ಸಮಾಜಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ: ಸಚಿವ ಭೈರತಿ ಬಸವರಾಜು

Update: 2023-03-26 14:23 GMT

ಚಿಕ್ಕಮಗಳೂರು: ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಯಾರೂ ಮರೆಯಬಾರದು. ಇಂತಹ ಮಹನೀಯರನ್ನು ಒಂದು ಜಾತಿಗೆ ಸೀಮಿತ ಮಾಡದೇ ಅವರ ಆದರ್ಶಗಳನ್ನು ಇಡೀ ಸಮಾಜ ಪಾಲಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು ಅಭಿಪ್ರಾಯಿಸಿದರು.

ರವಿವಾರ ನಗರದ ದಂಟರಮಕ್ಕಿ ಬಡಾವಣೆಯಲ್ಲಿ ನಿರ್ಮಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡುವ ಮೂಲಕ ನಾಡಿನ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಪ್ಪಟ ದೇಶಪ್ರೇಮಿಯಾಗಿದ್ದಾರೆ. ಸಂಗೊಳ್ಳಿ ರಾಯಣ್ಣ ಈ ನಾಡಿಗೆ ನೀಡಿದ ಕೊಡುಗೆ ಅಪಾರ. ರಾಯಣ್ಣ ಕುರುಬ ಸಮುದಾಯಕ್ಕೆ ಸೇರಿದ್ದರು ಅವರು ನಾಡಿನ ಪ್ರತಿಯೊಬ್ಬರ ಸ್ವಾಭಿಮಾನದ ಸಂಕೇತ ಆಗಿದ್ದಾರೆ. ಇದಕ್ಕೆ ಕಾರಣ ರಾಯಣ್ಣ ಅವರ ಸಾಧನೆಯಾಗಿದೆ. ತಮ್ಮ ಪ್ರಾಣ ತ್ಯಾಗ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ ಸಂಗೊಳ್ಳಿ ರಾಯಣ್ಣನಂತಹ ಮಹನೀಯರನ್ನು ಜಾತಿಗೆ ಸೀಮಿತಗೊಳಿಸುವ ಕೆಲಸ ಆಗಬಾರದು. ಸಮಾಜಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ನಗರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ನೀಡಿರುವುದಲ್ಲದೇ ರಾಜ್ಯ ಸರಕಾರ ಕ್ಷೇತ್ರ ವ್ಯಾಪ್ತಿಯಲ್ಲಿರುವ 52 ಕುರುಬ ಸಮುದಾಯದ ಗ್ರಾಮಗಳಿಗೆ ಒಟ್ಟಾರೆ 9.96 ಕೋ. ರೂ, ಅನುದಾನ ನೀಡುವ ಮೂಲಕ ಸಮುದಾಯದ ಏಳಿಗೆಗೆ ಕೊಡುಗೆ ನೀಡಿದೆ. ಕ್ಷೇತ್ರದ ಶಾಸಕ ಸಿ.ಟಿ.ರವಿ ಅವರೂ ಸಮುದಾಯದವರ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನವನ್ನು ನೀಡಿದ್ದು, ಸಮುದಾಯದವರ ಎಲ್ಲ ಬೇಡಿಕೆಗಳಿಗೂ ಸರಕಾರ ಸ್ಪಂದಿಸಿದೆ ಎಂದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಂಗೊಳ್ಳಿ ರಾಯಣ್ಣ ಕುರುಬರಿಗೆ ಮಾತ್ರ ಸೀಮಿತವಾದ ವ್ಯಕ್ತಿಯಲ್ಲ, ಅವರು ಜಾತ್ಯತೀಯ ನಾಯಕ. ಕಿತ್ತೂರು ರಾಣಿ ಚೆನ್ನಮ್ಮನ ಆಸ್ಥಾನದಲ್ಲಿದ್ದುಕೊಂಡು ಬ್ರಿಟಿಷರಿಂದ ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ಎಲ್ಲ ಜಾತಿ, ಜನಾಂಗದವರನ್ನು ಒಟ್ಟುಗೂಡಿಸಿ ಹೋರಾಡಿದ ಅಪ್ರತಿಮ ದೇಶಭಕ್ತ ರಾಯಣ್ಣ ಜಾತಿ ಮೀರಿ ಬೆಳೆದ ವ್ಯಕ್ತಿತ್ವದವರು.

ಮಾಜಿ ಎಮ್ಮೆಲ್ಸಿ, ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಮಾತನಾಡಿ, ರಾಯಣ್ಣ ಒಂದು ಸಮುದಾಯದ, ಒಂದು ಪಕ್ಷಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ಅವರು ನಾಡಿನ ಎಲ್ಲ ಜಾತಿ, ಧರ್ಮದವರಿಗೂ ಸೇರಿದ ಆಸ್ತಿಯಾಗಿದ್ದಾರೆ. ಜಾತಿ, ಧರ್ಮ ಮೀರಿದ ವ್ಯಕ್ತಿತ್ವವನ್ನು ಹೊಂದಿದ್ದ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದು ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದ್ದರೇ, ಅವರು ಮರಣ ಹೊಂದಿದ ದಿನದಂದೇ ಗಣರಾಜ್ಯೋತ್ಸವ ದಿನಾಚರಣೆ ನಡೆಯುತ್ತಿದೆ. ಇಂತಹ ಅಪ್ಪಟ ದೇಶಭಕ್ತ ನಮ್ಮ ಸಮುದಾಯಕ್ಕೆ ಸೇರಿದವರು ಎಂಬುದು ಹೆಮ್ಮೆಯ ವಿಚಾರವಾಗಿದ್ದರೂ ರಾಯಣ್ಣ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸವನ್ನು ಯಾರೂ ಮಡಬಾರದು ಎಂದರು.

