ನನಗೆ ಟಿಕೆಟ್ ಕೈ ತಪ್ಪಲು ಬಿಎಸ್ ವೈ, ಅವರ ಮಗನೇ ನೇರ ಕಾರಣ: ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಆಕ್ರೋಶ

Update: 2023-04-12 14:14 GMT

ಹೊಸದುರ್ಗ, ಎ.12: ಈ ಬಾರಿ ವಿಧಾನಸಭೆ ಚುನಾವಣೆಗೆ ನನಗೆ ಬಿಜೆಪಿ ಟಿಕೆಟ್ ತಪ್ಪಲು ಮುಖ್ಯವಾಗಿ ಲಿಂಗಮೂರ್ತಿ, ಯಡಿಯೂರಪ್ಪ, ವಿಜಯೇಂದ್ರನೇ ಕಾರಣ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಅವರು ಬುಧವಾರ ಹೊಸದುರ್ಗ ತಾಲೂಕಿನ  ಹಾರನಕಣಿವೆ ರಂಗನಾಥಸ್ವಾಮಿ ದೇವಸ್ಥಾನದ ಬಳಿ ತನ್ನ ಸಾವಿರಾರು ಬೆಂಬಲಿಗರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದರು.

ನಾನು ಪರಿಶಿಷ್ಟ ವರ್ಗದಲ್ಲಿ ಜನಿಸಿದ್ದೇ ತಪ್ಪಾಗಿದೆ. ಏಕೆಂಅದರೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಹೊಸದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ನಾನು ಟಿಕೆಟ್ ಕೇಳುತ್ತಿರುವುದು ಸರಿಯಲ್ಲ ಎಂದು ನನಗೆ ಟಿಕೆಟ್ ತಪ್ಪಿಸಿದ್ದಾರೆ. ಎಸ್ಸಿಗಳು ಅವರ ಮೀಸಲು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ನಿಯಮ. ಆ ನಿಯಮ ಉಲ್ಲಂಘಿಸಿ ನಾನು ಸಾಮಾನ್ಯ ಕ್ಷೇತ್ರದಲ್ಲಿ ಟಿಕೆಟ್ ಕೇಳಿದ್ದು ನನ್ನದು ತಪ್ಪಿದೆ ಎಂದು ಹೇಳಿದರು. 

ಆದರೆ ಈ ಬಾರಿ ಟಿಕೆಟ್ ತಪ್ಪಲು ಯಡಿಯೂರಪ್ಪ, ಅವರ ಮಗನೇ ನೇರ ಕಾರಣ ಎಂದು ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

ಹಾರನಕಣಿವೆ ರಂಗನಾಥಸ್ವಾಮಿ ದೇಗುಲದ ಬಳಿ ಸಭೆ ನಡೆಸಿದ ಬಳಿಕ ಅಲ್ಲಿಂದ ಹೊಸದುರ್ಗ ನಗರದ ಟಿ.ಬಿ.ವೃತ್ತದ ವರೆಗೂ ಬೃಹತ್ ರೋಡ್ ಶೋ ನಡೆಸಿದರು. ನೆರೆದಿದ್ದ ಸಾವಿರಾರು ಬೆಂಬಲಿಗರು ಗೂಳಿಹಟ್ಟಿ ಪರ ಜೈ ಕಾರ ಕೂಗಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

Similar News