ಓ ಮೆಣಸೇ...

Update: 2023-04-09 18:36 GMT

ಬಿಜೆಪಿ ಎಂದೂ ದ್ವೇಷ ರಾಜಕಾರಣ ಮಾಡುವುದಿಲ್ಲ- ಶ್ರೀರಾಮುಲು, ಸಚಿವ
ಇಂತಹ ಮಾತುಗಳನ್ನು ನೀವು ಸಾರ್ವಜನಿಕವಾಗಿ ಹೇಳಿದರೆ, ಪಕ್ಷದ ಮೂಲಭೂತ ತತ್ವಾದರ್ಶಗಳ ವಿರುದ್ಧ ಮಾತನಾಡಿದ್ದಕ್ಕಾಗಿ ನಿಮ್ಮನ್ನು ಪಕ್ಷದಿಂದ ಹೊರಹಾಕುವ ಸಾಧ್ಯತೆ ಇದೆ.

ಬಾಡಿಗೆ ಮನೆ (ಬಿಜೆಪಿ)ಯಲ್ಲಿ ಎಷ್ಟು ದಿನಾಂತ ಇರುವುದು ಹಾಗಾಗಿ ಸ್ವಂತ ಮನೆ (ಕಾಂಗ್ರೆಸ್)ಗೆ ಹೋಗುತ್ತಿದ್ದೇನೆ- ಎನ್.ವೈ.ಗೋಪಾಲಕೃಷ್ಣ, ಮಾಜಿ ಶಾಸಕ
ಅಲ್ಲಿ ಬೋರ್ ಆದರೆ ಮತ್ತೆ ಮರಳುವುದಕ್ಕೆ ಬಾಡಿಗೆ ಮನೆಯಂತೂ ಇದ್ದೇ ಇದೆ.

ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಇದು ಕೊನೆಯ ಚುನಾವಣೆಯಾಗಿದೆ - ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ
  ಅವರಿಗೆ ಮಾತ್ರವಲ್ಲ ಒಟ್ಟು ದೇಶದ ಮಟ್ಟಿಗೆ ಮುಂದಿನ ಚುನಾವಣೆಯೇ ಕೊನೆಯ ಚುನಾವಣೆಯಾಗಲಿದೆ ಎಂಬ ಊಹಾಪೋಹಗಳಿವೆ.

ಖಾಲಿಸ್ತಾನ ಕೂಗು ಮತ್ತು ಅದರ ನಾಯಕ ಅಮೃತ್ ಪಾಲ್‌ನಂತಹವರು ಹುಟ್ಟಲು ಆರೆಸ್ಸೆಸ್ ಮತ್ತು ಬಿಜೆಪಿಯ ಸಿದ್ಧಾಂತಗಳೇ ಕಾರಣ- ಅಶೋಕ್ ಗೆಹ್ಲೋಟ್, ರಾಜಸ್ಥಾನ ಸಿಎಂ
ಅವರ ಮಡಿಲಲ್ಲಿ ಹುಟ್ಟಿದ ದೊಡ್ಡ ದೊಡ್ಡ ಅನಿಷ್ಟಗಳನ್ನೆಲ್ಲಾ ಬಿಟ್ಟು ಈ ಜುಜುಬಿ ಅನಿಷ್ಟಗಳನ್ನು ಮಾತ್ರ ಪ್ರಸ್ತಾಪಿಸುತ್ತಿದ್ದೀರಲ್ಲಾ!

1947ರಲ್ಲಿ ದೇಶವನ್ನು ಇಬ್ಭಾಗ ಮಾಡಿದ್ದು ಬಹಳ ದೊಡ್ಡ ತಪ್ಪು ಎಂಬ ಅರಿವು ಪಾಕಿಸ್ತಾನದ ಜನರನ್ನು ಕಾಡುತ್ತಿದೆ- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಅವರು ಪಾಠ ಕಲಿತದ್ದಾಯಿತು. ನೀವು ಯಾವಾಗ ಕಲಿಯುತ್ತೀರಿ?

ಸರ್ವಾಧಿಕಾರಿ ಆಡಳಿತಾಧಿಕಾರಿಗಳು ಬಂದಾಗಲೆಲ್ಲಾ ಜಗತ್ತಿನಲ್ಲಿ ಬಹುದೊಡ್ಡ ಕ್ರಾಂತಿಗಳು ನಡೆದಿವೆ- ನವಜೋತ್ ಸಿಂಗ್ ಸಿಧು, ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ
ತಲೆ ನೆಟ್ಟಗಿಲ್ಲದ ಆಡಳಿತಗಾರರ ಬಗ್ಗೆ ಕೂಡಾ ಅಂತಹ ನಂಬಿಕೆಗಳಿವೆ - ಸದ್ಯ ಮೋದಿ ಪಾಳಯ ಸೇರುವುದಕ್ಕೆ ಇದು ನಿಮ್ಮ ಮುನ್ನುಡಿ ಅಲ್ಲ ತಾನೇ?

