ಚನ್ನಕೇಶವ ರಥೋತ್ಸವದಲ್ಲಿ ಕುರ್ಆನ್ ಪಠಣ: ಸೌಹಾರ್ದ ಸಂದೇಶಕ್ಕೆ ಮತ್ತೊಮ್ಮೆ ಸಾಕ್ಷಿಯಾದ ಬೇಲೂರು
ಸಂಘಪರಿವಾರದಿಂದ ವಿರೋಧ, ಪ್ರತಿಭಟನೆ
Update: 2023-04-04 08:44 GMT
ಬೇಲೂರು, ಎ.4: ಶೀ ಚನ್ನಕೇಶವ ರಥೋತ್ಸವದಲ್ಲಿ ಕುರ್ಆನ್ ಪಠಣ ಮಾಡಿ ಚಿಕ್ಕ ತೇರಿಗೆ ಚಾಲನೆ ನೀಡುವ ಮೂಲಕ, ಸೌಹಾರ್ದ ಸಂದೇಶಕ್ಕೆ ಬೇಲೂರು ಸಾಕ್ಷಿಯಾಯಿತು.
ಬೇಲೂರಿನ ದೊಡ್ಡ ಮೇದೂರಿನ ಸೈಯದ್ ಸಜ್ಜಾದ್ ಖಾಝಿ ಮತ್ತು ಅವರ ಕುಟುಂಬದ ಇಬ್ಬರು ಸದಸ್ಯರು ಕುರ್ಆನ್ ಪಾರಾಯಣ ನೆರವೇರಿಸಿದರು.
ಕುರ್ಆನ್ ಪಠಣ ವಿರೋಧಿಸಿ ಕೆಲವು ಸಂಘಪರಿವಾರದ ಕಾರ್ಯಕರ್ತರು ಘೋಷಣೆ ಕೂಗಿದರು. ಈ ಹಿನ್ನೆಲೆಯಲ್ಲಿ ಖಾಝಿಯವರಿಗೆ ಪೊಲೀಸ್ ಭದ್ರತೆಯನ್ನು ನೀಡಲಾಗಿತ್ತು.
ಕುರಾನ್ ಪಠಣ ಕುರಿತು ಉಂಟಾದ ಗೊಂದಲಗಳನ್ನು ಪರಿಶೀಲಿಸಲು ಧಾರ್ಮಿಕ ದತ್ತಿ ಇಲಾಖೆ ಕಚೇರಿಯ ಹಿರಿಯ ಆಗಮ ಪಂಡಿತ ವಿಜಯ್ ಕುಮಾರ್ ಮಾ. 30ರಂದು ದೇಗುಲಕ್ಕೆ ಆಗಮಿಸಿದ್ದರು.
ಈ ಬಾರಿ ಚನ್ನಕೇಶವ ಸ್ವಾಮಿ ರಥೋತ್ಸವದಲ್ಲಿ ರಥದ ಮುಂದೆ ಕುರಾನ್ ಪಠಣ (ದೇವರಿಗೆ ವಂದನೆ) ಮಾಡದೇ, ಸಂಪ್ರದಾಯದಂತೆ ಮೆಟ್ಟಿಲುಗಳ ಬಳಿ ನಿಂತು ವಂದನೆ ಸಲ್ಲಿಸಲು ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಬಂದಿರುವುದಾಗಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ತಿಳಿಸಿದ್ದಾರೆ.