ಈಶ್ವರಪ್ಪ ರಾಜಕೀಯ ನಿವೃತ್ತಿಗೆ ಅವರ ನಿಯಂತ್ರಣವಿಲ್ಲದ ನಾಲಿಗೆ ಕಾರಣ: MLC ಆಯನೂರು ಮಂಜುನಾಥ್

Update: 2023-04-12 15:51 GMT

ಶಿವಮೊಗ್ಗ, ಎ.12:ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಪಡೆದುಕೊಳ್ಳಲು ಅವರ ನಾಲಿಗೆ ಮತ್ತು ಪುತ್ರ ವ್ಯಾಮೋಹ ಕಾರಣ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆ.ಎಸ್ ಈಶ್ವರಪ್ಪನವರು ತಮ್ಮ ನಾಲಿಗೆಯನ್ನು ಮತ್ತು ಪುತ್ರ ವ್ಯಾಮೋಹವನ್ನು ನಿಯಂತ್ರಣದಲ್ಲಿಟ್ಟಿಕೊಂಡಿದ್ದಿದ್ದರೆ ಅವರು ಇಂದು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.

ಸುಧೀರ್ಘ ಕಾಲ ರಾಜಕಾರಣದಲ್ಲಿದ್ದ ಈಶ್ವರಪ್ಪನವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವುದು ಶಿವಮೊಗ್ಗ ಜಿಲ್ಲೆಯ ರಾಜಕಾರಣದ ಮಗ್ಗಲು ಬದಲಾದಂತಾಗಿದೆ. ಈಶ್ವರಪ್ಪ ಅವರಿಗೆ ವ್ಯಕ್ತಿಗತವಾಗಿ ಶತ್ರುಗಳಿಲ್ಲ. ಎಲ್ಲರೊಂದಿಗೆ ಸ್ನೇಹಸ್ವಭಾವದೊಂದಿಗೆ ಇದ್ದರು. ಅವರ ವಿರುದ್ಧ ರಾಜಕೀಯ ನಿಲುವು ಏನೇ ಇದ್ದರೂ ಅವರು ನನಗೆ ಆತ್ಮೀಯರೇ ಆಗಿದ್ದರು. ಅವರ ಈ ರೀತಿಯ ನಿರ್ಗಮನ ಆಘಾತಕಾರಿಯಾದದ್ದು ಎಂದು  ಹೇಳಿದರು.

ಈಶ್ವರಪ್ಪನವರು ತಮ್ಮ ನಿಯಂತ್ರಣವಿಲ್ಲದ ನಾಲಿಗೆ, ಆತ್ಯುತ್ತಮ ಕೆಲಸ ಮಾಡಿದ್ದರೂ ಪುತ್ರ ವ್ಯಾಮೋಹದಿಂದ ಹೊರಬಂದಿದ್ದರೆ, ಅವರು ನಾಯಕತ್ವಕ್ಕೆ ಕಪ್ಪುಚುಕ್ಕೆ ಇರುತ್ತಿರಲಿಲ್ಲ. ತನ್ನದಲ್ಲದ ತಪ್ಪಿಗಾಗಿ ಈ ರೀತಿ ನಿರ್ಗಮಿಸುತ್ತಿದ್ದಾರೆ. ಮಗನನ್ನು ಮತ್ತು ತಮ್ಮನಾಲಿಗೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಿದ್ದರೆ ಅತ್ಯಂತ ಗೌರವಯುತ ನಾಯಕರಾಗುತ್ತಿದ್ದರು. ಇಂತಹ ಈಶ್ವರಪ್ಪ ಅವರು ಕಣದಿಂದ ಹಿಂದೆ ಸರಿದ ಮಾತ್ರಕ್ಕೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನಿನ್ನೂ ಸ್ಪರ್ಧಾಕಾಂಕ್ಷಿಯಾಗಿದ್ದೇನೆ. ಒಂದೆರೆಡು ದಿನಗಳಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ನಡೆಸಲಿದ್ದೇನೆ ಎನ್ನುವುದನ್ನು ಸ್ಪಷ್ಟಪಡಿಸಲಿದ್ದೇನೆ ಎಂದು ಆಯನೂರು ಮಂಜುನಾಥ್ ತಾವಿನ್ನೂ ಸ್ಪರ್ಧೆಯಲ್ಲಿದ್ದೇನೆ ಎಂದು ಘೋಷಿಸಿದರು.

ವಿಧಾನಪರಿಷತ್ತಿನಲ್ಲಿ ಕಾರ್ಮಿಕರು, ಶಿಕ್ಷಕರು, ಪದವೀಧರರು,ಪೌರಕಾರ್ಮಿಕರ, ಕೂಲಿ ಕಾರ್ಮಿಕರ ಪರವಾಗಿ ಪ್ರಬಲವಾಗಿ ವಾದ ಮಂಡಿಸಲು, ಕಾನೂನು ರಚನೆ ಮೂಲಕ ಫಲಪ್ರದವಾಗಿ ಕೆಲಸ ಮಾಡಲು ವಿಧಾನಸಭೆ ಸೂಕ್ತ. ಈ ಕಾರಣ ತಾವು ವಿಧಾನಸಭೆ ಹೋಗಲು ನಿರ್ಧರಿಸಿದ್ದೇನೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಯಾವ ಪಕ್ಷಗಳೂ ಇದುವರೆಗೂ ಟಿಕೆಟ್ ಘೋಷಿಸಿಲ್ಲ. ತಮ್ಮ ಸ್ಪರ್ಧೆ ನಿಶ್ಚಿತ, ಆದರೆ ಯಾವ ಪಕ್ಷದಿಂದ ಎಂಬುದನ್ನು ಸದ್ಯದಲ್ಲೆ ಹೇಳಿಲಿದ್ದೇನೆ ಎಂದರು.

Similar News