ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂದು ನಾನು ಹೇಳುವುದಿಲ್ಲ: ಕೆ.ಎಸ್. ಈಶ್ವರಪ್ಪ

Update: 2023-04-22 18:35 GMT

ಶಿವಮೊಗ್ಗ, ಎ.22: ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂದು ನಾನು ಹೇಳುವುದಿಲ್ಲ. ಬಿಜೆಪಿ ಮೂಲ ಸಿದ್ಧಾಂತ ಉಳಿದಿಲ್ಲ. ಕೆಲವೊಂದು ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಪಕ್ಷಾಂತರವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗ ಪ್ರೆಸ್ಟ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, 'ಆಪರೇಷನ್ ಕಮಲದ ಮೂಲಕ ಅತೃಪ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿ ಸೆಳೆಯಿತು. ಬಿಜೆಪಿಯಲ್ಲಿ ಎಲ್ಲಾ ಸರಿಯಿದೆ ಎಂದು ನಾನು ಹೇಳುವುದಿಲ್ಲ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬುದು ನಮ್ಮ ಪಕ್ಷದ ಪದ್ಧತಿ. ಈ ಬಾರಿ ಬಹುತೇಕ ಅದನ್ನು ಪಾಲಿಸಲಾಗಿದೆ' ಎಂದರು.

'ಪಕ್ಷಾಂತರಿಗಳು ಅಧಿಕಾರಕ್ಕಾಗಿ ಬಿಜೆಪಿಗೆ ಬರುತ್ತಾರೆ. ಪಕ್ಷಾಂತರ ರಾಜಕಾರಣವನ್ನು ನಾನು ಒಪ್ಪುವುದಿಲ್ಲ. ನಾನು ಮುಸ್ಲಿಂ ಹಾಗು ಕ್ರಿಶ್ಚಿಯನ್ ವಿರೋದಿಯಲ್ಲ. ನನಗೆ ಟಿಕೇಟ್ ಸಿಗದಿದ್ದಾಗ ಬಹಳಷ್ಟು ಮುಸ್ಲಿಂ ಮಹಿಳೆಯರು ಮನೆಗೆ ಬಂದು ಕಣ್ಣೀರು ಹಾಕಿದ್ದಾರೆ' ಎಂದರು.

'ರಾಜಕಾರಣ ಕೆಲವರಿಗೆ ಫ್ಯಾನ್ಸಿಯಾಗಿದೆ ಎಂದ ಅವರು,ರಾಜಕಾರಣ ಬಡವರು, ಸಂಕಷ್ಟದಲ್ಲಿರುವವರಿಗೆ ನೆರವಾಗಲು ಇರುವ ಪ್ರಬಲ ಮಾಧ್ಯಮ. ನಾನು ಒಟ್ಟು 7 ಚುನಾವಣೆಯಲ್ಲಿ ಸ್ಪರ್ಧೆ ಮಾಡಿ 5 ಸಲ ಗೆದ್ದಿದ್ದು 2 ಸಲ ಸೋತಿದ್ದೇನೆ. ಸೋತಾಗಲೂ ನನಗೆ ಪಕ್ಷ ಸಾಕಷ್ಟು ಅವಕಾಶ ನೀಡಿದೆ' ಎಂದರು .

ರಾಜ್ಯದಲ್ಲಿ ಮೊನ್ನೆ ನಡೆದ ಘಟನೆ ನನ್ನ ಜೀವನದಲ್ಲಿ ಮರೆಯಲಾಗದ್ದು. ನಡ್ಡಾ, ಸಂತೋಷ್ ಮತ್ತು ಧರ್ಮೆಂದ್ರ ಪ್ರಧಾನ್ ಕರೆ ಮಾಡಿ ಚುನಾವಣೆ ರಾಜಕೀಯದಿಂದ ನಿವೃತ್ತಿ ಆಗಲು ಸೂಚಿಸಿದರು. ಅದನ್ನು ಒಪ್ಪಿ ನಿವೃತ್ತಿ ಪತ್ರ ಕಳುಹಿಸಿದೆ. ಆದರೆ ಜಗದೀಶ್ ಶೆಟ್ಟರ್ ಅವರ ಕಾಂಗ್ರೆಸ್ ಸೇರಿದ್ದು ನೋವುಂಟು ಮಾಡಿತು. ಅದಕ್ಕಾಗಿ ನಾನು ಅವರಿಗೆ ಬಹಿರಂಗವಾಗಿ  ಪತ್ರ ಬರೆದು ನನ್ನ ಅಭಿಪ್ರಾಯ ತಿಳಿಸಿದ್ದೆ.

ನನ್ನ ಈ ನಿಲುವು ಹಲವರಿಗೆ ಆಶ್ಚರ್ಯ ತರಿಸಿತು. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯೇ ಕರೆ ಮಾಡಿ ಅಭಿನಂದಿಸಿದ್ದರು. ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ಜೀವನ ಸಾರ್ಥಕವಾಯಿತು ಎಂದು ಅನಿಸಿತು. ಬಿಜೆಪಿಯಲ್ಲಿ ಜಾತಿ ರಾಜಕಾರಣ ಇಲ್ಲವೇ ಇಲ್ಲ. ನಾನು ಮೊದಲು ಸ್ಪರ್ಧೆ ಮಾಡಿದಾಗ ನನ್ನ ಸಮಾಜದ ಮತವಿದ್ದಿದ್ದು ಕೇವಲ 5 ರಿಂದ 6 ಸಾವಿರವಷ್ಟೇ ಇತ್ತು. ಬಿಜೆಪಿ ಬಿಟ್ಟು ಉಳಿದ ಪಕ್ಷದಲ್ಲಿ ಜಾತೀಯತೆ ಇದೆ ಎಂದರು.

ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಸುರ್ಜೆವಾಲಾಗೆ ಕಾನೂನಿನ ಬಗ್ಗೆ ತಿಳಿವಳಿಕೆ ಇಲ್ಲ ಅನಿಸುತ್ತಿದೆ. ಆತ್ಮಹತ್ಯೆ ಪ್ರಕರಣದಲ್ಲಿ ನನಗೆ ಕ್ಲೀನ್ ಚೀಟ್ ಸಿಕ್ಕಿದ್ದಕ್ಕೂ ಕಾಂಗ್ರೆಸ್ಸಿಗರು ಆಕ್ಷೇಪಿಸುತ್ತಾರೆ, ಹಾಗೆಯೇ ರಾಹುಲ್ ಗಾಂಧಿಗೆ ಕೋರ್ಟ್ ಶಿಕ್ಷೆ ನೀಡಿದ್ದಕ್ಕೂ ಪ್ರತಿಭಟನೆ ಮಾಡುತ್ತಾರೆ.  ಹಾಗಾದರೆ ಇವರಿಗೆ ಕೋರ್ಟ್ ತೀರ್ಪಿನ ಮೇಲೆ ನಂಬಿಕೆ ಇಲ್ಲವೇ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರ ಮೇಲೂ ಭ್ರಷ್ಟಾಚಾರದ ಆರೋಪವಿದೆ. ಶಿವಕುಮಾರ್ ಅವರು ಜಾಮೀನಿನ ಮೇಲಿದ್ದಾರೆ.  ಅವರಿಗೆ ನಮ್ಮ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದರು.

ಪಕ್ಷದ ಆಶಯಗಳಿಗೆ ವಿರುದ್ಧ ಮಾತನಾಡುವ ಆಯನೂರ್ ಮಂಜುನಾಥ್ ಜೊತೆ ಮಾತನಾಡುವ ಅಗತ್ಯ ಕಾಣಲಿಲ್ಲ.
ನಾನು ಮುಸ್ಲಿಂ ಹಾಗು ಕ್ರಿಶ್ಚಿಯನ್ ವಿರೋಧಿಯಲ್ಲ. ನಮ್ಮ ಮನೆಗೆ ಬರುವ ಯಾವುದೇ ಮುಸ್ಲಿಂ ವ್ಯಕ್ತಿಯನ್ನು ನಾನು ಕೆಟ್ಟದ್ದಾಗಿ ನಡೆದುಕೊಂಡಿಲ್ಲ. ಪಾಕಿಸ್ತಾನ್ ಜಿಂದಾಬಾದ್ ಹಿಂದೂಸ್ತಾನ್ ಮುರ್ದಾಬಾದ್ ಎಂದು ಘೋಷಣೆ ಕೂಗಿದರೆ ನಾನು ಸುಮ್ಮನಿರಬೇಕೆ? ರಾಷ್ಟೀಯ ವಿಚಾರಧಾರೆಗಳ ವಿರೋಧಿಸುವವರನ್ನು ನಾನು ವಿರೋಧಿಸುತ್ತೇನೆ ಎಂದರು.

ಶಿವಮೊಗ್ಗ ಕ್ಷೇತ್ರದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಶಿವಮೊಗ್ಗ ವಿಧಾನಸಭೆ ಕ್ಷೇತ್ರದಲ್ಲಿ  ಈ ಬಾರಿ ತ್ರಿಕೋನ ಸ್ಪರ್ಧೆ ಇದೆ. ಕಳೆದ ಚುನಾವಣೆಯಲ್ಲಿ  ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇತ್ತು. ಈ ಬಾರಿ ತ್ರಿಕೋನ ಸ್ಪರ್ಧೆ ಇದೆ. ಏಕೆಂದರೆ ಈ ಬಾರಿ ಜೆಡಿಎಸ್ ಗೆ ಇಬ್ಬರು ಸೇರ್ಪಡೆಯಾಗಿದ್ದಾರೆ ಎಂದರು.

ಜಾತಿ ಆಧಾರಿತ ಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಜಾತಿಯಾಧಾರದ ಮೇಲೆ ಸಿಎಂ ಆಗುವುದಿಲ್ಲ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಈ ಪರಿಸ್ಥಿತಿ ಇದೆ. ಬಿಜೆಪಿ ಮೂಲ ಸಿದ್ಧಾಂತ ಉಳಿದಿಲ್ಲ. ಕೆಲವೊಂದು ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಪೂರ್ಣ ಬಹುಮತ ಸಿಕ್ಕ ಬಂದರೆ ನಮ್ಮ ಚಿಂತನೆ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದರು.

ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ನಾಗರಾಜ್ ನೇರಿಗೆ ಇದ್ದರು.

Similar News