ಯಾವುದೋ ಕೆಟ್ಟ ಘಳಿಗೆಯಲ್ಲಿ ನಾವಿಬ್ಬರೂ ಬೇರೆ ಬೇರೆ ಆಗಿದ್ದೇವೆ...: ಪಕ್ಷ ಬಿಡದಂತೆ ಸವದಿಗೆ ರಮೇಶ್ ಜಾರಕಿಹೊಳಿ ಮನವಿ

Update: 2023-04-13 16:14 GMT

ಬೆಳಗಾವಿ:  "ನಾನು ಮತ್ತು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ನಿಜವಾಗಿ ಒಳ್ಳೆಯ ಗೆಳೆಯರು. ಯಾವುದೋ ಕೆಟ್ಟ ಘಳಿಗೆಯಲ್ಲಿ ಬೇರೆಬೇರೆ ಆಗಿದ್ದೇವೆ. ನಾನು ಮೊದಲ ಕಾಂಗ್ರೆಸ್‌ನಲ್ಲಿದ್ದೆ. ಅವನು ಬಿಜೆಪಿಯಲ್ಲಿದ್ದ. ಈಗ ಇಬ್ಬರೂ ಒಂದೇ ಕಡೆ ಇದ್ದೇವೆ. ಕಾಂಗ್ರೆಸ್‌ ಬಗ್ಗೆ ನನಗೆ ಗೊತ್ತು. ಅದು ಮೋಸದ ಪಕ್ಷ. ಬಿಜೆಪಿ ಬಿಟ್ಟು ಅಂಥ ಪಕ್ಷ ಸೇರಬಾರದು'' ಎಂದು ಶಾಸಕ ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ. 

ಗೋಕಾಕ್ ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಾವಿಬ್ಬರೂ ಸೇರಿ ಈ ಬಾರಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸೋಣ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಕುಳಿತು ಮಾತಾಡೋಣ. ಆದರೆ, ಪಕ್ಷ ಬಿಟ್ಟು ಹೋಗಬೇಡ’ ಎಂದು ಸಲಹೆ ನೀಡಿದರು. 

''ಮಹೇಶ ಕುಮಠಳ್ಳಿ ಟಿಕೆಟ್‌ ಕೊಡಿಸುವ ವಿಚಾರದಲ್ಲಿ ನನ್ನ ಧರ್ಮ ನಾನು ಪಾಲಿಸಿದ್ದೇನೆ. ಆದರೆ, ಲಕ್ಷ್ಮಣ ಸವದಿಯ ಸ್ಥಾನ ಕಸಿದುಕೊಂಡಿಲ್ಲ. ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ಆ ಪಕ್ಷದ ಅಭ್ಯರ್ಥಿ ಗೆಲ್ಲಿಸುವುದು ನನ್ನ ಗುರಿಯಾಗಿತ್ತು. ಗೆಲ್ಲಿಸಿದ್ದೆ. ಈಗ ನೀನು ವಿಧಾನ ಪರಿಷತ್‌ ಸದಸ್ಯ. ಇನ್ನೂ ಐದು ವರ್ಷ ಅಧಿಕಾರ ಅವಧಿ ಇದೆ. ವಿಚಾರ ಮಾಡು'' ಎಂದು ಜಾರಕಿಹೊಳಿ ಹೇಳಿದರು.

Similar News