×
Ad

ಅಶೋಕ್, ಸೋಮಣ್ಣರ ರಾಜಕೀಯ ಭವಿಷ್ಯ ಮುಗಿಸಲು ಆರೆಸ್ಸೆಸ್ ತಂತ್ರ: ಎಚ್.ವಿಶ್ವನಾಥ್ ಆರೋಪ

''ಒಂದು ವೇಳೆ ಇವರಿಬ್ಬರು ಎರಡು ಕಡೆ ಸೋತರೆ...''

Update: 2023-04-15 19:53 IST

ಮೈಸೂರು,ಎ.15: ಬಿಜೆಪಿಯಲ್ಲಿರುವ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಪ್ರಭಾವಿ ನಾಯಕರಾದ ಕಂದಾಯ ಸಚಿವ ಆರ್.ಅಶೋಕ್ ಮತ್ತು ವಸತಿ ಸಚಿವ ವಿ.ಸೋಮಣ್ಣ ಅವರ ರಾಜಕೀಯ ಭವಿಷ್ಯ ಮುಗಿಸಲು ಆರೆಸ್ಸೆಸ್ ತಂತ್ರಗಾರಿಕೆ ನಡೆಸಿದೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಆರೋಪಿಸಿದ್ದಾರೆ. 

ಮೈಸೂರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸೋಮಣ್ಣ ಮತ್ತು ಅಶೋಕ್ ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸುವಷ್ಟು ಶಕ್ತಿ ಹೊಂದಿರುವ ತಮ್ಮಗಳ ಸಮುದಾಯದ ಪ್ರಭಾವಿ ನಾಯಕರು. ಇವರುಗಳ ರಾಜಕೀಯ ಭವಿಷ್ಯ ಮುಗಿಸಲು ಆರೆಸ್ಸೆಸ್ ವ್ಯವಸ್ಥಿತ ತಂತ್ರಗಾರಿಕೆ ನಡೆಸಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಮತ್ತು ಪ್ರಭಾವಿ ನಾಯಕರಾದ ಡಿ.ಕೆ.ಶಿವಕುಮಾರ್ ಎದುರು ಅಶೋಕ್ ಅವರನ್ನು ಮತ್ತು ಸಿದ್ದರಾಮಯ್ಯ ಎದುರು ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ ಎಂದರು.

ಈ ಚುನಾವಣೆಯಲ್ಲಿ ಇಬ್ಬರು ನಾಯಕರು ಒಂದು ಕಡೆ ಸೋತರೂ ಮುಖ್ಯಮಂತ್ರಿ ಹುದ್ದೆಯನ್ನು ತಪ್ಪಿಸಬಹುದು. ಒಂದು ವೇಳೆ ಎರಡು ಕಡೆ ಸೋತರೆ ಇಬ್ಬರ ರಾಜಕೀಯ ಭವಿಷ್ಯವನ್ನೂ ಮುಗಿಸಬಹುದು ಎಂಬುದು ಆರೆಸ್ಸೆಸ್ ಲೆಕ್ಕಾಚಾರ ಎಂದು ವಿಶ್ವನಾಥ್ ಆರೋಪಿಸಿದರು. 

ಇದರೊಂದಿಗೆ ಒಂದೆಡೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಮನ್ನಣೆ ನೀಡುತ್ತಿದೆ ಎಂತಲೂ ಮತದಾರರ ಎದುರು ಹೇಳಬಹುದು. ಇದು ಆರೆಸ್ಸೆಸ್ ತನ್ನ ಗುಪ್ತ ಅಜೆಂಡಾ ರೂಪಿಸಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ದ್ರೋಹ ಮಾಡುತ್ತಿದೆ. ಈ ಬಗ್ಗೆ ಸಮುದಾಯದ ಮುಖಂಡರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದರು. 

Similar News