ಟೋಲ್ ಶುಲ್ಕ ಹೆಚ್ಚಳ: ಒಪ್ಪಿಕೊಳ್ಳುವುದು ಕಷ್ಟ, ಆದರೂ ಇದು ಸಹಜ ಪ್ರಕ್ರಿಯೆ ಎಂದ ಸಂಸದ ಪ್ರತಾಪ್ ಸಿಂಹ

Update: 2023-03-31 15:55 GMT

ಬೆಂಗಳೂರು: ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿರುವ ಮೈಸೂರು-ಬೆಂಗಳೂರು ದಶಪಥ ರಸ್ತೆಯ ಸುಂಕ ಏರಿಕೆ ಆಗಿರುವುದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಂಸದ ಪ್ರತಾಪ್ ಸಿಂಹ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಸುಂಕ ಏರಿಕೆ ಆಗಿರೋದು ನಿಜ, ಆದರೆ ಈ ಏರಿಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.  

ಹೈವೇ ಉದ್ಘಾಟನೆ ಆಗುವಾಗ ಬೆಂಗಳೂರಿನಿಂದ ನಿಡಘಟ್ಟವರೆಗೆ 135 ರೂ. ಟೋಲ್‌ ಶುಲ್ಕ ನಗದಿ ಮಾಡಿದ್ದೆವು, ಈಗ ಅದು 165 ರೂ. ಆಗಿದೆ. ಇದನ್ನು ಒಪ್ಪಿಕೊಳ್ಳುವುದು ಕಷ್ಟ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹೆದ್ದಾರಿ ಸಚಿವಾಲಯದ ಅಡಿಯಲ್ಲಿ ಬರುವ ದೇಶದ ಎಲ್ಲಾ ಟೋಲ್‌ ರಸ್ತೆಗಳಲ್ಲೂ 7% ಗಿಂತ ಹೆಚ್ಚು ಸುಂಕ ಏರಿಕೆ ಆಗಿದೆ. ಇದು ಬೆಂ-ಮೈ ಹೈವೇಗೆ ಮಾತ್ರ ಸೀಮಿತ ಅಲ್ಲ. ಆದರೆ, ಬೆಂ-ಮೈ ಟೋಲ್‌ ಆರಂಭವಾಗಿ 15 ದಿವಸ ಮಾತ್ರ ಆಗಿದೆ. ಏಕಾಏಕಿಯಾಗಿ 165 ರೂ. ಗೆ ಏರಿಸಿರುವುದು ಒಪ್ಪಿಕೊಳ್ಳೋದಿಕ್ಕೆ ಕಷ್ಟ ಆಗುತ್ತೆ. ಆದರೆ, ಇದು ಸಹಜ ಪ್ರಕ್ರಿಯೆ. ಎಲ್ಲಾ ವರ್ಷ ಹೀಗೆ ಮಾಡಲಾಗುತ್ತೆ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ. 

ಹೊಸ ಹಣಕಾಸು ವರ್ಷ ಜಾರಿಗೆ ಬರುವಾಗ ಟೋಲ್‌ ಶುಲ್ಕ ಜಾಸ್ತಿ ಮಾಡಲಾಗಿದೆ. ಎಲ್ಲಾ ಕಡೆ ಏರುವಂತೆ ಇಲ್ಲೂ ಏರಿಕೆ ಆಗಿದೆ. 30 ರೂ. ಅಷ್ಟು ಏರಿಕೆ ಆಗಿದೆ. ಈ ಬಗ್ಗೆ ನಾನು NHAI ಚೇರ್‌ಮೆನ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಈ ಬೆಲೆ ಏರಿಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಮನವಿ ಮಾಡಿದ್ದೇನೆ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ವರುಣಾದಿಂದ ಸ್ಪರ್ಧೆ ಇಲ್ಲ: ವಿಜಯೇಂದ್ರ ಸ್ಪರ್ಧೆ ಗೊಂದಲಕ್ಕೆ ಬಿಎಸ್‌ವೈ ತೆರೆ

Similar News