‘ವಿದ್ಯಾರ್ಥಿ ಭವನ’ ವ್ಯಾಪಾರ ಚಿಹ್ನೆ ಬಳಸದಂತೆ ಶಾಶ್ವತ ನಿರ್ಬಂಧಕಾಜ್ಞೆ ಹೊರಡಿಸಿದ ನ್ಯಾಯಾಲಯ
ಬೆಂಗಳೂರು, ಎ.11: ನಗರದ ಪ್ರತಿಷ್ಠಿತ ನೋಂದಾಯಿತ ವಿದ್ಯಾರ್ಥಿ ಭವನದ ವ್ಯಾಪಾರ ಚಿಹ್ನೆ (ಟ್ರೇಡ್ಮಾರ್ಕ್)ಯನ್ನು ಶಿವಮೊಗ್ಗದ ರೆಸ್ಟೋರೆಂಟ್ ತಿಕ್ರಮಿಸಿ ಬಳಕೆ ಮಾಡುತ್ತಿರುವುದಕ್ಕೆ ಬೆಂಗಳೂರಿನ ನ್ಯಾಯಾಲಯವು ಶಾಶ್ವತ ಪ್ರತಿಬಂಧಕಾಜ್ಞೆ ನೀಡಿದೆ.
ವಿದ್ಯಾರ್ಥಿ ಭವನದ ಪಾಲುದಾರರಾದ ಎಸ್.ಅರುಣ್ ಕುಮಾರ್ ಅಡಿಗ ಅವರು ದಾಖಲಿಸಿದ್ದ ದೂರನ್ನು ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಪೀಠವು ಭಾಗಶಃ ಮಾನ್ಯ ಮಾಡಿದೆ. ಪ್ರತಿವಾದಿಗಳು ವಿದ್ಯಾರ್ಥಿ ಭವನದ ಹೆಸರು ಬಳಕೆ ಮಾಡಿದ್ದು, ಅದನ್ನು ಅಲ್ಪ ಬದಲಾವಣೆ ಮಾಡಿದ್ದರೂ ಹಿಂದಿನ ಹೆಸರಿಗೆ ಹತ್ತಿರವಾಗಿದೆ. ಅಕ್ಷರದಲ್ಲಿ ಬದಲಾವಣೆ ಮಾಡಿ, ವಿ ಬಿ ವಿಧಾಥ್ರಿ ಭವನ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ. ವಿಧಾಥ್ರಿ ಮತ್ತು ವಿದ್ಯಾರ್ಥಿ ಒಂದೇ ರೀತಿ ಕಾಣುತ್ತಿದ್ದು, ಅದರಲ್ಲಿ ಭಿನ್ನತೆ ಕಾಣುತ್ತಿಲ್ಲ ಎಂದು ನ್ಯಾಯಪೀಠವು ಆದೇಶದಲ್ಲಿ ತಿಳಿಸಿದೆ.
ಪ್ರತಿವಾದಿಗಳು ಫಿರ್ಯಾದಿಯ ವ್ಯಾಪಾರ ಚಿಹ್ನೆ ಹೆಸರಿಗಿಂತ ಭಿನ್ನ ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಪ್ರಸ್ತುತಪಡಿಸಿಲ್ಲ. ಹೀಗಾಗಿ, ಫಿರ್ಯಾದಿಯ ನೋಂದಾಯಿತ ಚಿಹ್ನೆ ವಿದ್ಯಾರ್ಥಿ ಭವನ ಹೆಸರು ಬಳಕೆ ಮಾಡದಂತೆ ಪ್ರತಿವಾದಿಯನ್ನು ಶಾಶ್ವತವಾಗಿ ನಿಬರ್ಂಧಿಸಲಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವ್ಯಾಪಾರ ಚಿಹ್ನೆ ಕಾಯಿದೆ 1996ರ ಕ್ಲಾಸ್ 42 ಮತ್ತು 43ರ ಅಡಿ ವಿದ್ಯಾರ್ಥಿ ಭವನ ಎಂಬ ಹೆಸರಿನ ಅಡಿ ನೋಂದಾಯಿಸಿ, 1956ರಿಂದ ಫಿರ್ಯಾದಿಯು ಶಾಖಾಹಾರಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ವಿದ್ಯಾರ್ಥಿ ಭವನವು ಉತ್ತಮ ಹೆಸರು ಮತ್ತು ಅಪಾರ ಪ್ರಮಾಣದ ವರ್ಚಸ್ಸು ಗಳಿಸಿದೆ.
2018ರಲ್ಲಿ ಕಿರಣ್ ಗೌಡ ಎಂಬವರು ಅನಧಿಕೃತವಾಗಿ ವಿ.ಬಿ. ವಿಧಾಥ್ರಿ ಭವನ ಹೆಸರಿನಲ್ಲಿ ತಮ್ಮ ನೋಂದಾಯಿತ ಟ್ರೇಡ್ಮಾರ್ಕ್ ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು. ವಿ ಬಿ ವಿದ್ಯಾರ್ಥಿ ಭವನ ಹೆಸರನ್ನು ಬಳಸಲು ಪ್ರತಿವಾದಿಗಳಿಗೆ ಯಾವುದೇ ಅಧಿಕಾರವಿಲ್ಲ. ಉಭಯ ಸಂಸ್ಥೆಗಳು ಒಂದೇ ಉದ್ಯಮದಲ್ಲಿದ್ದು, ಅದೇ ಹೆಸರನ್ನು ಬಳಕೆ ಮಾಡುವುದರಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂದು ಆಕ್ಷೇಪಿಸಲಾಗಿತ್ತು.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಪ್ರತಿವಾದಿಗಳು ಮಾಧ್ಯಮಗೋಷ್ಠಿ ನಡೆಸಿ ಬೆಂಗಳೂರು ಫುಡ್ ಟ್ರೆಂಡ್ ಇನ್ ಶಿವಮೊಗ್ಗ ಪಂಚ್ಲೈನ್ನೊಂದಿಗೆ ವಿ ಬಿ ವಿದ್ಯಾರ್ಥಿ ಭವನ ಅನ್ನು ಪ್ರಚಾರ ಮಾಡಿದ್ದಾರೆ. ಅಲ್ಲದೇ, ಈ ಸಂಬಂಧ ಹೋರ್ಡಿಂಗ್ ಮತ್ತು ಬ್ಯಾನರ್ ಅನ್ನು ಶಿವಮೊಗ್ಗ ಪೂರ್ತಿ ಕಟ್ಟಿದ್ದು, ಸ್ಥಳೀಯ ಪತ್ರಿಕೆಗಳಲ್ಲೂ ಪ್ರಚಾರ ನಡೆಸಿದ್ದಾರೆ ಎಂದು ವಾದಿಸಲಾಗಿತ್ತು.