ಯೋಗೀಶ್ ಗೌಡರ್ ಹತ್ಯೆ ಪ್ರಕರಣ: ಮಾಫಿ ಸಾಕ್ಷಿಗೆ ಹೈಕೋರ್ಟ್ ಒಪ್ಪಿಗೆ
ಬೆಂಗಳೂರು, ಎ.6: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದ 17ನೆ ಆರೋಪಿ ಶಿವಾನಂದ ಶ್ರೀಶೈಲ ಬಿರಾದಾರ್ ಮಾಫಿ ಸಾಕ್ಷಿಯಾಗಲು ಹೈಕೋರ್ಟ್ ಒಪ್ಪಿಗೆ ನೀಡಿದೆ.
ಮಾಫಿ ಸಾಕ್ಷಿಯಾಗಲು ಅನುಮತಿ ನಿರಾಕರಿಸಿದ್ದ ಸೆಷನ್ಸ್ ಕೋರ್ಟ್ ಕ್ರಮ ಪ್ರಶ್ನಿಸಿ ವಿಜಯಪುರದ ಬಿರಾದಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.
ಪ್ರಕರಣದಲ್ಲಿ ಬಹುತೇಕ ಸಾಂದರ್ಭಿಕ ಸಾಕ್ಷಿಗಳಿರುವ ಹಿನ್ನೆಲೆಯಲ್ಲಿ ಮಾಫಿ ಸಾಕ್ಷಿಯಾಗಿಸಿದರೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಅನುಕೂಲವಾಗಲಿದೆ. ಹೀಗಾಗಿ, ಸಿಆರ್ಪಿಸಿ ಸೆಕ್ಷನ್ 306ರಡಿ ಹೇಳಿಕೆ ದಾಖಲಿಸಲು ಅಪ್ರೂವರ್ ಆಗಲು ಅನುಮತಿ ನೀಡಬೇಕೆಂದು ಆರೋಪಿ ಮನವಿ ಮಾಡಿದ್ದರು.
ಶ್ರೀಶೈಲ ಬಿರಾದಾರ್, ಕೊಲೆ ಮಾಡಿದ ಆರೋಪಿಗೆ ಪಿಸ್ತೂಲ್ ನೀಡಿದ್ದನೆಂದು ಆರೋಪಿಸಲಾಗಿದೆ. ಈ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದಾರೆ. ಹೀಗಾಗಿ, ಅಪ್ರೂವರ್ ಆಗಲು ಅನುಮತಿ ನೀಡಬೇಕೆಂದು ಆರೋಪಿ ಶಿವಾನಂದ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, 2022ರ ಜು.14ರಂದು ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಅನುಮತಿ ನಿರಾಕರಿಸಿತ್ತು.