ಚನ್ನಗಿರಿ ಕ್ಷೇತ್ರದಲ್ಲಿ ವಡ್ನಾಳ್ ರಾಜಣ್ಣ ಸ್ಪರ್ಧಿಸುವುದಾರೆ ಟಿಕೆಟ್ ನೀಡಲು ಕ್ರಮ: ಸಿದ್ದರಾಮಯ್ಯ
ದಾವಣಗೆರೆ, ಮಾ.10: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಂತಹ ಭ್ರಷ್ಟ ರಾಜಕಾರಣಿಗೆ ಬುದ್ದಿ ಕಲಿಸಬೇಕಾದರೆ ವಡ್ನಾಳ್ ರಾಜಣ್ಣ ಅವರಂತಹ ಸಜ್ಜನರನ್ನು ಶಾಸನ ಸಭೆಗೆ ಕಳುಹಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ಮೈದಾನದಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಲು ಹೆಚ್ಚು ಆಕಾಂಕ್ಷಿ ಗಳಿದ್ದು, ಮಾಜಿ ಶಾಸಕ ವಡ್ನಾಳ್ ರಾಜಣ್ಣ ಸ್ಪರ್ಧೆ ಮಾಡುವುದಾದರೆ ಅವರಿಗೆ ಪಕ್ಷದ ಟಿಕೆಟ್ ಕೊಡಿಸಲಾಗುವುದು ಎನ್ನುವ ಮೂಲಕ ಕಾರ್ಯಕರ್ತರಲ್ಲಿದ್ದ ಗೊಂದಲ ದೂರ ಮಾಡಿದರು. ಬಿಜೆಪಿ ಶೇ.40ರಷ್ಟು ಕಮಿಷನ್ ಎಂದು ಹೇಳಿದಾಗ ಮುಖ್ಯಮಂತ್ರಿಯವರು ದಾಖಲೆ ಕೊಡಿ ಎಂದು ಕೇಳಿದ್ದರು. ಆದರೆ, ಈಗ ಸ್ಪಷ್ಟ ದಾಖಲೆ ದೊರೆತಿದೆ ಎಂದು ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು.
ರಾಜ್ಯದ ಮತದಾರರಿಗೆ ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಯ ಖಾತೆಗೆ 2 ಸಾವಿರ ರೂ. ಮತ್ತು ಪಡಿತರದಾರರಿಗೆ 10 ಕೆ.ಜಿ. ಅಕ್ಕಿ ಕೊಡುವುದಾಗಿ ಡಿ.ಕೆ. ಶಿವಕುಮಾರ್ ಮತ್ತು ನಾನು ಸಹಿ ಮಾಡಿದ ಗ್ಯಾರಂಟಿ ಕಾರ್ಡನ್ನು ನೀಡುತ್ತಿದ್ದೇವೆ. ನಾನು ಜನದ್ರೋಹ ಮಾಡಿಲ್ಲ. ಮುಂದೆ ಮಾಡುವುದೂ ಇಲ್ಲ. ಅಂತಹಕ್ಷ ಕ್ಷಣಗಳು ಬಂದರೆ, ಒಂದು ಕ್ಷಣವೂ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ವಾಗ್ದಾನ ಮಾಡಿದರು.
ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ಈ ಕಾರ್ಯಕ್ರಮವು ಮುಂದಿನ ಚುನಾವಣೆಯ ದಿಕ್ಸೂಚಿಯಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು 8 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದರೆ ಪಕ್ಷವು ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಗಟ್ಟಿ ಇದೆ ಎನ್ನುವುದು ಮನಗಾಣಬೇಕಿದೆ. ಸಿದ್ದರಾಮಯ್ಯನವರು ಸಿಎಂ ಆಗಿ ದ್ದ ಸಂದರ್ಭದಲ್ಲಿ ಚನ್ನಗಿರಿಯ ಒಂದು ಕಡತ ಸಹ ವಾಪಾಸ್ ಕಳಿಸಿಲ್ಲ ಎಂದರು.
ಜಿಲ್ಲಾಧ್ಯಕ್ಷ ಎಚ್.ಮಂಜಪ್ಪ, ಮಾಧ್ಯಮ ವಕ್ತಾರ ಬಸಣ್ಣ, ಕಿಸಾನ್ ಸಂಘದ ಅಧ್ಯಕ್ಷ ಸಚಿನ್ ಮಿಗಾ, ದಾವಣಗೆರೆ ಜಿಲ್ಲಾ ಚುನಾವಣಾ ಉಸ್ತುವಾರಿ ಸಲೀಂ ಅಹಮದ್, ಟಿಕೆಟ್ ಆಕಾಂಕ್ಷಿಗಳಾದ ಲಿಂಗರಾಜು, ಎಚ್.ಎನ್. ನಿರಂಜನ್, ಪುನೀತ್ಕುಮಾರ್, ಹೊದಿಗೆರೆ ರಮೇಶ್, ಶಿವಗಂಗಾ ಬಸವರಾಜ್, ವಡ್ನಾಳ್ ಜಗದೀಶ್, ವಡ್ನಾಳ್ ಅಶೋಕ್, ತೇಜಸ್ವಿ ಪಟೇಲ್, ಚನ್ನಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್, ಸಿ.ನಾಗರಾಜ್ ಇತರರು ಹಾಜರಿದ್ದರು.