ಸಾರಿಗೆ ನೌಕರರಿಗೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಸರಕಾರದ ಆದೇಶ

Update: 2023-03-30 15:40 GMT

ಬೆಂಗಳೂರು, ಮಾ.30: ರಾಜ್ಯ ಸಾರಿಗೆ ಇಲಾಖೆ ನೌಕರರ ವೇತನ ಶ್ರೇಣಿ ಶೇ.15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. 2023ರ ಮಾರ್ಚ್‍ನಿಂದಲೇ ನೂತನ ವೇತನ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ರಾಜ್ಯ ಸಾರಿಗೆಯ ನಾಲ್ಕು ನಿಗಮಗಳ ಸಾರಿಗೆ(ಕೆಎಸ್ಸಾರ್ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ವಾಯುವ್ಯ ಕರ್ನಾಟಕ ಸಾರಿಗೆ) ನೌಕರರಿಗೆ ವೇತನ ಹೆಚ್ಚಳವಾಗಿದೆ. ಸಾರಿಗೆ ನೌಕರರು ಮಾರ್ಚ್ 21ರಿಂದ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಮುಷ್ಕರ ನಡೆಸಿದ್ದರು. ಆದರೆ, ಮೂಲ ವೇತನದಲ್ಲಿ ಶೇ.25ರಷ್ಟು ಹೆಚ್ಚಳ ಮಾಡಬೇಕು ಎಂಬುದು ಸಾರಿಗೆ ನೌಕರರ ಬೇಡಿಕೆಯಾಗಿತ್ತು.

ಸಾರಿಗೆ ಸಚಿವ ಶ್ರೀರಾಮುಲು ಅವರು ಸಾರಿಗೆ ನೌಕರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಶೇ.8ರಿಂದ 10ರಷ್ಟು ವೇತನ ಏರಿಕೆ ಮಾಡುವ ಭರವಸೆ ನೀಡಿದ್ದರೂ ನೌಕರರು ಒಪ್ಪಿರಲಿಲ್ಲ. ಕೊನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಶೇ.15ರಷ್ಟು ಹೆಚ್ಚಿಸುವುದಾಗಿ ಹೇಳಿ ಮನವೊಲಿಸಿದ್ದರು. ಹೀಗಾಗಿ, ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆದಿದ್ದರು. ಇದೀಗ ಶೇ.15ರಷ್ಟು ಹೆಚ್ಚಿಸಿ ಆದೇಶಿಸಲಾಗಿದೆ.

Similar News