ಮಾ.30: ಬಂಜಾರ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಬೃಹತ್ ಕಾಲ್ನಡಿಗೆ ಜಾಥಾ

Update: 2023-03-28 18:20 GMT

ಶಿವಮೊಗ್ಗ,ಮಾ.28: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಆಗ್ರಹಿಸಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿರುವುದನ್ನು ವಿರೋಧಿಸಿ ಬಂಜಾರ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಬಂಜಾರ ಸಮಾಜ, ಮಾ.30ರಂದು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ ಎಂದು ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕ ಗಿರೀಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ರಾಜ್ಯ ಸರಕಾರ ಒಳಮೀಸಲಾತಿಗೆ ಸಂಬಂಧಿಸಿದಂತೆ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡಿರುವುದು ರಾಜಕೀಯ ಪ್ರೇರಿತವಾಗಿದೆ. ವೋಟಿಗಾಗಿ ಮೀಸಲಾತಿಯ ವರ್ಗೀಕರಣ ಶಿಫಾರಸು ಮಾಡಿದೆ. ಇದನ್ನು ವಿರೋಧಿಸಿ ಈಗಾಲೇ ಬಂಜಾರ ಸಮುದಾಯ ಮತ್ತು ಇತರ ಸಮುದಾಯಗಳು ಬಹುದೊಡ್ಡ ಹೋರಾಟವನ್ನೇ ಹಮ್ಮಿಕೊಂಡಿವೆ. ರಾಜ್ಯ ಸರಕಾರದ ಈ ಚುನಾವಣೆಯ ಸಂದರ್ಭದ ಗಿಮಿಕ್ ವಿರೋಧಿಸಿ ನಾವು ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಶಿಕಾರಿಪುರದಲ್ಲಿ ನಡೆದ ಘಟನೆಗೆ ಸಂಬಧಿಸಿದಂತೆ ಮಾತನಾಡಿದ ಅವರು, ಇದೊಂದು ದುರದೃಷ್ಟಕರ. ನಾವು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ನಿಜ. ಆದರೆ, ನಮ್ಮ ಪ್ರತಿಭಟನೆ ತಹಶೀಲ್ದಾರ್ ಕಚೇರಿ ಎದುರು ನಡೆಯುತ್ತಿತ್ತು. ಪ್ರತಿಭಟನೆಯನ್ನು ಹತಿಕ್ಕುವ ಉದ್ದೇಶದಿಂದ ಅಲ್ಲಿ ನಮಗೆ ಅವಕಾಶ ನೀಡದೆ, ಮನವಿ ಸ್ವೀಕರಿಸದೆ ಗೇಟ್ ಹಾಕಿದರು. ಇದನ್ನು ಪ್ರಶ್ನಿಸಲು ನಾವು ನಮ್ಮ ಕ್ಷೇತ್ರದ ಶಾಸಕರು ಹಾಗೂ ಸಂಸದರ ಮನೆಗೆ ಹೋದೆವು ಎಂದರು.

 ಆದರೆ, ಅಲ್ಲಿ ನಮ್ಮನ್ನು ಪೊಲೀಸರು ತಡೆದುದಲ್ಲದೆ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದರು. ಹಲವರನ್ನು ಬಂಧಿಸಿದರು. ಇದನ್ನು ನಾವು ಖಂಡಿಸುತ್ತೇವೆ ಮತ್ತು ಘಟನೆಗೆ ಸಂಬಂಧಿಸಿದಂತೆ ಕೆಲವರು ಯಡಿಯೂರಪ್ಪ ಮನೆ ಮೇಲೆ ಕಲ್ಲು ಬೀಸಿರಬಹುದು. ಇದು ದುರದೃಷ್ಟಕರ ಘಟನೆ. ಪೊಲೀಸರು ನಿಜವಾಗಿ ಯಾರು ತಪ್ಪುಮಾಡಿದ್ದಾರೋ ಅವರನ್ನು ಬಂಧಿಸಲಿ, ಬೇಡ ಎನ್ನುವುದಿಲ್ಲ. ಆದರೆ, ಅಮಾಯಕರನ್ನು, ಪ್ರತಿಭಟನೆಯಲ್ಲಿ ಭಾಗವಹಿಸದಿರುವವರನ್ನೂ ಬಂಧಿಸಿದ್ದಾರೆ. ಮತ್ತು ಕಾಂಗ್ರೆಸ್ ಕಾರ್ಯಕರ್ತರು ಎಂಬ ಕಾರಣಕ್ಕೆ ಬಂಧಿಸಿದ್ದಾರೆ ಇದು ಸರಿಯಲ್ಲ ಎಂದು ಅವರು ಹೇಳಿದರು.

