×
Ad

ಮೀಸಲಾತಿ ಹೆಚ್ಚಳ ದಿಟ್ಟ ನಿರ್ಧಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2023-04-16 22:57 IST

ರಾಯಚೂರು: ಪರಿಶಿಷ್ಟರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡುವ ಮೂಲಕ ಅವರಿಗೆ ಸ್ವಾಭಿಮಾನಿ ಬದುಕು ಕಲ್ಪಿಸಬೇಕೆಂಬ ಅಂಬೇಡ್ಕರ್ ಅವರ ದೂರದೃಷ್ಟಿಯಿಂದ ಇದು ಸಾಧ್ಯವಾಗಿದೆ. ಈ ಜನಾಂಗಕ್ಕೆ ನ್ಯಾಯ ನೀಡಬೇಕು ಎಂದು ಮೀಸಲಾತಿ ಹೆಚ್ಚಳ ಮಾಡುವ ದಿಟ್ಟ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  

ರವಿವಾರ ರಾಯಚೂರಿನಲ್ಲಿ ಪರಿಶಿಷ್ಟ ಸಮುದಾಯದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಸರಕಾರಗಳು ಈ ನಿರ್ಧಾರ ಯಾಕೆ ಮಾಡಲಿಲ್ಲ? ಸಾಮಾಜಿಕ ನ್ಯಾಯವನ್ನು ಕೇವಲ ಭಾಷಣದಲ್ಲಿ ಹೇಳಿದರು. ಪರಿಶಿಷ್ಟರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು. 

ಭಾರತದ ಜನಸಂಖ್ಯೆ 130 ಕೋಟಿ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಕರ್ನಾಟಕದಲ್ಲಿ  ಆರು ಜಾತಿಗಳು ಎಸ್ಸಿಗೆ ಸೇರಿದ್ದವು. ಈಗ 103 ಜಾತಿಗಳಿವೆ. ಜನಸಂಖ್ಯೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮೀಸಲಾತಿ ಪ್ರಮಾಣ ಹೆಚ್ಚಾಗಿರಲಿಲ್ಲ. ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿದರು. ಆದರೆ ಮೀಸಲಾತಿ ಹೆಚ್ಚಿಸುವ ಪ್ರಯತ್ನ ಮಾಡಲಿಲ್ಲ. ಸಂವಿಧಾನದಲ್ಲಿ  ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸಲು ಅಂಬೇಡ್ಕರ್ ಹೇಳಿದ್ದು, ಆ ಕೆಲಸವಾಗಿಲ್ಲ ಎಂದು ಅವರು ಹೇಳಿದರು.

ಇಂದಿರಾ ಸಹಾನಿ ಪ್ರಕರಣದ ತೀರ್ಪನ್ನು ನ್ಯಾ.ನಾಗಮೋಹನ್ ದಾಸ್ ಸಮಿತಿ ಎತ್ತಿ ಹಿಡಿದು ಶಿಫಾರಸ್ಸು ಮಾಡಿದೆ ನ್ಯಾ.ಸುಭಾಷ್ ಅಡಿ ನೇತೃತ್ವದ ಸಮಿತಿ ತನ್ನ ನಿರ್ಧಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಸರಕಾರ ಮೀಸಲಾತಿ ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಶಿಕ್ಷಣ, ಉದ್ಯೋಗ ಇಲ್ಲದಿದ್ದರೆ ಸಾಮಾಜಿಕವಾಗಿ ಗುಲಾಮರಾಗಿ ಬದುಕುವ ರೀತಿಗೆ ಮುಕ್ತಿ ತರಬೇಕು. ಮೀಸಲಾತಿ ಮುಟ್ಟಲು ಸಾಧ್ಯವಿಲ್ಲ. ರಾಜಕೀಯ ಜಾಗೃತಿ ಅಗತ್ಯ. ಬಡತನದಲ್ಲಿ ಹುಟ್ಟಿದವರು ಬಡತನದಲ್ಲಿಯೆ ಸಾಯಬೇಕೆಂಬ ಕಾನೂನಿಲ್ಲ. ಅವರೂ ಮುಂದೆ ಬಂದು ಸಬಲರಾಗಬೇಕು. ಬಡತನ ಮುಕ್ತ ಬದುಕು, ಸ್ವಾಭಿಮಾನದ ಬದುಕು ಬದುಕಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಹಿಂದುಳಿದ ಸಮುದಾಯ ಜಾಗೃತವಾಗಿದೆ, ನಮ್ಮವರು ಯಾರು? ಹೋರಾಟಕ್ಕೆ ಯಾರು ಬೆಲೆ ಕೊಡುತ್ತಾರೆ? ನಮ್ಮ ಭಾವನೆಗಳಿಗೆ ಯಾರು ಸ್ಪಂದಿಸುತ್ತಾರೆ? ನಮ್ಮ ಧ್ವನಿಯನ್ನು ಯಾರು ಕೇಳುತ್ತಾರೆ? ಯಾರು ನಮ್ಮ ಪರವಾಗಿ ಸಂಕಷ್ಟದಲ್ಲಿ ನಿಲ್ಲುತ್ತಾರೆ, ರಕ್ಷಣೆಯನ್ನು ಕೊಡುತ್ತಾರೆಯೊ ಅವರಿಗೆ ಮತ ನೀಡಬೇಕು ಎಂದು ಅವರು ತಿಳಿಸಿದರು.

ಅಭಿವೃದ್ದಿ, ಶಿಕ್ಷಣ, ಉದ್ಯೋಗದ ನಮ್ಮ ಹಕ್ಕುಗಳನ್ನ ಯಾರು ಕೊಡುತ್ತಾರೊ ಅವರೇ ನಮ್ಮವರು ಎಂಬ ಜಾಗೃತಿ ಮೂಡಬೇಕು. ಇನ್ನು ಮುಂದೆ ಯಾರು ನಮ್ಮ ಪರವಾಗಿ ನಿಲ್ಲುತ್ತಾರೆ ಅವರಿಗೆ ನಮ್ಮ ಮತ ಎಂಬ ತೀರ್ಮಾನ ಜನ ಮಾಡಬೇಕು. ಸಮಾಜದಲ್ಲಿ ಬಹಳಷ್ಟು ಬದಲಾವಣೆ ಆಗುತ್ತಿದೆ, ಯುವಕರಲ್ಲಿ  ಜಾಗೃತಿ ಮೂಡಿದೆ ಎಂದು ಅವರು ಹೇಳಿದರು. ಸಮಾರಂಭದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.
 

Similar News