×
Ad

ರೈತರ ಸಂಕಟಗಳಿಗೆ ಮೋದಿ ಮತ್ತು ಬೊಮ್ಮಾಯಿ ನೇರ ಕಾರಣ: ಸಿದ್ದರಾಮಯ್ಯ

Update: 2023-03-12 17:27 IST

ಬೆಗಳೂರು, ಮಾ. 12: ‘ಮೋದಿಯವರೆ ಕರ್ನಾಟಕದ ರೈತರ ಬದುಕು ನರಕರೂಪಿಯಾಗುತ್ತಿದೆ. ಕೇಂದ್ರ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ರಾಕ್ಷಸ ರೀತಿಯಲ್ಲಿ ಕಾಡುತ್ತಿವೆ. 2023ರಲ್ಲಿ ರೈತರು ಬೆಳೆದ ಎಲ್ಲ ಕೃಷಿ ಉತ್ಪನ್ನಗಳ ಬೆಲೆಗಳು ಪಾತಾಳಕ್ಕೆ ಕುಸಿಯುತ್ತಿವೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರವಿವಾರ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಎಂಟನೆ ಕಂತಿನ ಪ್ರಶ್ನೆಗಳನ್ನು ಕೇಳಿರುವ ಸಿದ್ದರಾಮಯ್ಯ, ‘ಮಾತೆತ್ತಿದರೆ ಭಾರತದ ಪರಂಪರೆಯ ಬಗ್ಗೆ ಮಾತನಾಡುತ್ತೀರಿ. ಭಾರತದ ಪ್ರಾಚೀನ ಜನಪರ ಪರಂಪರೆಯ ಶ್ರೀಮಂತಿಕೆ ಇರುವುದು ಕೇವಲ ಹೇಳುವ ಧಾಷ್ಟ್ಯದ ಗುಣದಲ್ಲಿ ಅಲ್ಲ. ಕೇಳಿಸಿಕೊಳ್ಳುವುದರಲ್ಲಿ ಇದೆ. ಉಪನಿಷತ್ ಅಂದರೇನೆ ಗುರು-ಶಿಷ್ಯ ಇಬ್ಬರೂ ಒಟ್ಟಿಗೆ ಕೂತು ನಡೆಸುವ ಸಂವಾದ ಎಂದು ಅರ್ಥ’ ಎಂದು ಸಲಹೆ ನೀಡಿದ್ದಾರೆ.

‘ಹೀಗಾಗಿ ರೈತರೊಂದಿಗೆ, ರೈತ ಸಂಘಟನೆಗಳೊಂದಿಗೆ ಕೂತು ಮುಕ್ತ ಸಂವಾದ ಮಾಡಿ ಅವರ ಸಂಕಷ್ಟವೇನೆಂದು ನಿಮಗೆ ಅರ್ಥವಾದರೂ ಆಗಬಹುದು. ಅದಕ್ಕೂ ಮೊದಲು ಅರಿಶಿಣ, ಕೊಬ್ಬರಿ, ಅಡಿಕೆ, ಕಾಳು ಮೆಣಸು, ಕಬ್ಬು, ಈರುಳ್ಳಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಅವುಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

‘ಬಿಜೆಪಿ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ 8ಕೋಟಿ ರೂ.ಗಳಿಗೂ ಹೆಚ್ಚು ಹಣ ಸಿಕ್ಕಿದೆ. ಒಬ್ಬ ಶಾಸಕನ ಬಳಿಯೆ ಇಷ್ಟೊಂದು ಹಣ ಸಿಕ್ಕಿದೆಯೆಂದರೆ ಇನ್ನು ಮಂತ್ರಿಗಳ ಬಳಿ ಎಷ್ಟಿರಬಹುದು? 40 ಪಸೆರ್ಂಟ್ ಭ್ರಷ್ಟಾಚಾರಕ್ಕೆ ಇದಕ್ಕಿಂತ ಉದಾಹರಣೆ ಬೇಕೆ? ಈ ಶಾಸಕ ಕರ್ನಾಟಕದ ಹೆಮ್ಮೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪಿಗೆ ಕಲಬೆರಕೆ ಮಾಡಲು ಪ್ರಯತ್ನಿಸಿದ್ದಾರೆ. ಅದಕ್ಕೋಸ್ಕರವೆ ಈ ಕಮಿಷನ್ ದಂಧೆ ನಡೆದಿದೆ. ಇಂತಹ ಕಳ್ಳತನದ ಮಾಹಿತಿ ನಿಮಗೆ ಇರಲಿಲ್ಲವೆ? ನಿಮ್ಮ ಸಿಬಿಐ, ಇಡಿಗಳು ಏನು ಮಾಡುತ್ತಿವೆ? ಈ ಮಾಡಾಳು ವಿರೂಪಾಕ್ಷಪ್ಪ ಅಡಿಕೆ ಬೆಳೆಯುವ ರೈತರ ಮನೆಗಳಲ್ಲಿ ಇಷ್ಟು ಹಣ ಸಾಮಾನ್ಯ ಎಂದು ಮಾತನಾಡಿದ್ದಾರೆ. ಇಷ್ಟೊಂದು ನಗದನ್ನು ಇಟ್ಟುಕೊಳ್ಳಲು ನಿಮ್ಮ ಪಾರ್ಟಿಯವರಿಗೆ ಮಾತ್ರ ಅನುಮತಿ ನೀಡಲಾಗಿದೆಯೆ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಮೊದಲು ಸಂಕಷ್ಟಕ್ಕೆ ಸಿಲುಕಿರುವ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ಯುವಜನರು, ಸಣ್ಣ ಮತ್ತು ಗೃಹ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳ ಸಂಕಷ್ಟಗಳನ್ನು ನಿವಾರಿಸಿ ಆ ನಂತರ ಓಟು ಕೇಳಲು ಬನ್ನಿ. 10 ವರ್ಷಗಳಿಂದ ನಿಮ್ಮ ಬಣ್ಣದ ಮಾತುಗಳನ್ನು ಕೇಳಿ ಟೋಪಿ ಹಾಕಿಸಿಕೊಂಡು ಆಗಿದೆ. ನಮ್ಮ ಜನರ ಮೈಯಲ್ಲಿ ನೀವು ಇರಿಯಲು ಒಂದಿಂಚೂ ಜಾಗವನ್ನೂ ಉಳಿಸಿಲ್ಲ. ಜನರ ಬದುಕು ಸುಧಾರಣೆಯಾಗಬೇಕಾಗಿದೆಯೇ ಹೊರತು ನಿಮ್ಮ ಬೂದಿ ಬಣ್ಣದ ಮಾತುಗಳಲ್ಲ. ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ ಎಂದು ನಮ್ಮ ಹಿರಿಯರು ಗಾದೆ ಮಾಡಿರುವುದು ನಿಮ್ಮಂತವರನ್ನು ನೋಡಿಯೆ ತಾನೆ? ನಮ್ಮ ಎಲ್ಲ ಪ್ರಶ್ನೆಗಳಿಗೂ ಪ್ರಾಮಾಣಿಕವಾಗಿ ಉತ್ತರ ಕೊಡುತ್ತೀರೆಂದು ಆಶಿಸುತ್ತಿದ್ದೇನೆ’ 

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

Similar News