ನನ್ನ ವರ್ಚಸ್ಸನ್ನು ಹಾಳು ಮಾಡುವ ಸಲುವಾಗಿ ಕೆಲವರು ದೇಶದ ಒಳಗಿನ ಮತ್ತು ಹೊರಗಿನ ಜನರಿಗೆ ಸುಪಾರಿ ನೀಡಿದ್ದಾರೆ- ನರೇಂದ್ರ ಮೋದಿ, ಪ್ರಧಾನಿ
ನೀವು ಒಂದು ಸಾಚಾ ಡಿಗ್ರಿ ತೋರಿಸಿದರೆ ಸಾಕು, ಅಂತಹ ಎಲ್ಲ ಸುಪಾರಿಗಳನ್ನು ಸೋಲಿಸಬಹುದು.

ನಾಯಕತ್ವದ ಹೊಣೆಯನ್ನು ವಹಿಸಿಕೊಂಡು ಉನ್ನತ ಸ್ಥಾನ ತಲುಪಿದ ಮೇಲೆ ಒಂದು ಹಂತದಲ್ಲಿ ಏಕಾಂಗಿತನ ಕಾಡುತ್ತದೆ. - ಡಾ.ಎನ್.ಆರ್.ನಾರಾಯಣ ಮೂರ್ತಿ, ಇನ್ಫೋಸಿಸ್ ಸಹ-ಸಂಸ್ಥಾಪಕ
ಅದು ಉನ್ನತ ಸ್ಥಾನ ಅಲ್ಲ, ಭ್ರಮೆಯ ಸ್ಥಾನ. ಮೂರು ದಿನಗಳ ಮಟ್ಟಿಗೆ, ಚೇಂಬರ್ ಬಿಟ್ಟು ರಿಸೆಪ್ಷನ್‌ನಲ್ಲಿ ಕೂತಿರಿ, ಕಾರಿನ ಗಾಜು ತೆರೆದಿಟ್ಟು ಪ್ರಯಾಣಿಸಿ ನೋಡಿ.

ಪ್ರಧಾನಿ ಮೋದಿ ಜನರಿಂದ ಪಿಕ್ ಪಾಕೆಟ್ ಮಾಡಲು ಗುತ್ತಿಗೆ ಪಡೆದಿದ್ದಾರೆ- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ವ್ಯಾಪಕ ದರೋಡೆ ಎಂಬ ಮಹಾಪರಾಧಕ್ಕೆ ಪಿಕ್ ಪಾಕೆಟ್ ಎಂಬ ಮುದ್ದಾದ ಪುಟ್ಟ ಹೆಸರು ಇಟ್ಟುಬಿಟ್ರಲ್ಲಾ ಸಾರ್?

ಕಾಂಗ್ರೆಸ್ ತನ್ನ ಚೀಲದಲ್ಲಿ ಜನರಿಗೆ ಹಾಕಲು ಮಕ್ಮಲ್ ಟೋಪಿ ಇಟ್ಟುಕೊಂಡಿದೆ - ಬಿ.ಎಲ್.ಸಂತೋಷ್, ಬಿಜೆಪಿ ರಾ.ಸಂ. ಕಾರ್ಯದರ್ಶಿ
ನೀವು ನಿಮ್ಮ ಚೀಲದಲ್ಲಿ ಬಚ್ಚಿಟ್ಟಿರುವ ವಿಷಾಹಾರಕ್ಕಿಂತ ವಾಸಿ.

ಪಶ್ಚಿಮ ದೇಶಗಳು ಇತರ ದೇಶಗಳ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಬೇಕು - ಎಸ್.ಜೈಶಂಕರ್, ಕೇಂದ್ರ ಸಚಿವ
ನಾವು ಗಣನೆಗೆ ತೆಗೆದುಕೊಳ್ಳುವುದು ಆ ದೇಶಗಳು ನಮ್ಮ ಬಗ್ಗೆ ಆಡುವ ಹೊಗಳಿಕೆಯ ಮಾತುಗಳನ್ನು ಮಾತ್ರ.

ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೊಂಬಿಗೆ ಅವಕಾಶ ಇರುವುದಿಲ್ಲ- ಅಮಿತ್ ಶಾ, ಕೇಂದ್ರ ಸಚಿವ
ಹಾಗೆಂದು ಜನರನ್ನು ನಂಬಿಸಲಿಕ್ಕಾಗಿ ಅಷ್ಟು ದೊಡ್ಡ ಗಲಭೆ ಮಾಡಿಸಿಬಿಟ್ಟಿರಾ?

