ಧಾರವಾಡಕ್ಕೆ ಐಐಟಿ ಬಂದಿದ್ದು ಕಾಂಗ್ರೆಸ್ ಕಾಲದಲ್ಲಿ: ಮಾಜಿ ಸಚಿವ ವಿನಯ್ ಕುಲಕರ್ಣಿ

Update: 2023-03-12 08:23 GMT

ಧಾರವಾಡ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಧಾರವಾಡಕ್ಕೆ ಐಐಟಿ ಮಂಜೂರಾಗಿತ್ತು. ಇದು ಧಾರವಾಡದಲ್ಲಿ ಸ್ಥಾಪನೆಯಾಗಬೇಕು ಎಂದು ಭದ್ರ ಬುನಾದಿ ಹಾಕಿದ್ದೇ ಕಾಂಗ್ರೆಸ್ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.

ವೀಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಮಾಜಿ ಸಚಿವರು, ವಿದ್ಯಾಕಾಶಿ ಧಾರವಾಡದಲ್ಲಿ ಐಐಟಿ ಉದ್ಘಾಟನೆಯಾಗುತ್ತಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯ. ಐಐಟಿಯನ್ನು ಕರ್ನಾಟಕಕ್ಕೆ ಕೊಟ್ಟ ವೇಳೆ ಇದು ರಾಯಚೂರಿಗೆ ಹೋಗಬೇಕು ಎಂದು ಚರ್ಚೆಗಳಾಗಿದ್ದವು. ಆಗ ನಾವೆಲ್ಲರೂ ಒಂದಾಗಿ ಹೋಗಿ ಈ ಐಐಟಿ ಕೇಂದ್ರ ಧಾರವಾಡದಲ್ಲೇ ಸ್ಥಾಪನೆಯಾಗಬೇಕು ಎಂದು ಒತ್ತಾಯ ಮಾಡಿದ್ದೆವು. ಆದರೂ ಆಗ ಐಐಟಿ ರಾಯಚೂರು ಬಿಟ್ಟು ಮೈಸೂರಿಗೆ ವರ್ಗಾವಣೆಯಾಯಿತು. ಮರಳಿ ಅದನ್ನು ಧಾರವಾಡಕ್ಕೆ ತರಲು ನಾವೆಲ್ಲ ದೊಡ್ಡ ಹೋರಾಟ ಮಾಡಬೇಕಾಯಿತು ಎಂದಿದ್ದಾರೆ.

ಅಂದು ಹೋರಾಟ ನಡೆಸಿದ ಪ್ರತಿಫಲವಾಗಿ ಇಂದು ಧಾರವಾಡದಲ್ಲಿ ಐಐಟಿ ಉದ್ಘಾಟನೆಯಾಗುತ್ತಿದೆ. ಅಂದಿನ ಕೈಗಾರಿಕಾ ಸಚಿವರಾಗಿದ್ದ ಆರ್.ವಿ ದೇಶಪಾಂಡೆ ಅವರು ಐಐಟಿಗೆ 500 ಎಕರೆ ಜಮೀನನ್ನು ಒದಗಿಸುವ ಕೆಲಸ ಮಾಡಿದರು. ಐಐಟಿ ಇಲ್ಲಿಗೆ ಬರಬೇಕಾದರೆ ಹಲವಾರು ಕಾಯ್ದೆಗಳಿದ್ದವು. ರೈಲ್ವೆ ಮಾರ್ಗ, ವಿಮಾನ ಸೌಕರ್ಯ, ಬಸ್ ಸೌಕರ್ಯ ಎಲ್ಲವನ್ನೂ ನಾವು ತೋರಿಸಿದ್ದೆವು. ಬಿಜೆಪಿ ಮುಖಂಡರು ಕೂಡ ನಮ್ಮ ಜೊತೆ ಸೇರಿ ಕೆಲಸ ಮಾಡಿದ್ದರು. ಎಲ್ಲರೂ ಸೇರಿ ಐಐಟಿ ಧಾರವಾಡಕ್ಕೆ ತರುವ ಕೆಲಸ ಮಾಡಿದ್ದೇವೆ ಎಂದರು.

ನಾವು ಈ ಹಿಂದೆ ಬೇಡಿಕೆ ಇಟ್ಟಂತೆ ಈ ಐಐಟಿಯಲ್ಲಿ 25%ರಷ್ಟು ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಬೇಕು. ಐಐಟಿಗೆ ಭೂಮಿ ನೀಡಿದಂತಹ ಮಕ್ಕಳಿಗೆ ಅಲ್ಲಿ ಡಿ ದರ್ಜೆ ಕೆಲಸ ನೀಡಬೇಕು. ನಾಳೆ ನಡೆಯುವ ಉದ್ಘಾಟನೆ ವೇಳೆ ಇದನ್ನು ಘೋಷಣೆ ಮಾಡಬೇಕು ಎಂದು ವಿನಯ್ ಕುಲಕರ್ಣಿ ಆಗ್ರಹಿಸಿದ್ದಾರೆ.

Similar News