ಮೊಬೈಲ್ ಕರೆ ಕದ್ದಾಲಿಕೆ: ಡಿಜಿಪಿಗೆ ದೂರು ನೀಡಿದ ಎಂ.ಬಿ.ಪಾಟೀಲ್

Update: 2023-03-13 17:28 GMT

ಬೆಂಗಳೂರು, ಮಾ.13:ನನ್ನ ಹಾಗೂ ನನ್ನ ಕುಟುಂಬ ಮತ್ತು ನನ್ನ ಆಪ್ತರ ಫೋನ್ ಕರೆಗಳ ವಿವರವನ್ನು ಕಾನೂನು ಬಾಹಿರವಾಗಿ ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ಸಂಬಂಧ ಉನ್ನತ ತನಿಖೆ ನಡೆಸಿ,ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ(ಡಿಜಿಪಿ) ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ದೂರು ಸಲ್ಲಿಕೆ ಮಾಡಿದ್ದಾರೆ.

ಸೋಮವಾರ ಈ ಕುರಿತು ದೂರು ನೀಡಿರುವ ಅವರು, ನನ್ನ ಮೊಬೈಲ್  ಫೋನ್ ಕರೆಗಳ ಮಾಹಿತಿ ಜೊತೆಗೆ ನನ್ನ ಪತ್ನಿ ಆಶಾ ಪಾಟೀಲ್, ಸಹೋದರ, ಪರಿಷತ್ ಸದಸ್ಯ ಸುನೀಲ್‍ಗೌಡ ಪಾಟೀಲ್, ಪುತ್ರ ಬಸನಗೌಡ ಪಾಟೀಲ್ ಹಾಗೂ ಬಿಎಲ್‍ಡಿಇ ಸಂಸ್ಥೆಯ ಪ್ರಚಾರ ಅಧಿಕಾರಿ ಮಹಾಂತೇಶ ಬಿರಾದಾರ ಅವರ ಫೋನ್ ಕರೆಗಳ ವಿವರವನ್ನು ತೆಗೆಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.

ರಾಜಕೀಯ ದುರುದ್ದೇಶದಿಂದ ಕೆಲವರು ವಿಜಯಪುರ ಜಿಲ್ಲೆ ಹೊರತು ಪಡಿಸಿ ಬೆಳಗಾವಿ, ಬಾಗಲಕೋಟೆ, ಕಲಬುರಗಿ ಹಾಗೂ ಇತರೆ ಜಿಲ್ಲೆಗಳಲ್ಲಿ ನನ್ನ ಮೊಬೈಲ್ ಕರೆಗಳ ವಿವರ (ಕಾಲ್ ಹಿಸ್ಟರಿ) ತೆಗೆಸುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ವಿರೋಧಿಗಳು ಈ ಕೃತ್ಯ ಮಾಡುತ್ತಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಇದು ವೈಯಕ್ತಿಕ ಮಾಹಿತಿ ಕದಿಯುವ ಯತ್ನವಾಗಿದೆ. ಕಾರಣ ನಮ್ಮೆಲ್ಲರ ಮೊಬೈಲ್ ಕರೆಗಳ ವಿವರವನ್ನು (ಕಾಲ್‍ಹಿಸ್ಟರಿ) ಯಾರಿಗೂ ನೀಡಬಾರದು. ಒಂದು ವೇಳೆ ನೀಡಿದರೆ ಅದಕ್ಕೆ ಮೊಬೈಲ್ ನೆಟ್‍ವರ್ಕ್ ಕಂಪೆನಿ(ಏಜೆನ್ಸಿ) ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಹೊಣೆಯಾಗುತ್ತದೆ. ಜತೆಗೆ, ಕಾನೂನು ಕ್ರಮಕ್ಕೆ ಮುಂದಾಗುತ್ತೇ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

Similar News