ಪಿರಿಯಾಪಟ್ಟಣ ತಹಶೀಲ್ದಾರ್‌ ಗೆ ಮಾಹಿತಿ ಹಕ್ಕು ಕಾಯಿದೆಯಡಿ ರೂ. 53 ಸಾವಿರ ದಂಡ

Update: 2023-03-26 11:05 GMT

ಮಂಗಳೂರು,ಮಾ.26: ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಮಾಹಿತಿ ಕೇಳಿ ಸಲ್ಲಿಸಿದ ಅರ್ಜಿಗೆ ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸದ ಒಟ್ಟು ನಾಲ್ಕು ಪ್ರತ್ಯೇಕ ಆದೇಶಗಳಲ್ಲಿ ಪಿರಿಯಾಪಟ್ಟಣ ತಾಲೂಕು ತಹಶೀಲ್ದಾರ್ ಹಾಗೂ ಮಾಹಿತಿ ಹಕ್ಕು ಅಧಿಕಾರಿಗೆ  ಕರ್ನಾಟಕ ಮಾಹಿತಿ ಹಕ್ಕು ಆಯೋಗ ಒಟ್ಟು ರೂ.53 ಸಾವಿರ ದಂಡ ವಿಧಿಸಿದೆ.

ಅರ್ಜಿದಾರರಾದ ಮಂಗಳೂರು ಮಂಗಳಾ ದೇವಿಯ ಮಿಷನ್ ಕಾಂಪೌಂಡ್ ನಿವಾಸಿ ಮುಹಮ್ಮದ್‌ ಝಮೀರ್ ಎಂಬವರು ಅಕ್ಟೋಬರ್ 2021ರಲ್ಲಿ ಪಿರಿಯಾಪಟ್ಟಣ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ತಹಶೀಲ್ದಾರ್ ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

ನಿಗದಿತ ಸಮಯದೊಳಗೆ ಸೂಕ್ತ ಮಾಹಿತಿ ನೀಡದಿರುವ ಕಾರಣ ಮತ್ತು ಮಾಹಿತಿ ಆಯೋಗದ ಆದೇಶ ಉಲ್ಲಂಘಿಸಿ ನಿರ್ಲಕ್ಷ್ಯ ವಹಿಸಿ ಅರ್ಜಿದಾರರಿಗೆ ಸತಾಯಿಸಿರುವ ಹಿನ್ನೆಲೆಯಲ್ಲಿ ಪಿರಿಯಾಟ್ಟಣ ತಹಶೀಲ್ದಾರ್ ಮತ್ತು ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ ಚಂದ್ರ ಮೌಳಿಯವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ ನಾಲ್ಕನೇ ಬಾರಿಗೆ ರೂ.25  ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಈ ದಂಡ ಮೊತ್ತವನ್ನು ತಹಶೀಲ್ದಾರ್‌ರ ಸಂಬಳದಿಂದ ಕಡಿತಗೊಳಿಸಿ ಮಾಹಿತಿ ಹಕ್ಕು ಆಯೋಗದ ಖಾತೆಗೆ ಜಮೆ ಮಾಡುವಂತೆ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರು ಆದೇಶ ನೀಡಿದ್ದಾರೆ. 

ಈ ಪ್ರಕರಣದಲ್ಲಿ ನಿಗದಿತ ಸಮಯದಲ್ಲಿ ಮಾಹಿತಿ ಒದಗಿಸದೆ ಇದ್ದ ಕಾರಣ ಮಾಹಿತಿ ಹಕ್ಕು ಕಾಯಿದೆ 20(1)ಅಡಿಯಲ್ಲಿ ಮಾಹಿತಿ ಹಕ್ಕು ಅಯೋಗ 13-12-2022 ರಂದು ದಂಡ ವಿಧಿಸುವುದಾಗಿ ಸ್ಪಷ್ಟ ನಿರ್ದೇಶನ ನೀಡಿದ್ದರೂ ತಹಶೀಲ್ದಾರ್ ವಿಚಾರಣೆಗೆ ಗೈರು ಹಾಜರಾಗಿದ್ದರು. ಸಮಂಜಸ ಹೇಳಿಕೆ ನೀಡದೆ ನಿರ್ಲಕ್ಷ್ಯ ವಹಿಸಿದ್ದ ಕಾರಣ ಮಾಹಿತಿ ಹಕ್ಕು ಅಧಿನಿಯ 2005 ಕಲಂ20(1)ರನ್ವಯ ಪಿರಿಯಾಪಟ್ಟಣ ತಾಲೂಕು ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ತಹಸೀಲ್ದಾರ್ ರವರಿಗೆ ರೂ.25,000.00 ದಂಡವಿಧಿಸಿದೆ, ಮತ್ತು ಅವರ ವೇತನದಿಂದ ಈ ದಂಡದ ಮೊತ್ತ ವನ್ನು ಕಡಿತಗೊಳಿಸಿ ಪಾವತಿಸಲು ಜನವರಿ 31, 2023ರಲ್ಲಿ ಆದೇಶಿಸಿದೆ. ಈ ಆದೇಶದ ಕ್ರಮದ ಬಗ್ಗೆ ಆಯೋಗ ಮಾರ್ಚ್ 29,2023 ರಂದು ವಿಚಾರಣೆಯನ್ನು ನಿಗದಿಪಡಿಸಿದೆ.

