ವಿಧಾನಸಭಾ ಚುನಾವಣೆ: 3,600ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ 5,102 ನಾಮಪತ್ರ ಸಲ್ಲಿಕೆ
ಇಂದು ನಾಮಪತ್ರ ಪರಿಶೀಲನೆ | ಎ.24ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ
ಬೆಂಗಳೂರು, ಎ. 21: ವಿಧಾನಸಭೆ ಚುನಾವಣೆ ಸ್ಪರ್ಧಿಸಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸಹಿತ ದೊಡ್ಡ ಸಂಖ್ಯೆಯ ಪಕ್ಷೇತರರು ಸೇರಿದಂತೆ ಒಟ್ಟು 3,632 ಮಂದಿಯಿಂದ ಒಟ್ಟು 5,102 ನಾಮಪತ್ರ ಸಲ್ಲಿಕೆಯಾಗಿದ್ದು, ನಾಳೆ(ಎ.21) ನಾಮಪತ್ರ ಪರಿಶೀಲನೆ ನಡೆಯಲಿದೆ.
ನಾಮಪತ್ರ ಸಲ್ಲಿಕೆ ಕೊನೆಯದಿನವಾಗಿದ್ದ ಹಿನ್ನಲೆಯಲ್ಲಿ ಶುಕ್ರವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ(ಯಮಕನಮರಡಿ), ಸಂಸದ ಡಿ.ಕೆ.ಸುರೇಶ್(ಕನಕಪುರ), ಸಚಿವೆ ಶಶಿಕಲಾ ಜೊಲ್ಲೆ(ನಿಪ್ಪಾಣಿ). ವಿಪಕ್ಷ ಉಪನಾಯಕ ಯು.ಟಿ.ಖಾದರ್(ಮಂಗಳೂರು), ಬಿಜೆಪಿಯ ಕಟ್ಟಾ ಜಗದೀಶ್(ಹೆಬ್ಬಾಳ) ಹಾಗೂ ಕಾಂಗ್ರೆಸ್ನ ಎ.ಸಿ.ಶ್ರೀನಿವಾಸ್(ಪುಲಕೇಶಿ ನಗರ) ಸೇರಿದಂತೆ ಘಟಾನುಘಟಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಬೆಂಗಳೂರು ನಗರದ ಒಟ್ಟು 28 ಕ್ಷೇತ್ರಗಳಲ್ಲಿ ಒಟ್ಟು 247 ಮಂದಿ ಅಭ್ಯರ್ಥಿಗಳಿಂದ ಒಟ್ಟು 278 ನಾಮಪತ್ರಗಳು ಸಲ್ಲಿಕೆಯಾಗಿವೆ. 304 ಮಂದಿ ಮಹಿಳಾ ಅಭ್ಯರ್ಥಿಗಳಿಂದ 391 ಹಾಗೂ 3,632 ಮಂದಿ ಪುರುಷ ಅಭ್ಯರ್ಥಿಗಳಿಂದ 5,102 ನಾಮಪತ್ರಗಳು ಸಲ್ಲಿಕೆಯಾಗಿವೆ.