೆ.ಆರ್.ದಿನೇಶ್, ಚಂದ್ರಿಕ, ಹಂತೂರು ಗ್ರಾಪಂ ಸದಸ್ಯ ಎಂ.ಸಿ.ಆದರ್ಶ, ಮಾಜಿ ಜಿಪಂ ಸದಸ್ಯ ಎಂ.ಎಸ್.ಅನಂತ್, ಕಿರುಗುಂದ ಗ್ರಾಪಂ ಮಾಜಿ ಅಧ್ಯಕ್ಷರಾದ ಭಾಗ್ಯ ಲಕ್ಷ್ಮಣ್, ಯು.ಕೆ.ವೆಂಕಟೇಶ್, ಜಿಲ್ಲಾ ಸಿಪಿಐ ಮುಖಂಡ ಬಿ.ಕೆ.ಲಕ್ಷ್ಮಣ್ ಕುಮಾರ್, ಮುಖಂಡರಾದ ಕಿರುಗುಂದ ಅಬ್ಬಾಸ್, ಕೆ.ಕೆ.ರಾಮಯ್ಯ, ದೇವರಾಜ್, ಯು.ಎಸ್.ದಿನೇಶ್, ಸಿ.ಎಲ್.ಪೂರ್ಣೇಶ್, ಕೆ.ಆರ್.ಲೋಕೇಶ್, ಗಿರೀಶ್, ಕೆ.ಎಸ್.ಧರ್ಮೇಂದ್ರ ಮತ್ತಿತರದಿದ್ದರು.

 

Similar News