×
Ad

ಕುಟುಂಬ ಸದಸ್ಯರಿಗೆ ಟಿಕೆಟ್‌: ಬಿಜೆಪಿಯದ್ದು ಹಲಾಲುಟೋಪಿ ರಾಜಕಾರಣ ಎಂದ ಜೆಡಿಎಸ್

Update: 2023-04-18 16:26 IST

ಬೆಂಗಳೂರು:  'ಗೋಸುಂಬೆ ರಾಜಕಾರಣದ ಶಿಖರಕ್ಕೇರಿ, ಜನತೆಗೆ ಮಂಕುಬೂದಿ ಎರಚುವ ಬಿಜೆಪಿ ಪಕ್ಷವು ಬರೀ ಅಪಪ್ರಚಾರ ಮಾಡುವುದರಲ್ಲಿ ಸೈ ಎನಿಸಿಕೊಳ್ಳುತ್ತದೆ. ಕುಟುಂಬ ರಾಜಕಾರಣ ಅಂತೆಲ್ಲ ಕತೆ ಹೇಳುತ್ತಾ, ತಾನು ಮಾತ್ರ ಕುಟುಂಬ ಸದಸ್ಯರಿಗೆ ಟಿಕೆಟ್ ಘೋಷಣೆ ಮಾಡಿ ಠೇಂಕರಿಸುತ್ತದೆ. ಇಂತಹ ನಾಚಿಕೆಗೆಟ್ಟ ರಾಜಕಾರಣ ಹೇಸಿಗೆ ತರಿಸುವಂತದ್ದು' ಎಂದು ಜೆಡಿಎಸ್ ಕಿಡಿಕಾರಿದೆ. 

ಮಂಗಳವಾರ ಟ್ವೀಟ್ ಮಾಡಿರುವ @JanataDal_S,  ''ಜೆಡಿಎಸ್ ಪಕ್ಷವು ಮಾತು ಕೊಟ್ಟಂತೆ ಹಾಸನದ ಟಿಕೆಟ್ ಅನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಸ್ವರೂಪ್ ಅವರಿಗೆ ನೀಡಿದೆ. ಮಾತು ತಪ್ಪದೇ ಬದ್ಧತೆ ತೋರುವುದು ನಮ್ಮಿಂದ ಮಾತ್ರ ಸಾಧ್ಯ. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಮಗ ಕಟ್ಟಾ ಜಗದೀಶ್ ಗೆ ಟಿಕೆಟ್ ಘೋಷಿಸಿರುವ ಬಿಜೆಪಿಗೆ ಕುಟುಂಬ ರಾಜಕಾರಣ ಎಂದು ಮಾತನಾಡಲು ಯಾವ ನೈತಿಕತೆ ಇದೆ?'' ಎಂದು ಪ್ರಶ್ನೆ ಮಾಡಿದೆ. 

''ನಿನ್ನೆ ಬಿಡುಗಡೆಯಾದ ಬಿಜೆಪಿಯ ಮೂರನೇ ಪಟ್ಟಿಯಲ್ಲಿ ಸಂಸದ ಕರಡಿ ಸಂಗಣ್ಣನವರ ಹಿರಿ ಸೊಸೆ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿಯವರ ಪತ್ನಿಗೂ ಟಿಕೆಟ್ ನೀಡಲಾಗಿದೆ. ಇವರೆಲ್ಲರ ನಡುವೆ ಮೋಸಗೊಂಡವರು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪನವರು,‌ ಪಾಪ! ಮಾತಿಗೂ ಕೃತಿಗೂ ಸಂಬಂಧವೇ ಇಲ್ಲದ ಹಲಾಲುಟೋಪಿ ರಾಜಕಾರಣ ಬಿಜೆಪಿಯದ್ದು'' ಎಂದು ಜೆಡಿಎಸ್ ಟೀಕಿಸಿದೆ. 

Similar News