ಪ್ರಕರಣದ ವಿವರ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕೊಪ್ಪ ಹಾರನಹಳ್ಳಿ ಹೋಬಳಿಯ ಬೈಲುಕೊಪ್ಪ  ಗ್ರಾಮ ಪಂಚಾಯತ್ ನ ಲಕ್ಷ್ಮೀಪುರ ಗ್ರಾಮದ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಮೂಲಕ ಪಡೆಯ ಬೇಕಾಗಿದ್ದ ದಾಖಲೆಗಾಗಿ ಮಂಗಳೂರು ಮಂಗಳಾದೇವಿಯ ಮಿಷನ್ ಕಾಂಪೌಂಡ್ ನಿವಾಸಿ ಮುಹಮ್ಮದ್‌ ಝಮೀರ್ ಎಂಬವರು 2021ರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪಿರಿಯಾಪಟ್ಟಣದ ತಹಶೀಲ್ದಾರ್‌ ಗೆ ನಿಗದಿತ ಅವಧಿಯಲ್ಲಿ ಮಾಹಿತಿ ನೀಡಿಲ್ಲ ಎನ್ನುವ ಕಾರಣಕ್ಕೆ ಮಾಹಿತಿ ಆಯೋಗ ಪ್ರಥಮ ಬಾರಿಗೆ ರೂ.3000 ದಂಡ ವಿಧಿಸಿತ್ತು.

ಇದೇ ಪ್ರಕರಣದಲ್ಲಿ ತಪ್ಪು ಹಿಂಬರಹವನ್ನು ಅರ್ಜಿದಾರರಿಗೆ ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಎರಡು ತಿಂಗಳ ಸಂಬಳದಿಂದ 15,000 ರೂ.ನ್ನು ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ದಂಡ ಪಾವತಿಸಲು ಎರಡನೆ ಬಾರಿ ಆದೇಶಿಸಿತ್ತು.
20.10.2022ರಂದು ಆಯೋಗ ವಿಚಾರಣೆ ಕೋರಿ ಮಾಹಿತಿ ಒದಗಿಸಲು ನೀಡಿದ ಆದೇಶವನ್ನು ಉಲ್ಲಂಘನೆ ಮಾಡಿರುವ ಕಾರಣ ಪಿರಿಯಾಪಟ್ಟಣ ತಹಶೀಲ್ದಾರ್ ರಿಗೆ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರು ಮೂರನೇ ಬಾರಿ ರೂ.10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿತ್ತು.

ಇದೀಗ ನಾಲ್ಕನೇ ಬಾರಿ ಮಾಹಿತಿ ಹಕ್ಕಿನ ಕಾಯ್ದೆ ಉಲ್ಲಂಘನೆಯ ಹಿನ್ನಲೆಯಲ್ಲಿ ರೂ.25 ಸಾವಿರ ದಂಡ ಸೇರಿದಂತೆ ಒಟ್ಟು  ನಾಲ್ಕು ಬಾರಿ ಆಯೋಗದ ಆದೇಶದ ಪ್ರಕಾರ ತಹಶೀಲ್ದಾರ್ ಚಂದ್ರ ಮೌಳಿ ರೂ.53 ಸಾವಿರ ದಂಡವನ್ನು ತಮ್ಮ ವೇತನದಿಂದ ಪಾವತಿಸಬೇಕಾಗಿ ಬಂದಿದೆ.

Similar News