ಈ ವಾರ

Update: 2023-04-09 05:41 GMT

ಟಿಕೆಟ್ ಸವಾಲು

ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವುದರೊಂದಿಗೆ ಒಟ್ಟು 166 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮಗೊಂಡಿದ್ದಾರೆ. ಜೊತೆಗೇ ಅಸಮಾಧಾನ, ಬಂಡಾಯ, ಆಕ್ರೋಶ ಕೂಡ ಕಾಣಿಸಿದೆ. ಕಡೂರಿನಲ್ಲಿ ವೈ.ಎಸ್.ವಿ.ದತ್ತಾ, ಚಿತ್ರದುರ್ಗದಲ್ಲಿ ರಘು ಆಚಾರ್, ಮೊಳಕಾಲ್ಮೂರಿನಲ್ಲಿ ಯೋಗೇಶ್ ಬಾಬು, ಕಲಘಟಗಿಯಲ್ಲಿ ನಾಗರಾಜ್ ಛಬ್ಬಿ, ತೀರ್ಥಹಳ್ಳಿಯಲ್ಲಿ ಮಂಜುನಾಥಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದರು. ಅವರಿಗೆ ಟಿಕೆಟ್ ತಪ್ಪಿರುವುದು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ದತ್ತಾ, ಛಬ್ಬಿ, ರಘು ಆಚಾರ್ ಈಗಾಗಲೇ ಪಕ್ಷೇತರರಾಗಿ ಸ್ಪರ್ಧಿಸುವ ಅಥವಾ ಬೇರೆ ಪಕ್ಷಗಳಿಗೆ ಸೇರ್ಪಡೆಯಾಗುವ ಬೆದರಿಕೆ ಹಾಕಿದ್ದಾರೆ. ಬೇರೆ ಪಕ್ಷದಿಂದ ಬಂದ ಎನ್.ವೈ. ಗೋಪಾಲಕೃಷ್ಣ, ಎಸ್.ಆರ್. ಶ್ರೀನಿವಾಸ, ಬಾಬುರಾವ್‌ಗೆ ಟಿಜೆಟ್ ಸಿಕ್ಕಿದೆ. ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ನೀಡಿದ್ದರಿಂದ ಶ್ರೀನಾಥ್ ಸಿಟ್ಟಿಗೆದ್ದಿದ್ದಾರೆ. ಉಡುಪಿಯಲ್ಲಿ ಕೃಷ್ಣಮೂರ್ತಿ ಆಚಾರ್ಯ, ಹಣಕ್ಕಾಗಿ ಕಾಂಗ್ರೆಸ್ ಟಿಕೆಟ್ ಮಾರಿಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಮಾಧಾನಪಡಿಸುವ ಕೆಲಸ ನಡೆಯುತ್ತಿದೆ. ಇನ್ನುಳಿದ 58 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ದೊಡ್ಡ ಸವಾಲಾಗಿದೆ. ಎರಡನೇ ಪಟ್ಟಿಯಲ್ಲಿ ಒಬ್ಬ ಮಹಿಳಾ ಅಭ್ಯರ್ಥಿಯೂ ಇಲ್ಲ. ಮೊದಲ ಪಟ್ಟಿಯಲ್ಲಿ 6 ಮಹಿಳಾ ಅಭ್ಯರ್ಥಿಗಳ ಹೆಸರಿತ್ತು. ಬೇರೆ ರಾಜ್ಯದಲ್ಲಿ ಹೆಚ್ಚು ಮಹಿಳಾ ಸೀಟ್ ಘೋಷಿಸುವ ಕಾಂಗ್ರೆಸ್ ಇಲ್ಲಿ ಕನಿಷ್ಠ ಮಟ್ಟದಲ್ಲಿ ಟಿಕೆಟ್ ನೀಡುತ್ತಿದೆ. ಪುರುಷ ಮತದಾರರಷ್ಟೇ ಮಹಿಳಾ ಮತದಾರರು ಇದ್ದರೂ, ಅವರ ರಾಜಕೀಯ ಪ್ರಾತಿನಿಧ್ಯ ನಿಕೃಷ್ಟ ಮಟ್ಟದಲ್ಲಿದೆ.

