ಶಿವಮೊಗ್ಗ: ಮಠಾಧೀಶರೊಬ್ಬರ ಅತ್ಯಾಚಾರ ಆರೋಪ ಪ್ರಕರಣದ ಸಾಕ್ಷಿ ಅಭಿರಾಮ್ ಹೆಗಡೆ ನಿಧನ

Update: 2023-03-26 06:08 GMT

ಶಿವಮೊಗ್ಗ: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬ್ರಾಹ್ಮಣ ಮಠಾಧೀಶರೊಬ್ಬರ ಅತ್ಯಾಚಾರ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪ್ರಮುಖ ಸಾಕ್ಷಿಯಾಗಿದ್ದ ಅಭಿರಾಮ್ ಹೆಗಡೆ(31) ಅಕಾಲಿಕ ಮರಣ ಹೊಂದಿರುವ ಘಟನೆ ನಡೆದಿದೆ.

ಅಭಿರಾಮ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಅಭಿರಾಮ್ ತಂದೆ ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ಇದೀಗ ಅಭಿರಾಮ್ ಮೃತಪಟ್ಟಿದ್ದು, ತಾಯಿ ಹಾಗೂ ನಾಲ್ವರು ಅಕ್ಕಂದಿರನ್ನು ಆಗಲಿದ್ದಾರೆ.

ಬಾಲ್ಯಾವಸ್ಥೆಯಲ್ಲೇ ಅಭಿರಾಮ್ ಮಠವೊಂದರಲ್ಲಿ ಸ್ವಾಮೀಜಿಯ ನಿಕಟವರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದೇ ಸಮಯದಲ್ಲಿ ಸ್ವಾಮೀಜಿಯ ಲೈಂಗಿಕ ಚಟುವಟಿಕೆಗಳನ್ನು ನೋಡಿರುವುದಾಗಿ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು. ಬಾಲ್ಯದಲ್ಲಿಯೇ ಮಠದ ವಾತಾವರಣದಿಂದ ಬೇಸತ್ತು ಮಾನಸಿಕ ಖಿನ್ನತೆಗೆ ಒಳಗಾಗಿ ಈ ಹಿಂದೆ ಆತ್ಮಹತ್ಯೆಗೂ ಯತ್ನಿಸಿದ್ದ ಎನ್ನಲಾಗಿದೆ.

ಈ ನಡುವೆ ವಿಪರೀತ ಮದ್ಯ ವ್ಯಸನಿಯಾಗಿದ್ದ ಅವರು, ಸಾಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

2009ರಲ್ಲಿ ಮಠಾಧೀಶರೊಬ್ಬರ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿ ತನಿಖೆ ಕೈಗೆತ್ತಿಕೊಕೊಂಡಿದ್ದ ಅಂದಿನ ಸಿಐಡಿ ತನಿಖಾಧಿಖಾರಿಗಳು ಅಭಿರಾಮ್ ಹೆಗಡೆ ಪ್ರಮುಖ ಸಾಕ್ಷಿಯನ್ನಾಗಿ ದೋಷಾರೋಪ ಪಟ್ಟಿಯಲ್ಲಿ ನಮೂದಿಸಿದ್ದರು. ಈತ ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಗಳು ನಂತರ ಮಾಧ್ಯಮಗಳಲ್ಲೂ ಪ್ರಚಾರ ಪಡೆದುಕೊಂಡಿದ್ದವು.

Similar News