ರಾಜಕೀಯ ನಿವೃತ್ತಿ ಗೌರವಯುತವಾಗಿ ಆಗಬೇಕು: ಶೆಟ್ಟರ್ ಅಸಮಾಧಾನ
ಹುಬ್ಬಳ್ಳಿ, ಎ. 12: ‘ಯಾವುದೇ ಕಾರಣವಿಲ್ಲದೆ ನಾನು ರಾಜಕೀಯವಾಗಿ ನಿವೃತ್ತಿ ಘೋಷಣೆ ಮಾಡಲು ಸಿದ್ಧ. ಆದರೆ, ರಾಜಕಾರಣದಲ್ಲಿ ಗೌರವಯುತವಾಗಿ ಹೊರಗೆ ಹೋಗಬೇಕೆಂಬುದು ನನ್ನ ಅಭಿಪ್ರಾಯ. ಈ ರೀತಿ ಪಕ್ಷದಿಂದ ಹೊರಗಡೆ ಹೋಗಬಾರದು’ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ಹೊಸದಿಲ್ಲಿಗೆ ತೆರಳುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಕ್ಷದ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಟೆಲಿಫೋನ್ ಕರೆ ಮಾಡಿದ್ದು, ಆ ಹಿನ್ನೆಲೆಯಲ್ಲಿ ನಾನು ದಿಲ್ಲಿಗೆ ತೆರಳುತ್ತಿದ್ದೇನೆ. ಪಕ್ಷದ ದೃಷ್ಟಿಯಿಂದ ಎಲ್ಲವೂ ಒಳ್ಳೆಯದು ಆಗುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ನುಡಿದರು.
‘ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಬೇಕಿತ್ತು. ಆದರೆ, ವಿಮಾನ ವಿಳಂಬವಾಗಿದ್ದರಿಂದ ನಾನು ನೇರವಾಗಿ ದಿಲ್ಲಿಗೆ ಹೋಗುತ್ತಿದ್ದೇನೆ. ದಿಲ್ಲಿಯಿಂದ ಹಿಂದಿರುಗಿದ ನಂತರ ಯಡಿಯೂರಪ್ಪರನ್ನು ಭೇಟಿ ಮಾಡುತ್ತೇನೆ’ ಎಂದ ಅವರು, ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಸಕಾರಣವಿಲ್ಲದೆ ಟಿಕೆಟ್ ನಿರಾಕರಣೆ ಮಾಡಿದ್ದಾರೆ’ ಎಂದು ದೂರಿದರು.