×
Ad

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಈಶ್ವರಪ್ಪ: ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಏನು?

Update: 2023-04-11 19:05 IST

ಬೆಂಗಳೂರು, ಎ. 11: ‘ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಒಳ್ಳೆಯದಾಗಲಿ. ಅವರು ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದರು. ಅವರ ಪಕ್ಷ ಹಾಗೂ ಅವರ ತೀರ್ಮಾನ, ಅವರಿಗೆ ಶುಭವಾಗಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮದೆ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಪಕ್ಷ ಇದುವರೆಗೂ ಒಬ್ಬ ಅಭ್ಯರ್ಥಿಯ ಹೆಸರು ಬಿಡುಗಡೆ ಮಾಡಿಲ್ಲ. ಈಶ್ವರಪ್ಪ ಅವರು ತಮ್ಮ ಹೈಕಮಾಂಡ್ ನಾಯಕರಿಗೆ ಲವ್ ಲೆಟರ್ ಬರೆದಿದ್ದಾರೆ. ಅವರನ್ನು ಕೇಳದೆ ಕೇವಲ ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಮಾತ್ರ ಕೇಳುತ್ತಿದ್ದೀರಿ’ ಎಂದು ಹೇಳಿದರು.

‘ಕಾಂಗ್ರೆಸ್ ಈಗಾಗಲೇ 167 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದೆ. ಉಳಿದ ಕ್ಷೇತ್ರಗಳ ಪಟ್ಟಿ ಸಧ್ಯದಲ್ಲೇ ಬಿಡುಗಡೆ ಆಗಲಿದೆ. ಏನೇ ನಿರ್ಧಾರ ತೆಗೆದುಕೊಂಡರೂ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ. ಕಾಂಗ್ರೆಸ್ ಪಕ್ಷ ಮಾಧ್ಯಮಗಳನ್ನು ಬಿಟ್ಟು ರಾಜಕೀಯ ಮಾಡುವುದಿಲ್ಲ. ಉಳಿದ ಅಭ್ಯರ್ಥಿಗಳ ಪಟ್ಟಿ ಶುಭ ಮುಹೂರ್ತ, ಶುಭ ಘಳಿಗೆ ನೋಡಿ ಪಟ್ಟಿ ಬಿಡುಗಡೆ ಮಾಡಲಾಗುವುದು' ಎಂದು ಅವರು ತಿಳಿಸಿದರು.

‘ಲಕ್ಷ್ಮಣ ಸವದಿ ಹಿರಿಯ ನಾಯಕರು. ಅವರ ಕಾಂಗ್ರೆಸ್ ಸೇರ್ಪಡೆ ವಿಚಾರ ಪ್ರಸ್ತಾಪವಾಗಿಲ್ಲ. ವಿ.ಸೋಮಣ್ಣ ಅವರು ಪಕ್ಷ ಸೇರ್ಪಡೆ ಆಗುತ್ತಾರೆಂಬ ವಿಚಾರ ಸುದ್ದಿಯಾಯಿತು. ಆದರೆ ಅವರು ಯಾವತ್ತೂ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ಮಾಡಿಲ್ಲ. ಶಿವಮೊಗ್ಗ, ಹಾವೇರಿ ಇತರೆ ಭಾಗಗಳ ಕೆಲ ನಾಯಕರು ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಅವರು ಬಂದಾಗ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಖಾಲಿ ಇಲ್ಲದಿದ್ದರೆ ಅವರನ್ನು ಪಕ್ಷಕ್ಕೆ ಕರೆದುಕೊಳ್ಳುವುದು ಸೂಕ್ತವಲ್ಲ' ಎಂದು ಅವರು ತಿಳಿಸಿದರು.

‘ಜೆಡಿಎಸ್ ಪಕ್ಷ, ಕುಟುಂಬದ ವಿಚಾರದ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಅವರ ರಾಜಕೀಯ ಅವರು ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ. ಅವರ ಆಂತರಿಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಅದರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಅವರ ಜತೆ ನಾವು ಕೆಲಸ ಮಾಡಿ ಈಗ ಅವರು ಸರಿ ಇಲ್ಲ ಎಂದು ದೂರುವುದು ಸರಿಯಲ್ಲ' ಎಂದ ಅವರು, ‘ನಾಮಪತ್ರ ಸಲ್ಲಿಕೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ’ ಎಂದರು.

Similar News