ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಸ್ಪರ್ಧೆಗೆ ಒತ್ತಾಯ

Update: 2023-03-24 11:02 GMT

ಶಿವಮೊಗ್ಗ, ಮಾ.24: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಸ್ಪರ್ಧಿಸುವಂತೆ  ಆ ಭಾಗದ ಕೆಲವು ಕಾಂಗ್ರೆಸ್ ಮುಖಂಡರು, ಅವರ ಅಭಿಮಾನಿಗಳು  ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ  ಮುಖಂಡ ಎಸ್ ಪಿ ಶೇಷಾದ್ರಿ ,  ಮಹದೇವಪ್ಪ ಹಲವಾರು  ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿ, ಲೋಕೋಪಯೋಗಿ ಸಚಿವರಾಗಿದ್ದಾಗ ನಡೆಸಿದ ರಸ್ತೆ ಅಭಿವೃದ್ಧಿ ಕಾರ್ಯಗಳು ಐತಿಹಾಸಿಕ ದಾಖಲೆಗಳಾಗಿ ಉಳಿದಿವೆ. ಆರೋಗ್ಯ ಸಚಿವರಾಗಿಯೂ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿಯೂ  ಉತ್ತಮ ಕಾರ್ಯ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

 2023ನೇ ಚುನಾವಣೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕಿದ್ದ  ಅವರು ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷರಾಗಿದ್ದ ಆರ್.ಧೃವನಾರಾಯಣ್ ಅವರ ಅಕಾಲಿಕ ಮರಣದಿಂದ ಅವರ ಪುತ್ರನಿಗೆ ಬಿಟ್ಟುಕೊಟ್ಟು ಆದರ್ಶ ಮೆರೆದಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಇವರು ಕೇವಲ ಜಾತಿಗೆ ಸೀಮಿತವಾಗದೆ ಎಲ್ಲಾ ಜನಾಂಗದವರು, ಎಲ್ಲಾ ಧರ್ಮದವರು ಒಪ್ಪುವಂತಹ ಆದರ್ಶವಾದಿ  ಎಂದು ಹೇಳಿದರು.

ಬುದ್ಧ, ಬಸವಣ್ಣ, ಅಂಬೇಡ್ಕರ್ ರವರ ಅದರ್ಶಗಳನ್ನು ಅನುಸರಿಸುತ್ತ ರಾಜ್ಯ ಕಂಡ ಅಪ್ರತಿಮ ನಾಯಕ ಇವರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲವಾದ ರಾಜ್ಯ ನಾಯಕರಾಗಿದ್ದಾರೆ. ಜಿಲ್ಲೆಯಲ್ಲಿ ಸ್ಪರ್ಧಿಸಿದರೆ ಈ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಹೊಂದುವ ಅವಕಾಶವಿದೆ. ಆದುದರಿಂದ ಎಚ್.ಸಿ.ಮಹದೇವಪ್ಪ ನವರು ಶಿವಮೊಗ್ಗ ಗ್ರಾಮಾಂತರದಲ್ಲಿ ಸ್ಪರ್ಧಿಸಬೇಕೆಂದು ಅವರ ಅಭಿಮಾನಿ ಬಳಗದವರ ಒತ್ತಾಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮುಖಂಡಾರದ ನ್ಯಾಯವಾದಿ  ಎಸ್. ಪ್ರಕಾಶ್,ಬಿ ಜಗದೀಶ, ಟಿ ಎನ್ ಶಶಿಧರ, ಗೇಮ್ಯಾ ನಾಯ್ಕ್, ಗಂಗಾಧರ, ಸುರೇಶ್ ಗೌಡ, ಯುವರಾಜ  ನ್ಯಾಯವಾದಿ ಮಂಜುನಾಥ, ಚಂದ್ರಶೇಖರ್ ಗೌಡ ಮೊದಲಾದವರಿದ್ದರು.

Similar News