ಶಿವಮೊಗ್ಗ| ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಸೊರಬದಲ್ಲಿ ಪ್ರತಿಭಟನೆ: ಮಧು ಬಂಗಾರಪ್ಪ

Update: 2023-03-26 06:23 GMT

ಶಿವಮೊಗ್ಗ: ಸೊರಬ ತಾಲ್ಲೂಕಿನ ತಾಳಗುಪ್ಪ ಗ್ರಾಮದ ಸರ್ವೇ ನಂ. 20 ರಲ್ಲಿ 6 ರೈತ ಕುಟುಂಬಗಳನ್ನು ಒಕ್ಕಲೆಬ್ಬಸಿರುವ ಅರಣ್ಯ ಇಲಾಖೆಯ ಕ್ರಮ‌ ಖಂಡಿಸಿ ಮಾ.27 ರಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ಸೊರಬದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಲೆನಾಡಿನ ಸಮಸ್ಯೆಗಳು ಮಿತಿಮೀರಿವೆ.  ಅರಣ್ಯ ಭೂಮಿ ಸಾಗುವಳಿ ರೈತರ ಬದುಕು ಹದಗೆಟ್ಟಿದೆ. ಸೊರಬ ಭಾಗದ ರೈತರು 30 ವರ್ಷಗಳಿಂದ ಕಟ್ಟಿ ಬೆಳೆಸಿದ್ದ ತೋಟಗಳನ್ನು ಅರಣ್ಯ ಇಲಾಖೆಯವರು ಸಂಪೂರ್ಣ ನಾಶಪಡಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಯವರು ಕೋರ್ಟ್ ಆದೇಶಕ್ಕೆ ವಿರುದ್ದವಾಗಿ ತೋಟವನ್ನು ನಾಶ ಮಾಡಿದ್ದಾರೆ. ಇದನ್ನು ಖಂಡಿಸಿ ಸಂತ್ರಸ್ಥ ಕುಟುಂಬಸ್ಥರೊಂದಿಗೆ ಮಾ.27 ರಂದು ಬೆಳಿಗ್ಗೆ 10 ಗಂಟೆಗೆ ಸೊರಬದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದರು.

ಇದು ಪಕ್ಷಾತೀತ ಹೋರಾಟವಾಗಿದ್ದು, ಸಂಘ ಸಂಸ್ಥೆಗಳು ಪ್ರತಿಭಟನೆಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

Similar News