ನನ್ನಿಂದಲೇ ಮೂರು-ನಾಲ್ಕು ಜನ ಮುಖ್ಯಮಂತ್ರಿ ಆಗಿದ್ದಾರೆ: ಜನಾರ್ದನ ರೆಡ್ಡಿ

Update: 2023-04-10 15:24 GMT

ಬಾಗಲಕೋಟೆ, ಎ.10: ‘ರಾಜ್ಯದಲ್ಲಿ ಮೂರ್ನಾಲ್ಕು ಜನ ಮುಖ್ಯಮಂತ್ರಿ, 45 ಜನ ಶಾಸಕರು ಆಗಿದ್ದಾರೆ ಎಂದರೇ, ಅದು ನನ್ನಿಂದಲೇ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಬಿಜೆಪಿ ಪಕ್ಷದವರು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದ್ದರು. ಅದರ ಕರ್ಮವನ್ನು ಪಕ್ಷದವರೇ ಅನುಭವಿಸುತ್ತಾರೆ’ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನರೆಡ್ಡಿ ಹೇಳಿದ್ದಾರೆ.  

ಸೋಮವಾರ ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಕಲಾದಗಿ ಗ್ರಾಮದಲ್ಲಿ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಯಡಿಯೂರಪ್ಪ ಅವರು ಒಳ್ಳೆಯ ವ್ಯಕ್ತಿ, ಪಕ್ಷದ ಸಂಘಟನೆಗಾಗಿ ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಪಕ್ಷ ಬೇರೆ, ನಮ್ಮ ಪಕ್ಷ ಬೇರೆ ಇದ್ದರೂ ಅವರ ಮೇಲೆ ಅಭಿಮಾನ ಇದೆ. ಅಂತಹ ನಾಯಕ ರಾಜ್ಯದಲ್ಲಿ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ’ ಎಂದು ಹೇಳಿದರು.  

ಬಿಎಸ್‍ವೈ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ನಿಮ್ಮೂರಿನ ಶಾಸಕರೊಬ್ಬರು ಹೊಸದಿಲ್ಲಿಗೆ ಹೋಗಿ ಮುಖ್ಯಮಂತ್ರಿ ಆಗುವ ಹುನ್ನಾರ ನಡೆಸಿದ್ದರು ಎಂದು ಪರೋಕ್ಷವಾಗಿ ನಿರಾಣಿ ಅವರ ವಿರುದ್ಧ ಕಿಡಿಕಾರಿದರು.

‘ಬೀಳಗಿ ಕ್ಷೇತ್ರದ ಕೆಆರ್‍ಪಿ ಪಕ್ಷದ ಅಭ್ಯರ್ಥಿಯಾಗಿರುವ 32 ವರ್ಷದ ರಾಜು ನ್ಯಾಮಗೌಡ ಅವರಿಗೆ ಜನರು ಬೆಂಬಲ ನೀಡಬೇಕಾಗಿದೆ. ಯುವಕರು ರಾಜಕೀಯ ಕ್ಷೇತ್ರಕ್ಕೆ ಬಂದರೆ ಕೆಲಸ ಕಾರ್ಯ ಆಗಲಿದೆ. ಶ್ರೀಮಂತರಿಗೆ ದೊಡ್ಡವರಿಗೆ, ಸಕ್ಕರೆ ಕಾರ್ಖಾನೆ ಇದ್ದವರಿಗೆ ಮಾತ್ರ ಬೆಂಬಲಿಸಬೇಡಿ. ಅವರನ್ನು ದೊಡ್ಡವರಾಗಿ ಮಾಡಿದ್ದು ನೀವು, ಅಂತಹವರಿಗೆ ಸಣ್ಣವರು ಮಾಡುವವರು ನೀವೇ’ ಎಂದು ಸಚಿವ ಮುರುಗೇಶ್ ನಿರಾಣಿ ಹೆಸರು ಹೇಳದೇ ಹರಿಹಾಯ್ದರು.

Similar News