ಜೀವ ತೆಗೆದರು

 ರಾಮನಗರದ ಸಾತನೂರು ಬಳಿ ಕ್ಯಾಂಟರ್‌ನಲ್ಲಿ ಸಾಗಿಸಲಾಗುತ್ತಿದ್ದ ದನಗಳ ವಾಹನ ಅಡ್ಡಗಟ್ಟಿದ ಸ್ವಯಂಘೋಷಿತ ಗೋರಕ್ಷಕ ಪುನೀತ್ ಕೆರೆಹಳ್ಳಿ ಮತ್ತವನ ತಂಡ ವಾಹನದಲ್ಲಿ ಇದ್ದವರನ್ನು ಥಳಿಸಿ, ಕರೆಂಟ್ ಶಾಕ್ ಕೊಟ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬುದು ತಲ್ಲಣ ಸೃಷ್ಟಿಸಿತು. ಕ್ಯಾಂಟರ್ ಚಾಲಕ ಮಂಡ್ಯ ಗುತ್ತಲು ಮೂಲದ ಇದ್ರೀಸ್ ಪಾಷಾ ಶವ ಪತ್ತೆಯಾಯಿತು. ಹತ್ಯೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದರು. ರಾಮನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸುತ್ತಿದ್ದಂತೆ ಕೆರೆಹಳ್ಳಿ ಮತ್ತವನ ತಂಡದವರು ತಲೆಮರೆಸಿಕೊಂಡರು. ಮಾರನೇ ದಿನ ಫೇಸ್‌ಬುಕ್ ಲೈವ್ ಮಾಡಿದ ಪುನೀತ್ ಕೆರೆಹಳ್ಳಿ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್‌ರನ್ನು ನಿಂದಿಸಿದ್ದಲ್ಲದೆ, ಪೊಲೀಸರ ವಿರುದ್ಧವೂ ಹರಿಹಾಯ್ದ. ತಕ್ಷಣ ಆರೋಪಿಗಳನ್ನು ಬಂಧಿಸದ ರಾಮನಗರ ಪೊಲೀಸರ ನಡೆಯ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು. ಕೊನೆಗೂ ಪುನೀತ್ ಕೆರೆಹಳ್ಳಿ ಮತ್ತಿತರ ನಾಲ್ವರನ್ನು ರಾಜಸ್ಥಾನದಲ್ಲಿ ಬಂಧಿಸಲಾಯಿತು. ಇಂತಹ ಕ್ರಿಮಿನಲ್‌ಗಳನ್ನು ಬಿಜೆಪಿಯೇ ಬೆಳೆಸುತ್ತಿದ್ದು, ಚುನಾವಣೆ ಹೊತ್ತಲ್ಲಿ ರಾಜಕೀಯ ಲಾಭಕ್ಕೆ ನಡೆಸಿರುವ ಕೃತ್ಯ ಇದೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿದವು. ಪುನೀತ್ ಥರದ ಬೀದಿರೌಡಿಗಳು ಗೋರಕ್ಷಣೆ ಹೆಸರಲ್ಲಿ ಆಯುಧ ಹಿಡಿದು ಕ್ರೈಂ ನಡೆಸಿ ವೀಡಿಯೊ ಮಾಡಿ ತೋರಿಸುತ್ತಿದ್ದಾಗ ಅದನ್ನು ನಿಯಂತ್ರಿಸುವ ಕೆಲಸ ಸರಕಾರದ್ದಲ್ಲವೆ? ಗೋವಿನ ಹೆಸರು ಹೇಳಿ ಯಾರಾದರೂ ಕಾನೂನು ಕೈಗೆತ್ತಿಕೊಳ್ಳಬಹುದೇ? ಈತನ ಮೇಲೆ ವೇಶ್ಯಾವಾಟಿಕೆಯಂಥ ಕೇಸ್ ಇದೆ. ಹಾಗಿರುವಾಗ ಇವನನ್ನು ಬೆಳೆಯಲು ಬಿಟ್ಟವರು ಯಾರು? ಮೊದಲೇ ಇಂಥವರ ವಿರುದ್ಧ ಕ್ರಮ ತೆಗೆದುಕೊಂಡಿದ್ದರೆ ಒಂದು ಜೀವ ಉಳಿಯುತ್ತಿತ್ತು. ತೇಜಸ್ವಿ ಹೇಳಿದ ಹಾಗೆ, ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದು?

ಕೊಂದವರು ಯಾರು?

68 ಮುಸ್ಲಿಮರು ಕೊಲ್ಲಲ್ಪಟ್ಟ ಮಲಿಯಾನಾ ಹತ್ಯಾಕಾಂಡ ಪ್ರಕರಣದ ಎಲ್ಲ 41 ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿ ಸಿತು. 36 ವರ್ಷಗಳಿಂದ ನ್ಯಾಯಕ್ಕಾಗಿ ಕಾದಿದ್ದ ಸಂತ್ರಸ್ತ ಕುಟುಂಬಗಳು ಈ ತೀರ್ಪಿನಿಂದ ಆಘಾತಗೊಳ್ಳುವಂತಾಯಿತು. 1987ರ ಮೇ 23ರಂದು ಉತ್ತರ ಪ್ರದೇಶದ ಮೀರತ್ ನಗರದ ಹೊರವಲಯದಲ್ಲಿರುವ ಮಲಿಯಾನಾ ಗ್ರಾಮವನ್ನು ಗುಂಪೊಂದು ಸುತ್ತುವರಿದು ಇದ್ದಕ್ಕಿದ್ದಂತೆ ಗುಂಡುಗಳನ್ನು ಹಾರಿಸಲು ಆರಂಭಿಸಿತ್ತು. ಹಿಂಸಾಚಾರ ಭುಗಿಲೆದ್ದಿತ್ತು. ಉತ್ತರ ಪ್ರದೇಶ ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆಯ (ಪಿಎಸಿ) ಕೆಲ ಸಿಬ್ಬಂದಿಯೂ ಆ ಗುಂಪಿನ ಜೊತೆಯಲ್ಲಿತ್ತೆಂದು ಹೇಳಲಾಗುತ್ತದೆ. ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನೀಡಿ, ಮಥುರಾ ಜಿಲ್ಲಾ ಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸಿತು. ಹಾಗಾದರೆ, ನಮ್ಮ ಕುಟುಂಬಗಳನ್ನು ಕೊಂದವರು ಯಾರು ಎಂಬುದು ಸಂತ್ರಸ್ತರ ಪ್ರಶ್ನೆ. ಈ ದೇಶದ ನ್ಯಾಯವ್ಯವಸ್ಥೆಯಲ್ಲಿ ಅವರ ಪ್ರಶ್ನೆಗೆ ಉತ್ತರ ಸಿಗುವುದೆ?