ಈ ಘಟನೆ ಈಗ ರಾಜಕೀಯ ಬಣ್ಣಕ್ಕೆ ತಿರುಗಿದೆ. ಪ್ರತಿಭಟನೆಗೆ ಕಾಂಗ್ರೆಸ್ ಕಾರಣ ಎಂದ ಮುಖ್ಯಮಂತ್ರಿ ಹೇಳುತ್ತಾರೆ. ಆದರೆ, ಸ್ವತಃ ಬಿ.ಎಸ್.ಯಡಿಯೂರಪ್ಪನವರು ನಾನು ಯಾರ ಮೇಲೂ ತಪ್ಪು ಹೊರಿಸುವುದಿಲ್ಲ ಎಂದು ಹೇಳುತ್ತಾರೆ. ನಿಜವಾಗಿಯೂ ಈ ಪ್ರತಿಭಟನೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹೀಗೆ ಎಲ್ಲಾ ಪಕ್ಷದವರೂ ಇದ್ದಾರೆ. ಇದು ಪಕ್ಷಾತೀತ ಹೋರಾಟವಾಗಿದೆ. ಆದರೆ, ಬಿಜೆಪಿ ಇದನ್ನು ರಾಜಕಾರಣಗೊಳಿಸುತ್ತಿರುವುದು ಸರಿಯಲ್ಲ ಎಂದರು.

ಮಾ.30ರಂದು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕಾಲ್ನಡಿಗೆ ಜಾಥಾದ ಮೂಲಕ ನಾವು ತಲುಪುತ್ತೇವೆ. ನಮಗೆ ಪ್ರತಿಭಟನೆಗೆ ಅವಕಾಶ ನೀಡದೆ ಹೋದರೆ ನಮ್ಮೆಲ್ಲರನ್ನು ಸಾಮೂಹಿಕವಾಗಿ ಬಂಧಿಸಲಿ ಎಂದು ಗಿರೀಸ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿನಯ್ ರಾಜಾವತ್, ಉಮಾ ಮಹೆಶ್ವರ ನಾಯ್ಕ, ಬಸವರಾಜ ನಾಯ್ಕ, ಶಶಿ ನಾಯ್ಕ, ಚಿತ್ರಪ್ಪ, ಅಭಿಷೇಕ್ ಸೇರಿದಂತೆ ಹಲವರಿದ್ದರು.


‘ಅಮಾಯಕರ ಬಿಡುಗಡೆಗೆ ಆಗ್ರಹ’

ನಮ್ಮ ಪ್ರಮುಖ ಬೇಡಿಕೆಗಳೆಂದರೆ, ಶಿಕಾರಿಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲಾಗಿದೆ. ಸುಮಾರು 25ಕ್ಕೂ ಹೆಚ್ಚು ಅಮಾಯಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಕೂಡಲೇ ಬಂಧಿತರ ಬಿಡುಗಡೆಯಾಗಬೇಕು. ಕೇಸು ವಾಪಸ್ ತೆಗದುಕೊಳ್ಳಬೇಕು ಮತ್ತು ಕೇಂದ್ರಕ್ಕೆ ನೀಡಿದ ಶಿಫಾರಸನ್ನು ವಾಪಸ್ ಪಡೆಯಬೇಕು ಹಾಗೂ ನಮ್ಮ ಸಮಾಜದ ಪ್ರಮುಖರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ವರದಿ ವಾಪಸ್ ತರಿಸಿಕೊಳ್ಳದಿದ್ದರೆ ಅವರು ರಾಜೀನಾಮೆ ಕೊಡಬೇಕು ಮತ್ತು ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ಬಂಜಾರ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕ ಗಿರೀಶ್ ಹೇಳಿದರು.

Similar News