ಚಿಕ್ಕಮಗಳೂರು | ಅಪಘಾತಕ್ಕೀಡಾದ ಕಾರಿನಲ್ಲಿ ಮಾರಕಾಸ್ತ್ರ, ಮದ್ಯ, ಸಿ.ಟಿ.ಭಾವಚಿತ್ರದ ಕ್ಯಾಲೆಂಡರ್ ಪತ್ತೆ

Update: 2023-03-27 06:15 GMT

ಚಿಕ್ಕಮಗಳೂರು, ಮಾ.27: ಅಪಘಾತಕ್ಕೀಡಾದ ಕಾರೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸ್ಥಳೀಯ ಶಾಸಕ ಸಿ.ಟಿ.ರವಿಯವರ ಭಾವಚಿತ್ರವುಳ್ಳ ಕ್ಯಾಲೆಂಡರ್, ಮಾರಕಾಸ್ತ್ರ ಹಾಗೂ ಮದ್ಯದ ಪ್ಯಾಕೇಟ್ ಗಳು ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್‌ನಲ್ಲಿ ರವಿವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ.

ನಗರದ ಎಐಟಿ ಸರ್ಕಲ್‌ ಬಳಿ ಕಳೆದ ರಾತ್ರಿ  ಕಾರುವೊಂದರ ಬ್ರೇಕ್ ಡೌನ್‌ ಆಗಿದೆ. ಈ ವೇಳೆ ಕಾರನ್ನು ತಳ್ಳಲು ಮುಂದಾದಾಗ ಚಾಲಕ ಹಾಗೂ ಅಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ. ಆ ಸಂದರ್ಭ  ಕಾರಿನ ಒಳಗೆ ನೋಡಿದಾಗ ಅದರಲ್ಲಿ ಭಾರೀ ಪ್ರಮಾಣದ ಮದ್ಯದ ಪ್ಯಾಕೇಟ್ ಗಳು, ಲಾಂಗ್ ಹಾಗೂ ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಲೇ ಎಐಟಿ ಸರ್ಕಲ್ ಬಳಿ ಜಮಾಯಿಸಿದ ಸ್ಥಳೀಯರು ಕಾರಿನಲ್ಲಿದ್ದ ಮದ್ಯ, ಕ್ಯಾಲೆಂಡರ್, ಲಾಂಗ್ ಅನ್ನು ಹೊರತೆಗೆದಿದ್ದಾರೆ. ಸಿ.ಟಿ.ರವಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಓಟಿಗಾಗಿ ಬಡವರಿಗೆ ಮದ್ಯ ಹಂಚುತ್ತಿರುವ ಸಿ.ಟಿ.ರವಿಯನ್ನು ಬಂಧಿಸುವಂತೆ ಒತ್ತಾಯಿಸಿದರು. ಈ ವೇಳೆ ಓಡಿ ಹೋಗಲು ಯತ್ನಿಸಿದ ಕಾರು ಚಾಲಕನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.   

ಚಿಕ್ಕಮಗಳೂರು ನಗರ ಪೋಲಿಸ್ ಠಾಣೆಯ ಪೋಲಿಸರು‌‌ ಮದ್ಯ, ಮಾರಕಾಯುಧ ಹಾಗೂ ಕ್ಯಾಲೆಂಡರ್ ಗಳನ್ನು ವಶಕ್ಕೆ ಪಡೆದಿದ್ದಾರೆ.

Full View

Similar News