ಎಪ್ರಿಲ್ 5ರಂದು ಕೋಲಾರಕ್ಕೆ ರಾಹುಲ್ ಗಾಂಧಿ: 'ಸತ್ಯಮೇವ ಜಯತೇ' ಸಮಾವೇಶದಲ್ಲಿ ಭಾಗಿ

Update: 2023-03-28 15:23 GMT

ಕೋಲಾರ, ಮಾ. 28. ಪ್ರಜಾಪ್ರಭುತ್ವ ಉಳಿವಿಗಾಗಿ ಹಾಗೂ ಜನತೆಗೆ ಸತ್ಯ ತಿಳಿಸಲು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಎಪ್ರಿಲ್ 5 ರಂದು ಕೋಲಾರದಲ್ಲಿ ನಡೆಯುವ 'ಸತ್ಯಮೇವ ಜಯತೇ' ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ  ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಾ 2019 ರ ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಚುನಾವಣಾ ಭಾಷಣದಲ್ಲಿ ಮೋದಿ ಜನಾಂಗ ಕಳ್ಳರು ಎಂಬ ಪದ ಬಳಿಸಿದ ಹಿನ್ನಲೆಯಲ್ಲಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದು,ಇದರ ಹಿನ್ನಲೆಯಲ್ಲಿ ರಾಹುಲ್ ಗಾಂಧಿಯವರಿಗೆ ಶಿಕ್ಷೆ ಕೊಡಿಸಲಾಗಿದೆ. ಈ ಸಣ್ಣ ವಿಚಾರವನ್ನು ಇಟ್ಟುಕೊಂಡು ರಾಹುಲ್ ಗಾಂಧಿ ಯವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹ ಗೊಳಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ,ಸಂವಿಧಾನಕ್ಕೆ ಅಪಮಾನ ಮಾಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಡೀ ದೇಶ ತಲೆ ತಗ್ಗಿಸುವಂತೆ ಮಾಡಿದೆ ಎಂದರು.

ರಾಹುಲ್ ಗಾಂಧಿಯವರು ದೇಶದ ಏಕತೆಗಾಗಿ ಭಾರತ್ ಜೋಡೊ ನಡೆಸಿದ ಮೇಲೆ ಕಾಂಗ್ರೆಸ್ ಪಕ್ಷ ಬಲಿಷ್ಟವಾಗಿರುವುದನ್ನು ಸಹಿಸಲಾಗದೆ  ಭಯ ಗೊಂಡಿರುವ ಬಿಜೆಪಿ ಪಕ್ಷದ ಮುಖಂಡರುಗಳು ರಾಹುಲ್ ಗಾಂಧಿಯವರನ್ನು ಜೈಲಿಗೆ ಕಳುಹಿಸಿ ಕಾಂಗ್ರೆಸ್ ನ ವರ್ಚಸ್ಸನ್ನು ಕಡಿಮೆ ಗೊಳಿಸಲು ಚಿಂತನೆ ನಡೆಸಿ ತಮಗೆ ಅನುಕೂಲ ಇರುವ ನ್ಯಾಯಾಧೀಶರ ಮೂಲಕ ಎರಡು ವರ್ಷ ಶಿಕ್ಷೆಗೆ ಒಳಪಡಿಸಿ ನ್ಯಾಯಾಲಯದ ಅದೇಶ ಬರುವುದಕ್ಕೆ ಮೊದಲೇ ಲೋಕಸಭೆ ಸ್ಪೀಕರ್ ಮೇಲೆ ಒತ್ತಡ ಹಾಕಿ ರಾಹುಲ್ ಗಾಂಧಿಯವರನ್ನು ಸಂಸದರ ಸ್ಥಾನದಿಂದ ಅನರ್ಹತೆ ಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರಲ್ಲದೆ ಕೇರಳದ ವಯನಾಡಿನಲ್ಲಿ ಉಪ ಚುನಾವಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದು ಈ ಎಲ್ಲಾ ಘಟನೆಗಳ ಬಗ್ಗೆ ದೇಶದ ಅನೇಕ ರಾಜಕೀಯ ಮುಖಂಡರುಗಳು ಖಂಡಿಸಿದ್ದಾರೆಂದರು.

ಬಿ.ಜೆ.ಪಿ ಸರ್ಕಾರ ತನ್ನ ತಲೆಯ ಮೇಲೆ ತಾನೇ ಮಣ್ಣು ಹಾಕಿಕೊಂಡಿದ್ದು,ಮಾಡಿದ್ದು ಉಣ್ಣೋ ಮಾರಾಯ ಎಂಬಂತೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಮತ್ತು ಮೋದಿರವರು ಮನೆ ಸೇರಲಿದ್ದು, ಮುಂಬರುವ ವಿಧಾನಸಭಾ  ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿಯಲಿದೆ ಎಂದರು.

ರಾಹುಲ್ ಗಾಂಧಿ ಅನರ್ಹ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರದಲ್ಲಿ ಸಮಾವೇಶ ಮಾಡುವಂತೆ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರು ಸೂಚನೆ ನೀಡಿದ್ದು, ಅದರಂತೆ ಎಪ್ರಿಲ್ 5 ರಂದು ಕೋಲಾರದಲ್ಲಿ ಸೂಕ್ತ ಸ್ಥಳವನ್ನು ನಿಗದಿಪಡಿಸಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಸುಮಾರ ಒಂದು ಲಕ್ಷ ಜನ ಸೇರಿಸುವ ಮೂಲಕ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯದ ಮುಖಂಡರುಗಳು ಭಾಗವಹಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಚಾರ ಸಮಿತಿ ಸಂಚಾಲಕ ಎಲ್.ಎ.ಮಂಜುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪ್ರಸಾದ್ ಬಾಬು,ಉದಯಶಂಕರ್,ಎಸ್.ಸಿ ಘಟಕದ ಜಿಲ್ಲಾ ಅಧ್ಯಕ್ಷ ಜಯದೇವ್,ಎಸ್.ಟಿ.ಘಟಕದ ಜಿಲ್ಲಾ ಅಧ್ಯಕ್ಷ ನಾಗರಾಜ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರತ್ನಮ್ಮ,ಮಾಜಿ ಜಿಲ್ಲಾಧ್ಯಕ್ಷ ಬಿಸ್ಸೇಗೌಡ, ರಾಮ್ ಪ್ರಸಾದ್,ಎಕ್ಬಾಲ್ , ಶಾಸ್ತ್ರೀ,ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Similar News