ನೆಂಟರೇ ಬಂದು ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿ ಎಂದರೂ ಅವರ ಮಾತುಗಳನ್ನು ನಂಬಬೇಡಿ- ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
ನೆಂಟರ ಬಗ್ಗೆ ಇಂತಹ ಸಂಶಯ ಮೂಡುವುದಕ್ಕೆ ಕಾರಣವೇನು?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಪಕ್ಷವನ್ನು ಮುಗಿಸುವ ಹುನ್ನಾರ ನಡೆಸಿವೆ- ದೇವೇಗೌಡ, ಮಾಜಿ ಪ್ರಧಾನಿ
ಹೊಣೆ ಯಾರದ್ದೇ ಇರಲಿ, ಪಕ್ಷವಂತೂ ಈ ಬಾರಿ ಮುಗಿಯುವುದು ಖಚಿತ ಎಂಬುದು ನಿಮ್ಮ ಮಾತಿನಿಂದಿಂದ ಸ್ಪಷ್ಟವಾಗುತ್ತದೆ.

ಕಾಂಗ್ರೆಸ್‌ನವರಿಗೆ ಗುಂಡಿಗೆನೂ ಇಲ್ಲ, ಗಂಡಸ್ತನವೂ ಇಲ್ಲ- ಆನಂದ್ ಸಿಂಗ್, ಸಚಿವ
ಜನರಿಗೆ ಅದ್ಯಾವುದೂ ಬೇಡ. ಒಂದಷ್ಟು ಪ್ರಾಮಾಣಿಕತೆ, ಬದ್ಧತೆ ಮತ್ತು ದಕ್ಷತೆ ಇದ್ದರೆ ಸಾಕು.

ಈ ಬಾರಿಯ ಚುನಾವಣೆಯಲ್ಲಿ ಯಾವುದೇ ನಿಂಬೆ ಹಣ್ಣು ಕೆಲಸ ಮಾಡಲ್ಲ- ಡಿ.ಕೆ.ಸುರೇಶ್, ಸಂಸದ
ಜನರ ಬದುಕಿಗೆ ಹುಳಿ ಹಿಂಡಲು ಯಾವ ಹಣ್ಣು ಬಳಸುತ್ತೀರಿ ಹಾಗಾದರೆ ?

ಬಿಜೆಪಿಯ ಭ್ರಷ್ಟ ಸರಕಾರದ ಹುಟ್ಟಿಗೆ ಕಾರಣನಾದೆನಲ್ಲ ಎಂದು ನನ್ನ ಅಂತರಾತ್ಮ ತಿವಿಯುತ್ತಿದೆ- ಎಚ್.ವಿಶ್ವನಾಥ್, ವಿ.ಪ. ಸದಸ್ಯ
ಸಿಕ್ಕಿದ ದುಡ್ಡೆಲ್ಲ ಬರಿದಾದ ಬಳಿಕದ ಪಶ್ಚಾತ್ತಾಪ.

ಮಾಧ್ಯಮಗಳಲ್ಲಿ ಎಷ್ಟೇ ಸುದ್ದಿ ಮಾಡಿದರೂ ದೇವೇಗೌಡರ ಕುಟುಂಬವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ- ಎಚ್.ಡಿ. ರೇವಣ್ಣ, ಮಾಜಿ ಸಚಿವ
ಒಡೆಯುವವರು ಕುಟುಂಬದೊಳಗೆ ಇದ್ದಾರಲ್ಲ.

ದೇಶದ ಸ್ವಾತಂತ್ರ ಹೋರಾಟದಲ್ಲಿ ಸಾವರ್ಕರ್‌ರ ತ್ಯಾಗವನ್ನು ತಳ್ಳಿ ಹಾಕಲಾಗದು- ಶರದ್ ಪವಾರ್, ಎನ್‌ಸಿಪಿ ಮುಖ್ಯಸ್ಥ
ಪದೇ ಪದೇ ಕ್ಷಮಾಪಣೆ ಕೇಳುವುದು ಸಣ್ಣ ತ್ಯಾಗವೇನೂ ಅಲ್ಲ.

ಮೀಸಲಾತಿ ವಿಚಾರದಲ್ಲಿ ನಮ್ಮ ಸರಕಾರ ಧ್ವನಿ ಇಲ್ಲದವರಿಗೆ ಜೇನನ್ನು ಹಂಚಿದೆ- ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಬೆಲ್ಲದ ನೀರು ಎನ್ನುವುದು ಜನರಿಗೆ ಗೊತ್ತಾಗಿ ಬಿಟ್ಟಿದೆ

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...