ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧತೆ: ಮದ್ಯ ಮಾರಾಟ ನಿಷೇಧ, ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಣೆ

Update: 2023-03-31 17:23 GMT

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ಮುಕ್ತ, ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತದಾನ ನಡೆಯುವ ದಿನ (ಮೇ 10) ಹಾಗೂ ಮತಗಳ ಎಣಿಕೆಯ ದಿನ(ಮೇ 13)ದಂದು ರಾಜ್ಯಾದ್ಯಂತ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಿದೆ.

ಹೊಟೇಲ್, ರೆಸ್ಟೊರೆಂಟ್, ಮದ್ಯದಂಗಡಿ, ಪಂಚತಾರಾ ಹೊಟೇಲ್, ಸಗಟು ವ್ಯಾಪಾರ ಸೇರಿದಂತೆ ಎಲ್ಲಿಯೂ ಮದ್ಯ ಮಾರಾಟ ಮಾಡುವಂತಿಲ್ಲ. ಮತದಾನದ ದಿನ ತುರ್ತು ಸೇವೆ ಹಾಗೂ ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟಿರುವ ಸಿಬ್ಬಂದಿಗಳು ಹೊರತುಪಡಿಸಿ ಇತರೆ ಕಾರ್ಮಿಕರು, ಖಾಸಗಿ ಸಂಸ್ಥೆಗಳ ಸಿಬ್ಬಂದಿಗೆ ವೇತನ ಸಹಿತ ರಜೆಯನ್ನು ಘೋಷಿಸಿದೆ.

ಪ್ರಜಾಪ್ರಭುತ್ವದಲ್ಲಿ ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ಬಯಸಿರುವ ಚುನಾವಣಾ ಆಯೋಗವು, ಮತದಾನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂಬ ಉದ್ದೇಶದಿಂದ ಮೇ 10ರಂದು ಮತದಾನದ ಪ್ರಯುಕ್ತ ವೇತನ ಸಹಿತ ರಜೆ ಘೋಷಣೆ ಮಾಡಿದೆ. 

ಸೇನೆಯಲ್ಲಿ ಕೆಲಸ ಮಾಡುವವರು, ಅನಿವಾಸಿ ಭಾರತೀಯರು(ಎನ್‍ಆರ್ ಐ) ಎಲೆಕ್ಟ್ರಾನಿಕಲಿ ಟ್ರಾನ್ಸ್ ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಪೇಪರ್ ವ್ಯವಸ್ಥೆ ಮೂಲಕ ತಮ್ಮ ಹಕ್ಕನ್ನು ಚಲಾಯಿಸುತ್ತಾರೆ. ಇವುಗಳ ಮತ ಎಣಿಕೆ ಪ್ರಾರಂಭಿಸುವ ವೇಳೆ ರಿಟರ್ನಿಂಗ್ ಅಧಿಕಾರಿಗಳು ಮತ್ತು ಸಹಾಯಕ ರಿಟರ್ನಿಂಗ್ ಅಧಿಕಾರಿಗಳು ಮೊಬೈಲ್ ಅನ್ನು ಪಾಸ್‍ವರ್ಡ್‍ಗಾಗಿ ಮಾತ್ರ ಬಳಕೆ ಮಾಡಬೇಕು. ಪಾಸ್‍ವರ್ಡ್ ಪ್ರಕ್ರಿಯೆ ಮುಗಿದ ಬಳಿಕ ಮೊಬೈಲ್ ಅನ್ನು ಮತ ಎಣಿಕೆ ಕೇಂದ್ರದ ಹಿರಿಯ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮೇ 13ರಂದು ಮತಗಳ ಎಣಿಕೆ ಕಾರ್ಯವನ್ನು ಬೆಳಗ್ಗೆ 8 ಗಂಟೆಗೆ ನಿಗದಿಯಂತೆ ಆರಂಭಿಸಬೇಕು. ಇದಕ್ಕಾಗಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಸಿದ್ಧವಾಗಿರಬೇಕು ಎಂದು ಚುನಾವಣಾ ಆಯೋಗವು ಸೂಚಿಸಿದೆ.

Similar News