ಭಟ್ಕಳಕ್ಕೆ ಮಾಂಕಾಳ್ ವೈದ್ಯ ಕಾಂಗ್ರೆಸ್ ಅಭ್ಯರ್ಥಿ

ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಲಿದೆಯೇ ಜೆಡಿಎಸ್ ?

Update: 2023-03-25 08:02 GMT

ಭಟ್ಕಳ, ಮಾ.25: ಭಟ್ಕಳದಲ್ಲಿ 'ಮುಸ್ಲಿಮ್ ಅಭ್ಯರ್ಥಿ'ಯನ್ನು ಕಣಕ್ಕಿಳಿಸುವ ಒತ್ತಾಯದ ನಡುವೆ ಮಾಜಿ ಶಾಸಕ ಮಾಂಕಾಳು ವೈದ್ಯಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. 2013 ರಲ್ಲಿ ಪಕ್ಷೇತರರಾಗಿ ನಿಂತು ಗೆದ್ದಿದ್ದ ಮಾಂಕಾಳ್ ವೈದ್ಯ 2018 ರಲ್ಲಿ ಕಾಂಗ್ರೆಸ್ ಸೇರಿ ಸ್ಪರ್ಧಿಸಿ ಸೋತಿದ್ದರು. 

ಈ ಬಾರಿ ವಿಧಾನಸಭೆ ಚುನಾವಣೆಗೆ ಭಟ್ಕಳ ವಿಧಾನಸಭೆ ಕ್ಷೇತ್ರದಿಂದ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಆಗ್ರಹ ವ್ಯಾಪಕವಾಗಿ ಕೇಳಿ ಬಂದಿತ್ತು.  ಇತ್ತೀಚೆಗೆ ಭಟ್ಕಳದ ಪ್ರಮುಖ ಮುಸ್ಲಿಂ ಸಂಸ್ಥೆ ತಂಝೀಮ್ ನೇತೃತ್ವದಲ್ಲಿ ಮಾ.20ರಂದು ನಡೆದ ಸರ್ವ ಜಮಾಅತ್ ಪ್ರತಿನಿಧಿಗಳ ಸಭೆಯಲ್ಲಿ ಭಟ್ಕಳದಲ್ಲಿ ತಂಝೀಮ್ ಸಂಸ್ಥೆಯು ಮುಸ್ಲಿಮ್ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸುವುದರ ವಿರುದ್ಧ ನಿರ್ಣಯ ಕೈಗೊಂಡಿತ್ತು. ಆದರೆ ಯಾವುದೇ ಜಾತ್ಯತೀತ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆ ಮುಂದೆ ತೀರ್ಮಾನ ತೆಗೆದುಕೊಳ್ಳುವದಾಗಿ ತಂಝೀಮ್ ಹೇಳಿದೆ. 

ಈ ನಡುವೆ ಮಾಜಿ ಶಾಸಕ ಮಾಂಕಾಳು ವೈದ್ಯಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಇನ್ನು ಜೆಡಿಎಸ್ ಇಲ್ಲಿಂದ  ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಲಿದೆಯೇ ಎಂದು ಕಾದು ನೋಡಬೇಕಿದೆ. ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವರೇ ಜೆಡಿಎಸ್ ನಿಂದ ಟಿಕೆಟ್ ಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರಿಗೆ ಜೆಡಿಎಸ್ ಟಿಕೆಟ್ ಕೊಟ್ಟರೆ ತಂಝೀಮ್ ನಿಂದ ಬೆಂಬಲ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

Similar News