ಸತ್ಯ ಅಡಗಿಸಿದವರಿಗೆ ಹಿನ್ನಡೆ

ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್ ಪ್ರಸಾರಕ್ಕೆ ಹೇರಲಾಗಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತು. ಸುಪ್ರೀಂ ಕೋರ್ಟ್‌ನ ಈ ತೀರ್ಪು, ಬಿಜೆಪಿ ಸರಕಾರದ ಪ್ರಜಾತಂತ್ರ ವಿರೋಧಿ ನಡೆಯನ್ನು ಮತ್ತೊಮ್ಮೆ ಬಟಾಬಯಲು ಮಾಡಿತು. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದಿಂದ ಭದ್ರತಾ ಅನುಮೋದನೆ ಪಡೆಯದೆ ಇರುವುದರಿಂದ ಚಾನಲ್‌ನ ಪ್ರಸಾರ ಪರವಾನಿಗೆಯನ್ನು ನವೀಕರಿಸದೆ ಇರಲು ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿರ್ಧರಿಸಿತ್ತು. ಆ ನಿರ್ಧಾರವನ್ನು ಎತ್ತಿಹಿಡಿದ ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೀಡಿಯಾ ಒನ್ ವಾಹಿನಿಯ ಆಡಳಿತ ಸಂಸ್ಥೆ ಸುಪ್ರೀಂ ಕೋರ್ಟಿಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಅದರ ಹೋರಾಟಕ್ಕೆ ಜಯ ಸಿಕ್ಕಿದೆ. ಕೇರಳ ಹೈಕೋರ್ಟ್‌ನ ಆದೇಶವನ್ನು ಬುಧವಾರ ತಳ್ಳಿಹಾಕಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠ, ವಾಹಿನಿಯ ಪರವಾನಿಗೆಯನ್ನು ನಾಲ್ಕು ವಾರಗಳೊಳಗೆ ನವೀಕರಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚಿಸಿತು. ಮಾತೆತ್ತಿದರೆ ರಾಷ್ಟ್ರೀಯ ಭದ್ರತೆಯ ವಿಚಾರವನ್ನೆತ್ತಿ, ಎಲ್ಲ ಸತ್ಯಗಳನ್ನು ಅಡಗಿಸಲು ನೋಡುವ ಈ ಸರಕಾರಕ್ಕೆ ಮೀಡಿಯಾ ವನ್ ಮೇಲಿನ ನಿಷೇಧ ಹೇರಿಕೆ ನಡೆಯಲ್ಲಿ ಆಗಿರುವ ಈ ಸೋಲಾದರೂ ಒಂದು ಪಾಠವಾದೀತೇ?

ವಿಭಿನ್ನ ಚಿತ್ರ

ವೆಟ್ರಿಮಾರನ್ ನಿರ್ದೇಶನದ, ಸೂರಿ, ವಿಜಯ್ ಸೇತುಪತಿ ಅಭಿನಯಿಸಿರುವ ‘ವಿದುತಲೈ’ ಭಾಗ-1 ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿಯೂ ಭಾರೀ ಸದ್ದು ಮಾಡುತ್ತಿದೆ. ಪೊಲೀಸ್ ದೌರ್ಜನ್ಯದ ಕಥೆ ಹೇಳುವ ಇನ್ನೊಂದು ಚಿತ್ರವಾಗದೆ, ದುರ್ಬಲರನ್ನು ಬೇಟೆಯಾಡುವ ವ್ಯವಸ್ಥೆಯ ಅಸಮರ್ಥತೆಯನ್ನು ತೋರಿಸುವ ಮೂಲಕ ಮನಸ್ಸಿನಲ್ಲಿ ಉಳಿಯುತ್ತದೆ. ಅಧಿಕಾರದ ದುರುಪಯೋಗ ಎಷ್ಟು ಮಟ್ಟಿಗೆ ನಡೆದೀತೆಂಬುದನ್ನು ಬಯಲು ಮಾಡುವ ಚಿತ್ರ ಇದು. ಈಗಾಗಲೇ ಅಸುರನ್ ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿಗೂ ಪಾತ್ರರಾಗಿರುವ ವೆಟ್ರಿಮಾರನ್, ಈ ಚಿತ್ರದಲ್ಲಿಯೂ ಅಷ್ಟೇ ವಿಶೇಷವಾದ ಕಥೆ ಹೇಳಿದ್ದಾರೆ.