ಟಿಕೆಟ್ ವಿಳಂಬ ಹಿನ್ನೆಲೆ: ಕೊಪ್ಪಳದಲ್ಲಿ ಸಂಸದ ಸಂಗಣ್ಣರಿಂದ ಸ್ವಾಭಿಮಾನಿ ಸಭೆ
ಫೋನ್ ಕರೆ ಮಾಡಿ 'ದುಡುಕಬೇಡಿ, ಕಾಯಿರಿ' ಎಂದ ಪಕ್ಷದ ರಾಜ್ಯ ಮುಖಂಡರು
Update: 2023-04-16 13:29 IST
ಕೊಪ್ಪಳ, ಎ.16: ಬಿಜೆಪಿಯ ಟಿಕೆಟ್ ಹಂಚಿಕೆಯ ಎರಡನೇ ಪಟ್ಟಿ ಬಿಡುಗಡೆಗೊಂಡಿದ್ದರೂ ಟಿಕೆಟ್ ಘೋಷಣೆಯಾಗದೇ ಇರುವುದರಿಂದ ಕೊಪ್ಪಳ ಸಂಸದ ಸಂಗಣ್ಣ ಕರಡಿ ಪಕ್ಷ ತೊರೆಯಲು ಮುಂದಾಗಿದ್ದಾರೆ.
ಈ ನಡುವೆ ಟಿಕೆಟ್ ನೀಡಲು ವಿಳಂಬ ಹಿನ್ನೆಲೆಯಲ್ಲಿ ಸಂಗಣ್ಣ ಸಮ್ಮುಖದಲ್ಲಿ ಕೊಪ್ಪಳ ನಗರದ ಸತ್ಯಧ್ಯಾನಪುರದಲ್ಲಿ ಇಂದು ಸ್ವಾಭಿಮಾನಿ ಸಭೆ ನಡೆಯಿತು.
ಸಭೆ ನಡೆಯುತ್ತಿದ್ದಂತೆ ಸಂಗಣ್ಣರಿಗೆ ಪಕ್ಷದ ರಾಜ್ಯ ಮುಖಂಡರು ಫೋನ್ ಕರೆ ಮಾಡಿದ್ದು, ದುಡುಕಿನ ನಿರ್ಧಾರ ಬೇಡ, ಟಿಕೆಟ್ ಕೊಡಿಸುವ ಪ್ರಯತ್ನ ಮಾಡ್ತೀವಿ. ಇವತ್ತು ರಾತ್ರಿಯವರೆಗೆ ಕಾಯಿರಿ ಎಂದು ಹೇಳಿದ್ದರೆನ್ನಲಾಗಿದೆ.
ಈ ನಡುವೆ ಸಭೆಯಲ್ಲಿ ಸೇರಿದ್ದ ಅಭಿಮಾನಿಗಳು ಸಂಗಣ್ಣನರ ಮಾತೃ ಪಕ್ಷ ಜೆಡಿಎಸ್ ಗೆ ಸೇರಬೇಕು ಎಂದು ಘೋಷಣೆ ಕೂಗಿದರು.