ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡುವುದಿಲ್ಲ: ಸಚಿವ ವಿ.ಸೋಮಣ್ಣ ಸ್ಪಷ್ಟನೆ

Update: 2023-03-21 12:58 GMT

ಬೆಂಗಳೂರು, ಮಾ.21: ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಒಬ್ಬ ಸರ್ವೋಚ್ಛ ನಾಯಕರು, ಅವರ ವಿರುದ್ಧ ಸ್ಪರ್ಧೆ ಮಾಡುವ ಬಗ್ಗೆ ತೀರ್ಮಾನ ಮಾಡುವುದು ಪಕ್ಷದ ಹೈಕಮಾಂಡ್‍ಗೆ ಬಿಟ್ಟಿದ್ದು, ಆದರೆ, ನನಗೆ ಈಗಾಗಲೇ ಗೋವಿಂದರಾಜನಗರ ಕ್ಷೇತ್ರವಿದೆ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡುವುದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಈಗಾಗಲೇ ಗೋವಿಂದರಾಜ ನಗರ ಕ್ಷೇತ್ರವಿದೆ, ಕೆಲಸ ಮಾಡಲು ಚಾಮರಾಜನಗರ ಕ್ಷೇತ್ರವಿದೆ. ಹಾಗಾಗಿ ಮತ್ತೊಂದು ಕ್ಷೇತ್ರದ ಅಗತ್ಯ ನನಗಿಲ್ಲ. ಇನ್ನೂ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ 80 ವರ್ಷ, ನನಗೆ 72 ವರ್ಷ. ಹೀಗಾಗಿ, ನನಗೆ ಇನ್ನೊಂದು ಅವಕಾಶ ಸಿಗಬಹುದು, ಸಿಗದೆಯೂ ಇರಬಹುದು ಎಂದು ನುಡಿದರು.

ಚಾಮರಾಜನಗರಕ್ಕೆ ಹೋಗಿ ಅಲ್ಲಿ ಕೆಲಸ ಶುರು ಮಾಡಿ ಎಂದು ನನಗೆ ಹೈಕಮಾಂಡ್ ಹೇಳಿದೆ. ಹೀಗಾಗಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ನಾನು ಅಲ್ಲಿ ಕೆಲಸ ಮಾಡುತ್ತೇನೆ. ನನಗೆ ಯಾಕೆ ಬೇರೆ ಕ್ಷೇತ್ರ, ನನಗೆ ಗೋವಿಂದರಾಜನಗರ ಕ್ಷೇತ್ರವೇ ಇದೆ. ನಾನು ಎಲ್ಲಾದರೂ ನಿಲ್ಲಬೇಕು ಎಂದರೆ ಬೇರೆ ಯಾರು ಬೇಡ ಅನ್ನುವುದಿಲ್ಲ. ಹನೂರಿನಲ್ಲಿ ನಿಲ್ಲಲು ಮುಂದಾದರೂ ವಿರೋಧಿಸಲ್ಲ. ಆದರೆ ಅಮಿತ್ ಶಾ ಅವರು ನನ್ನ ಕರೆದು ಮಾತನಾಡಿ ಕೆಲ ಜವಬ್ದಾರಿ ಕೊಟ್ಟಿದ್ದಾರೆ. ಆ ಜವಾಬ್ದಾರಿಯನ್ನು ನಾನು ಅಲ್ಲಿ ನಿರ್ವಹಣೆ ಮಾಡುತ್ತೇನೆ ಎಂದು ಸೋಮಣ್ಣ ಹೇಳಿದರು.

Similar News