ಸುಡಾನ್ ನಲ್ಲಿ ಹಕ್ಕಿಪಿಕ್ಕಿ ಜನಾಂಗ ನರಳುತ್ತಿದೆ, ಪ್ರಧಾನಿ ಮೋದಿ ಭರವಸೆಗಳಲ್ಲಿ ಕಾಲಹರಣ: ಸಿದ್ದರಾಮಯ್ಯ
ಬೆಂಗಳೂರು, ಎ.22: 'ನಮಗೆ ತಿನ್ನುವುದಕ್ಕೆ ಏನೂ ಇಲ್ಲ ನಿಮಗೆ ಏನು ಮಾಡಲಿಕ್ಕೆ ಸಾಧ್ಯ? ನೀವು ಇರುವ ಸ್ಥಳದಲ್ಲಿಯೇ ಬಾಗಿಲು ಹಾಕಿಕೊಂಡು ಇರಿ' -ಇದು ಕಷ್ಟದಲ್ಲಿರುವ ನಮ್ಮ ಕನ್ನಡಿಗರ ಗೋಳಿಗೆ ಸುಡಾನ್ನ ರಾಯಭಾರ ಕಚೇರಿಯ ಪ್ರತಿಕ್ರಿಯೆ. ಡಾ. ಜೈ ಶಂಕರ್ ಅವರೇ ಇದನ್ನು ಕೇಳಿ ಗಾಬರಿಯಾಗಲಿಲ್ಲವೇ?' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು,'ಸುಡಾನ್ನಲ್ಲಿ ಕಳೆದ 8-10 ದಿನಗಳಿಂದ ನಮ್ಮ ಕನ್ನಡಿಗ ಹಕ್ಕಿಪಿಕ್ಕಿ ಜನಾಂಗದವರು ತಿನ್ನಲು ಅನ್ನ ಇಲ್ಲದೆ, ಕುಡಿಯಲು ನೀರಿಲ್ಲದೆ ನರಳಾಡುತ್ತಿದ್ದಾರೆ. ನಮ್ಮ 'ವಿಶ್ವಗುರು' ಪ್ರಧಾನಿ ಮೋದಿ ಅವರು ಸೂಚನೆ -ಭರವಸೆಗಳಲ್ಲಿ ಕಾಲಕಳೆಯುತ್ತಿದ್ದಾರೆ. ಕನ್ನಡಿಗರ ರಕ್ಷಣೆಗೆ ಯಾರಿದ್ದಾರೆ?' ಎಂದು ಕೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಚುನಾವಣೆಯ ಬುರುಡೆ ಭಾಷಣಗಳ ಮಧ್ಯೆ ಬಿಡುವಾದರೆ ಸುಡಾನ್ನಲ್ಲಿ ಕಷ್ಟದಲ್ಲಿರುವ ಕನ್ನಡಿಗರ ಕಡೆ ಗಮನ ಕೊಡಿ. ಪ್ರಧಾನಿ ಮೋದಿ ಅವರಿಗೆ ಈಶ್ವರಪ್ಪನವರಿಗೆ ಪೋನ್ ಮಾಡಲು ಇರುವಷ್ಟು ಪುರುಸೊತ್ತು ಕನ್ನಡಿಗರ ರಕ್ಷಣೆಗೆ ಇಲ್ಲವೇ? ಎಂದು ಕೇಳಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.