ದಾವಣೆಗೆರೆ: ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಆರೋಪಿಯ ಹತ್ಯೆ

Update: 2023-03-15 17:35 GMT

ದಾವಣೆಗೆರೆ: ಶಿವಮೊಗ್ಗದ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇಬ್ಬರ ಮೇಲೆ, ಗುಂಪೊಂದು ಬುಧವಾರ ದಾಳಿ ನಡೆಸಿದೆ.

ಈ ವೇಳೆ ಓರ್ವ ಸ್ಥಳದಲ್ಲಿಯೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲೆ ನ್ಯಾಮತಿ ತಾಲೂಕು ಚೀಲೂರು ಸಮೀಪದ ಗೋವಿನಕೋವಿ ಗ್ರಾಮದ ಹಳ್ಳದ ಬಳಿ ಬುಧವಾರ  ಮಧ್ಯಾಹ್ನ ನಡೆದಿದೆ.

ಆಂಜನೇಯ (28) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ಮಧು (27) ಗಂಭೀರವಾಗಿ ಗಾಯಗೊಂಡಿದ್ದು, ಈತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರಿಬ್ಬರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸ್ಕಾರ್ಪಿಯೋ ಕಾರಿನಲ್ಲಿ ಆಗಮಿಸಿದ ಗುಂಪು ಬೈಕ್ ಗೆ ಡಿಕ್ಕಿ ಹೊಡೆಸಿ ಕೆಳಕ್ಕೆ ಬೀಳಿಸಿದೆ. ನಂತರ ಇವರಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಕಾರು ರಸ್ತೆ ಬದಿಯ ತೋಟದಲ್ಲಿ ಸಿಲುಕಿ ಬಿದ್ದಿದೆ. ಇದರಿಂದ ಕಾರನ್ನು ಅಲ್ಲಿಯೇ ಬಿಟ್ಟು, ಆರೋಪಿಗಳೆಲ್ಲರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

‘ಆಂಜನೇಯ ಹಾಗೂ ಮಧು ಹರಿಹರ ತಾಲೂಕು ಭಾನುವಳ್ಳಿಯವರಾಗಿದ್ದಾರೆ. ಚಾಲಕ ವೃತ್ತಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ವಿರುದ್ದ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿ ತೆರೆಯಲಾಗಿದೆ. ಇವರ ಮೇಲೆ ದಾಳಿ ನಡೆಸಿದ ಆರೋಪಿಗಳ ವಿವರ ಕಲೆ ಹಾಕಲಾಗುತ್ತಿದೆ’ ಎಂದು ನ್ಯಾಮತಿ ಪೊಲೀಸ್ ಮೂಲಗಳು ಮಾಹಿತಿ ನೀಡುತ್ತವೆ.

ಘಟನಾ ಸ್ಥಳಕ್ಕೆ ಇನ್ಸ್’ಪೆಕ್ಟರ್ ರಾಘವೇಂದ್ರ ಕಾಂಡಿಕೆ ಸೇರಿದಂತೆ, ನ್ಯಾಮತಿ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು.ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋರ್ಟ್ ನಿಂದ ಹಿಂದಿರುಗುತ್ತಿದ್ದರು:

ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಪ್ರಕರಣದ 8 ಜನ ಆರೋಪಿಗಳಲ್ಲಿ, ಆಂಜನೇಯ ಹಾಗೂ ಮಧು ಕೂಡ ಆಪಾದಿತರಾಗಿದ್ದರು. ಇತರೆ ಆರೋಪಿಗಳ ಜೊತೆ ಜೈಲು ಸೇರಿದ್ದ ಇವರಿಬ್ಬರು, ಜಾಮೀನಿನ ಮೇಲೆ ಹೊರಬಂದಿದ್ದರು. ಇದೇ ಪ್ರಕರಣದ ವಿಚಾರಣೆಗಾಗಿ ಬುಧವಾರ ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೋರ್ಟ್ ಗೆ ಆಗಮಿಸಿ ಬೈಕ್ ನಲ್ಲಿ ಹಿಂದಿರುಗುತ್ತಿದ್ದ ವೇಳೆ, ಸ್ಕಾರ್ಪಿಯೋ ಕಾರಿನಲ್ಲಿ ಆಗಮಿಸಿದ ಗುಂಪು ದಾಳಿ ನಡೆಸಿದೆ ಎಂದು ಹೇಳಲಾಗಿದೆ.

ಇವರಿಬ್ಬರ ಮೇಲೆ ದಾಳಿಗೆ ಸ್ಪಷ್ಟ ಕಾರಣಗಳು ಇ ತಿಳಿದುಬಂದಿಲ್ಲ. ಹಂದಿ ಅಣ್ಣಿ ಹತ್ಯೆಗೆ ಪ್ರತೀಕಾರವಾಗಿ ದಾಳಿ ನಡೆದಿದೆಯೇ? ಅಥವಾ ಬೇರೆ ಕಾರಣಗಳಿವೆಯೇ? ಎಂಬುವುದು ಪೊಲೀಸರ ತನಿಖೆಯ ನಂತರವಷ್ಟೆ ಸ್ಪಷ್ಟವಾಗಬೇಕಾಗಿದೆ.

ಈ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
 

Similar News