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಗರದ ಕನಕ ಭವನ ನಿರ್ಮಾಣಕ್ಕೆ ಜಾಗ ಹಾಗೂ ಅನುದಾನ ನೀಡಿದ್ದು, ರಾಯಣ್ಣ ಅವರ ಪ್ರತಿಮೆ ನಿರ್ಮಾಣಕ್ಕೂ ಅನುದಾನ ನೀಡಲಾಗಿದೆ. ಜಿಲ್ಲೆಯ ಮೆಡಿಕಲ್ ಕಾಲೇಜು ಮಂಜೂರಾತಿಯಲ್ಲಿ ಸಿದ್ದರಾಮಯ್ಯ ಸರಕಾರದ ಕೂಡುಗೆ ಇದೆ. ಜಿಲ್ಲೆಯಲ್ಲಿರುವ ಕುರುಬ ಸಮುದಾಯದ ಅಭಿವೃದ್ಧಿಗೆ ಎಲ್ಲ ಸರಕಾರಗಳು, ಜನಪ್ರತಿನಿಧಿಗಳು ಅನುದಾನ ನೀಡಿದ್ದಾರೆ ಎಂದ ಅವರು, ಇತ್ತೀಚೆಗೆ ಸಮುದಾಯದ ಯುವಜನರನ್ನು ಜಾತಿ, ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದ್ದು, ಈ ಬಗ್ಗೆ ಯುವಜನರು ಎಚ್ಚರಿಕೆಯಿಂದಿರಬೇಕು ಎಂದರು.

ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿದರು. ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಸಂಗೋಳ್ಳಿ ರಾಯಣ್ಣ ವೇದಿಕೆ ಅಧ್ಯಕ್ಷ ಪುಷ್ಪರಾಜ್, ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಮುಖಂಡರಾದ ಮಂಜೇಗೌಡ, ರವೀಂದ್ರ ಬೆಳವಾಡಿ, ಡಿ.ಸಿ.ಪುಟ್ಟೇಗೌಡ, ಈಶ್ವರಳ್ಳಿ ಮಹೇಶ್, ಜಯಣ್ಣ, ಮೋಹನ್‍ಕುಮಾರ್, ರಾಜೀವ್, ಬಸವರಾಜು, ಬೀರೇಗೌಡ, ದಾಸೇಗೌಡ, ವೆಂಕಟೇಶ್,  ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ನಗರಸಭೆ ಅಧ್ಯಕ್ಷ ವೇಣುಗೋಪಾಲ್, ಜಿಪಂ ಮಾಜಿ ಅಧ್ಯಕ್ಷ ಚೈತ್ರಶ್ರೀ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ, ಸಂಗೊಳ್ಳಿ ರಾಯಣ್ಣ ಶೌರ್ಯ, ಸ್ವಾಭಿಮಾನ, ಏಕತೆ, ದೇಶಭಕ್ತಿಯ ಸಂಕೇತ. ರಾಯಣ್ಣ ಅವರ ಪ್ರತಿಮೆ ನಿರ್ಮಾಣ ಮಾಡಿರುವ ಉದ್ದೇಶ ಪ್ರತಿಮೆಯು ಯುವಜನರಲ್ಲಿ ಶೌರ್ಯ, ದೇಶಭಕ್ತಿ, ಏಕತೆ, ಸ್ವಾಭಿಮಾನಕ್ಕೆ ಪ್ರೇರಣೆ ನೀಡಬೇಕೆಂಬುದಾಗಿದೆ ಎಂದ ಅವರು, ಚಿಕ್ಕಮಗಳೂರು ಕ್ಷೇತ್ರದ ಶಾಸಕನಾಗಿ ತಾನೆಂದೂ ಜಾತಿ ರಾಜಕಾರಣ ಮಾಡಿಲ್ಲ, ಅಭಿವೃದ್ಧಿ ರಾಜಕಾರಣ ಮಾಡಿದ್ದೇನೆ. ಇದರಿಂದಾಗಿ ನಾಲ್ಕು ಬಾರಿ ಶಾಸಕನಾಗಿದ್ದೇನೆ. ವಿಶ್ವಾಸ ರಾಜಕಾರಣ ಶಾಶ್ವತ, ಒಡೆದಾಳುವ ರಾಜಕಾರಣ ತಾತ್ಕಾಲಿಕ, ನನ್ನದು ವಿಶ್ವಾಸದ ರಾಜಕಾರಣ ಎಂದರು.

Similar News