ಗೌರಿ ಲಂಕೇಶ್ ಹತ್ಯೆ ಪ್ರಕರಣ: ‘ಗುಂಡಿನ ದಾಳಿ’ ನಡೆಸಿದ ವಿಡಿಯೊ ವೀಕ್ಷಿಸಲು ಅನುಮತಿಸಿದ ಕೋರ್ಟ್

Update: 2023-03-18 15:18 GMT

ಬೆಂಗಳೂರು: ಹಿರಿಯ ಪತ್ರಕರ್ತೆ ಮತ್ತು ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯ ದಿನ ಗೌರಿ ಅವರು ತಮ್ಮ ಮನೆಯ ಬಳಿ ಬಂದದ್ದು ಮತ್ತು ಆರೋಪಿಯು ಅವರ ಮೇಲೆ ಗುಂಡಿನ ದಾಳಿ ನಡೆಸಿದ ಎರಡು ವಿಡಿಯೊಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಆರೋಪಿಗಳು ವೀಕ್ಷಿಸಲು ಅವಕಾಶ ಮಾಡಿಕೊಂಡುವಂತೆ ಜೈಲಿನ ಅಧಿಕಾರಿಗಳಿಗೆ ನಗರದ ವಿಶೇಷ ಕೋರ್ಟ್ ಆದೇಶ ಮಾಡಿದೆ. 

ಗೌಪ್ಯ ವಿಚಾರಣೆಯ ವೇಳೆ ನಿರ್ದಿಷ್ಟ ಸಿಡಿ ವೀಕ್ಷಿಸಲು ಕೋರಿ ಆರೋಪಿಗಳು ಸಲ್ಲಿಸಿದ್ದ ಮೆಮೊವನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಪೀಠವು ಮಾನ್ಯ ಮಾಡಿದೆ.

ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿಗಳಿಗೆ ಗೌರಿ ಹತ್ಯೆಗೆ ಸಂಬಂಧಿಸಿದ ಸಿಡಿಯಲ್ಲಿರುವ ಎರಡು ಘಟನಾವಳಿಗಳ ವಿಡಿಯೊಗಳನ್ನು ವೀಕ್ಷಿಸಲು ಸೂಕ್ತ ಸಂದರ್ಭದಲ್ಲಿ ಜೈಲಿನಲ್ಲಿ ಅವಕಾಶ ಮಾಡಿಕೊಡಬೇಕು. ಅಲ್ಲದೇ, ಆರೋಪಿಗಳ ಪರ ವಕೀಲರಾದ ಉಮಾಶಂಕರ್ ಮೇಗುಂದಿ ಮತ್ತು ಆರ್.ಬಿ. ದಿವ್ಯಾ ಅವರು ಗರಿಷ್ಠ 20 ನಿಮಿಷಗಳವರೆಗೆ ಆರೋಪಿಗಳ ಜೊತೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಸಿಡಿಯಲ್ಲಿನ ವಿಚಾರ ತೋರಿಸಲು ಜೈಲು ಪ್ರಾಧಿಕಾರವು ತಮ್ಮ ಸಿಸ್ಟಂಗಳನ್ನು ಬಳಸಬಹುದು ಅಥವಾ ವಕೀಲರು ಕೊಂಡೊಯ್ಯುವ ಲ್ಯಾಪ್‍ಟಾಪ್ ಬಳಸಲು ಅನುಮತಿಸಬಹುದು ಎಂದು ಆದೇಶದಲ್ಲಿ ವಿವರಿಸಲಾಗಿದೆ.

2023ರ ಮೇ 8ರಿಂದ 12ರ ವರೆಗೆ ವಿಚಾರಣೆ ನಡೆಸಲು ವಿಶೇಷ ಸರಕಾರಿ ಅಭಿಯೋಜಕರಾದ ಬಾಲಕೃಷ್ಣನ್ ಅವರು ಮೆಮೊ ಸಲ್ಲಿಸಿದ್ದು, ಸಾಕ್ಷಿಗಳಿಗೆ ಸಮನ್ಸ್ ಜಾರಿ ಮಾಡಲು ನ್ಯಾಯಾಲಯವು ಆದೇಶಿಸಿದೆ. ಆರೋಪಿಗಳ ನ್ಯಾಯಾಂಗ ಬಂಧನವನ್ನು ಮೇ 8ರವರೆಗೆ ವಿಸ್ತರಿಸಲಾಗಿದೆ. ಮುಂಬೈ ಮತ್ತು ಪುಣೆ ಜೈಲು ಪ್ರಾಧಿಕಾರಕ್ಕೆ ಮುಂದಿನ ವಿಚಾರಣೆಯ ದಿನಾಂಕದ ಬಗ್ಗೆ ಮಾಹಿತಿ ನೀಡಲು ಕಚೇರಿಗೆ ನಿರ್ದೇಶಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಪ್ರಕರಣವೇನು?: 2017ರ ಸೆ.5ರಂದು ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಈ ಸಂಬಂಧ ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 120ಬಿ, 114, 118, 109, 201, 203, 204 ಮತ್ತು 35, ಸಶಸ್ತ್ರ ಕಾಯಿದೆಯ ಸೆಕ್ಷನ್‍ಗಳಾದ 25(1), 25(1ಬಿ), 27(1) ಮತ್ತು ಕೋಕಾ ಕಾಯಿದೆಯ ಸೆಕ್ಷನ್‍ಗಳಾದ 3(1)(ಐ), 3(2), 3(3), 3(4) ಅಡಿ ಪ್ರಕರಣ ದಾಖಲಿಸಲಾಗಿತ್ತು.

ಅಮೋಲ್ ಕಾಳೆ, ಪರಶುರಾಮ್ ವಾಗ್ಮೊರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಲಾಸ್ಕರ, ಮೋಹನ್ ನಾಯಕ್, ವಾಸುದೇವ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್ ಪಾಟೀಲ್, ಶ್ರೀಕಾಂತ್ ಪಂಗರ್ಕರ್, ಕೆ.ಟಿ.ನವೀನ್ ಕುಮಾರ್ ಮತ್ತು ರುಶಿಕೇಶ್ ದಿಯೋದಿಕರ್ ಪ್ರಕರಣದ ಆರೋಪಿಗಳಾಗಿದ್ದಾರೆ.

Similar News